ಕ್ಷೇತ್ರದ ಅಭಿವೃದ್ಧಿಗೆ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುವೆ: ಶಾಸಕ ಶ್ರೀನಿವಾಸ ಮಾನೆ

| Published : May 17 2025, 02:56 AM IST

ಸಾರಾಂಶ

ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು 7ನೇ ವೇತನ ಆಯೋಗದ ಒಂದು ತಿಂಗಳ ಹೆಚ್ಚುವರಿ ಹಣವನ್ನು ನೀಡಲು ನೀಡಿದ್ದ ಕರೆಗೆ ತಾಲೂಕಿನಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಬಿಇಒ ಮತ್ತು ಇಒ ಖಾತೆಯಲ್ಲಿ ₹32 ಲಕ್ಷ ಸಂಗ್ರಹವಾಗಿದೆ. ಶಿಕ್ಷಣ ಇಲಾಖೆಯವರೂ ಕೈಜೋಡಿಸಿದರೆ ಒಂದು ಕೋಟಿ ರು. ಸಂಗ್ರಹವಾಗುವ ನಿರೀಕ್ಷೆಯಿದೆ.

ಹಾನಗಲ್ಲ: ದೇವರ ಕೃಪೆ, ಮತದಾರರ ಪ್ರೀತಿ, ವಿಶ್ವಾಸ ಹಾಗೂ ಸೇವೆಯ ನಂಬಿಕೆಯ ಕಾರಣದಿಂದ ನನಗೆ ಶಾಸಕನಾಗಿ ವಿಧಾನಸಭಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆಯಾದರೂ, ನನಗಿಂತ ಸಮರ್ಥರು ಇದ್ದಾಗ್ಯೂ, ನನಗೆ ಅದೃಷ್ಟ ಒಲಿದಿರುವ ಅವಕಾಶವನ್ನು ಬಳಸಿಕೊಂಡು ತಾಲೂಕಿನ ಅಭಿವೃದ್ಧಿಯಲ್ಲಿ ಅತ್ಯಂತ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಇಲ್ಲಿನ ಎಪಿಎಂಸಿ ಉಗ್ರಾಣದ ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ತಾಲೂಕಿನ ಸರ್ಕಾರಿ ನೌಕರರಿಗೆ ಸೇವಾ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಅರ್ಹತೆ ಇದ್ದರೂ ಸರ್ಕಾರಿ ಕೆಲಸ ಸಿಗುವುದು ಕೆಲವರಿಗೆ ಮಾತ್ರ. ಪ್ರತಿಭಾವಂತರು ನಾನಾ ಕಾರಣಗಳಿಂದ ಸರ್ಕಾರಿ ಕೆಲಸದಿಂದ ವಂಚಿತರಾಗುವರ ಸಂಖ್ಯೆ ಹೆಚ್ಚಿದೆ. ಸರ್ಕಾರಿ ಕೆಲಸದಲ್ಲಿ ಇರುವವರು ಅದೃಷ್ಟವಂತರು. ಹಾಗಾಗಿ ಅವಕಾಶ ಸೃಷ್ಟಿ ಮಾಡಿಕೊಂಡು ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಿ ಎಂದರು.

ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು 7ನೇ ವೇತನ ಆಯೋಗದ ಒಂದು ತಿಂಗಳ ಹೆಚ್ಚುವರಿ ಹಣವನ್ನು ನೀಡಲು ನೀಡಿದ್ದ ಕರೆಗೆ ತಾಲೂಕಿನಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಬಿಇಒ ಮತ್ತು ಇಒ ಖಾತೆಯಲ್ಲಿ ₹32 ಲಕ್ಷ ಸಂಗ್ರಹವಾಗಿದೆ. ಶಿಕ್ಷಣ ಇಲಾಖೆಯವರೂ ಕೈಜೋಡಿಸಿದರೆ ಒಂದು ಕೋಟಿ ರು. ಸಂಗ್ರಹವಾಗುವ ನಿರೀಕ್ಷೆಯಿದೆ.

ಬೇರೆ ಬೇರೆ ಕಂಪನಿಗಳು, ಉದ್ಯಮಿಗಳು, ದಾನಿಗಳ ಮನವೊಲಿಸಿ ಮತ್ತಷ್ಟು ಹಣ ಸಂಗ್ರಹಿಸಿದರೆ ಬಹಳ ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಬಹುದು. 30- 40 ವರ್ಷಗಳಿಂದ ಸರ್ಕಾರಿ ಮತ್ತು ಖಾಸಗಿ ಭೂಮಿಗಳಲ್ಲಿ ಮನೆ ಕಟ್ಟಿಕೊಂಡು ಮಾಲೀಕತ್ವ ಇರದೇ ಇರುವ ಕುಟುಂಬಗಳಿಗೆ ಹಕ್ಕುಪತ್ರ ದೊರಕಿಸುವ ಕೆಲಸ, ಗಾಂಧಿ ಜಯಂತಿ ಹಿನ್ನೆಲೆ ಪ್ರತಿ ವಾರ ನಡೆಸುತ್ತಿರುವ ಶ್ರಮದಾನ, ಸಮುದಾಯದ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸುತ್ತಿರುವ ತಾಲೂಕಿನ ಇಂಥ ಅನೇಕ ಸಂಕಲ್ಪಗಳು ಇಂದು ರಾಜ್ಯಮಟ್ಟದ ಕಾರ್ಯಕ್ರಮಗಳಾಗಿ ರೂಪುಗೊಂಡು ಫಲ ಕೊಡುತ್ತಿವೆ. ಇದಕ್ಕಿಂತ ಬೇರೆ ಖುಷಿ ಬೇರೊಂದಿಲ್ಲ. ನಮ್ಮ ತಾಲೂಕಿನ ಸರ್ಕಾರಿ ನೌಕರರ ಪಾತ್ರ ಇದರಲ್ಲಿ ಹಿರಿದಾಗಿದ್ದು, ಅಭಿನಂದನೆಗೆ ಅರ್ಹರಾಗಿದ್ದೀರಿ ಎಂದರು.

ಅಸಹಾಯಕರು, ನೊಂದವರ ನೆರವಿಗೆ ಧಾವಿಸಿದರೆ ಭಗವಂತನಿಗೂ ಪ್ರಿಯವಾಗಲಿದೆ. ಬಡವರು, ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವ ಶಕ್ತಿ ಅಧಿಕಾರಿಗಳಿಗಿದೆ. ಹಾಗಾಗಿ ಅವಕಾಶ ಸೃಷ್ಟಿ ಮಾಡಿಕೊಂಡು ನೆರವಿಗೆ ಧಾವಿಸಿ. ಸಾಮಾಜಿಕ ಬದ್ಧತೆ ಪ್ರದರ್ಶಿಸಿ ಎಂದರು.ತಹಸೀಲ್ದಾರ್ ರೇಣುಕಾ ಎಸ್., ತಾಪಂ ಇಒ ಪರಶುರಾಮ ಪೂಜಾರ ಸೇರಿದಂತೆ ಎಲ್ಲ ಇಲಾಖೆಗಳ ತಾಲೂಕಿನ ಮುಖ್ಯಸ್ಥರು, ಅಧಿಕಾರಿಗಳು, ನೌಕರರು ಇದ್ದರು. ಶಿವಾನಂದ ಕ್ಯಾಲಕೊಂಡ ನಿರೂಪಿಸಿ, ವಂದಿಸಿದರು.