ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್‌ಶಿಪ್) ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟದ ವಿಚಾರದಲ್ಲಿ ರೈತಸಂಘದ ನಿಲುವೇ ನನ್ನ ನಿಲುವು. ಈ ಯೋಜನೆ ಕೈಬಿಡುವಂತೆ ಮುಖ್ಯಮಂತ್ರಿ ಬಳಿಗೆ ರೈತರ ನಿಯೋಗ ಕರೆದೊಯ್ದು ಒತ್ತಾಯಿಸಲಾಗುವುದು ಎಂದು ಮೇಲುಕೋಟೆ ಕ್ಷೇತ್ರ ಶಾಸಕರಾದ ರೈತಸಂಘ ನಾಯಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್‌ಶಿಪ್) ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟದ ವಿಚಾರದಲ್ಲಿ ರೈತಸಂಘದ ನಿಲುವೇ ನನ್ನ ನಿಲುವು. ಈ ಯೋಜನೆ ಕೈಬಿಡುವಂತೆ ಮುಖ್ಯಮಂತ್ರಿ ಬಳಿಗೆ ರೈತರ ನಿಯೋಗ ಕರೆದೊಯ್ದು ಒತ್ತಾಯಿಸಲಾಗುವುದು ಎಂದು ಮೇಲುಕೋಟೆ ಕ್ಷೇತ್ರ ಶಾಸಕರಾದ ರೈತಸಂಘ ನಾಯಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್‌ಶಿಪ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ರೈತರು ಹಲವಾರು ಬಾರಿ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ನಾವೂ ರೈತರ ನಿಯೋಗದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡುತ್ತೇವೆ. ಸರ್ಕಾರ ಪುನರ್ ಪರಿಶೀಲನೆ ಮಾಡಿ ಯೋಜನೆ ಕೈಬಿಡಬೇಕು. ಇಲ್ಲದಿದ್ದರೆ ರೈತಸಂಘ, ರೈತರ ಜೊತೆಯಲ್ಲಿ ನಿಂತು ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಿದೆ ಎಂದರು.

ಟೌನ್ ಶಿಪ್ ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಿರುವ 9600 ಎಕರೆ ಕೃಷಿ ಭೂಮಿಯನ್ನು ನಂಬಿ ನೂರಾರು ರೈತ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಅಭಿವೃದ್ಧಿ ಹೆಸರಿನಲ್ಲಿ ಮೂಲ ನಿವಾಸಿಗಳಾದ ರೈತರನ್ನು ಒಕ್ಕಲೆಬ್ಬಿಸಿ ಬೀದಿಗೆ ತಳ್ಳಿ, ಹೊಸಬರನ್ನು ಇಲ್ಲಿಗೆ ಕರೆತರುವುದರಲ್ಲಿ ಅರ್ಥವಿಲ್ಲ. ಅಂತಹ ಅಭಿವೃದ್ಧಿ ಬೇಕಾಗಿಲ್ಲ ಎಂದು ಹೇಳಿದರು.

ರೈತರು ಖುಷಿಯಾಗಿರಲು ಭೂಮಿ ಬೇಕು:

ಚೆನ್ನಾಗಿರುವ ರಸ್ತೆ, ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣವನ್ನು ಅಭಿವೃದ್ಧಿ ಎಂದು ಭಾವಿಸಲಾಗಿದೆ. ಆದರೆ, ಹಳ್ಳಿಗಳಲ್ಲಿ ಉಳುಮೆ ಮಾಡಿಕೊಂಡು ನೆಮ್ಮದಿಯಾಗಿ ಜೀವನ ನಡೆಸುವುದು ನಿಜವಾದ ಅಭಿವೃದ್ಧಿ. ಖುಷಿಯಾಗಿರಲು ಭೂಮಿ ಬೇಕಾಗಿದೆ. ಆದ್ದರಿಂದ ಸರ್ಕಾರ ಯೋಜನೆ ಕೈಬಿಟ್ಟು ರೈತರನ್ನು ಮತ್ತಷ್ಟು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಕೃಷಿಗೆ ಒತ್ತು ನೀಡಬೇಕು ಎಂದು ಹೇಳಿದರು.

ನೊಯಿಡಾದಲ್ಲಿ ರೈತರು ಜಮೀನು ಕೊಟ್ಟು ಕೋಟಿ ಕೋಟಿ‌ ಹಣ ಪರಿಹಾರ ಪಡೆದರು. ಆ ಹಣ ಖಾಲಿಯಾದ ಮೇಲೆ ಅದೇ ಕಂಪನಿಗಳ ಮುಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಬಿಡದಿ ಟೌನ್ ಶಿಪ್ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೂ ಬರುತ್ತದೆ. ಹಾಗಾಗಿ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟು ರೈತರ ಪರವಾಗಿ ನಿಲ್ಲಬೇಕು ಎಂದು ದರ್ಶನ್ ಪುಟ್ಟಣ್ಣಯ್ಯ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಕರ್ನಾಟಕ ಪ್ರಾಂತ ರೖತಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್, ರೈತ ಸಂಘದ ಪದಾಧಿಕಾರಿಗಳಾದ ಕೆ. ಮಲ್ಲಯ್ಯ, ಲಕ್ಷ್ಮೀನಾರಾಯಣ ರೆಡ್ಡಿ, ಎನ್.ಡಿ. ವಸಂತ್ ಕುಮಾರ್, ಗೋವಿಂದರಾಜು, ನೇತ್ರಾವತಿ, ರಾಮಯ್ಯ, ಕೆಂಪರಾಜು, ಚೀಲೂರು ಮುನಿರಾಜು, ಕುಮಾರಸ್ವಾಮಿ, ಕೃಷ್ಣಯ್ಯ, ಗೋಪಾಲ್, ಶ್ರೀಶೖೆಲಾ, ಮಹೇಶ್ ಪ್ರಭು, ವಸಂತ್ ಕುಮಾರ್, ಹೊಸಕೋಟೆ ಬಸವರಾಜು, ರಮ್ಯಾ ರಾಮಣ್ಣ, ಕನಕಪುರ ನಗಸಭೆ ಸದಸ್ಯ ಸ್ಟುಡಿಯೋ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.

ಬೈಕ್ ಮತ್ತು ಟ್ರ್ಯಾಕ್ಟರ್ ಗಳಲ್ಲಿ ಜಾಥಾ:

ಬಿಡದಿ ಟೌನ್‌ಶಿಪ್‌ ಯೋಜನೆಗಾಗಿ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಬೆಂಗಳೂರು ವಿಭಾಗದ ಮಂಡ್ಯ. ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳ ರೈತ ಸಂಘದ ಪದಾಧಿಕಾರಿಗಳು, ಪ್ರಗತಿಪರ ಸಂಘಟನೆಗಳ ಸಹಕಾರದೊಡನೆ ಬೈರಮಂಗಲ ಚಲೋ ನಡೆಸಿದರು.

ಬಿಡದಿ ಪಟ್ಟಣದ ಬಿಜಿಎಸ್ ವೃತ್ತದಿಂದ ಆರಂಭಗೊಂಡ ಬೈಕ್ ಮತ್ತು ಟ್ರ್ಯಾಕ್ಟರ್ ಗಳ ಜಾಥಾ ಬೈರಮಂಗಲ ಕ್ರಾಸ್ ಮೂಲಕ ಬೈರಮಂಗಲ ವೃತ್ತ ಆಗಮಿಸಿತು. ನೂರಾರು ರೈತರು ಜಾಥಾದಲ್ಲಿ ಭಾಗವಹಿಸಿ ಚಳವಳಿಗೆ ಶಕ್ತಿ ತುಂಬಿದರು.

ಬಾಕ್ಸ್‌...........

ಬೈರಮಂಗಲ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು

1.ಬಿಡದಿ ಟೌನ್‌ಶಿಪ್ ಯೋಜನೆಗೆ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 26 ಗ್ರಾಮಗಳ 9,640 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಸಮಾವೇಶ ಒಗ್ಗಟ್ಟಿನಿಂದ ವಿರೋಧ ವ್ಯಕ್ತಪಡಿಸಿತು. ಈ ಸಂಬಂಧ ನಡೆಸಿರುವ ಎಲ್ಲಾ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ರದ್ದುಪಡಿಸಬೇಕೆಂದು ಸಮಾವೇಶ ಆಗ್ರಹಿಸಿತು.

2. ರಾಜ್ಯ ಸರ್ಕಾರ ಈ ಭೂ-ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡದಿದ್ದಲ್ಲಿ, ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ರೈತರ ಭೂ- ರಕ್ಷಣಾ ಸಮಿತಿ ನೇತೃತ್ವದಲ್ಲಿ ತೀವ್ರ ತರದ ಹೋರಾಟವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

3. ರಾಜ್ಯದಲ್ಲಿ ಭೂ-ಬಳಕೆ ನೀತಿಯನ್ನು ರೂಪಿಸಬೇಕೆಂದು ಈ ಸಮಾವೇಶವು ಒತ್ತಾಯಿಸಿತು.

4. ಈಗಾಗಲೇ ಬೆಂಗಳೂರು ನಗರ ಮತ್ತು ಸುತ್ತ-ಮುತ್ತ ಟೌನ್‌ ಶಿಪ್ ಮತ್ತು ವಸತಿ ಯೋಜನೆಗಳಿಗೆ ಸ್ವಾಧೀನ ಪಡಿಸಿಕೊಳ್ಳಲಾದ ಭೂಮಿಯಲ್ಲಿ ನಿರ್ಮಾಣ ಮಾಡಿರುವ ನಿವೇಶನ ಮತ್ತು ಪ್ಲಾಟ್‌ಗಳ ಹಂಚಿಕೆಯ ಶ್ವೇತಪತ್ರವನ್ನು ಹೊರಡಿಸಬೇಕೆಂದು ಸರ್ಕಾರವನ್ನು ಸಮಾವೇಶವು ಆಗ್ರಹಿಸಿತು.

5. ಅಭಿವೃದ್ಧಿ ನೆಪದಲ್ಲಿ ಲಂಗುಲಗಾಮಿಲ್ಲದೆ ರಾಜ್ಯದ ಯವುದೇ ಭಾಗದಲ್ಲಿ ಭೂಮಿಯನ್ನು ಸ್ವಾಧೀನ ಪಡೆದುಕೊಳ್ಳಲು ಮುಂದಾದಲ್ಲಿ ಅದರ ವಿರುದ್ದ ಹೋರಾಟ ನಡೆಸಬೇಕೆಂದು ರೈತರಿಗೆ ಈ ಸಮಾವೇಶ ಕರೆ ನೀಡಿತು.

22ಕೆಆರ್ ಎಂಎನ್ 1,2.ಜೆಪಿಜಿ

1.ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದರು.

2.ರೈತರು ಬೈಕ್ ಮತ್ತು ಟ್ರ್ಯಾಕ್ಟರ್ ಜಾಥಾ ನಡೆಸಿದರು.