ಸಾರಾಂಶ
ಶಿವಮೊಗ್ಗ : ಕಾಂತ್ರಾಜ್ ವರದಿ ಜಾರಿಗೆ ಮುಖ್ಯಮಂತ್ರಿಗಳು ತಮ್ಮ ಬದ್ಧತೆ ಪ್ರದರ್ಶನ ಮಾಡಬೇಕು ಎಂದು ಹಿಂದುಳಿದ ಜನಜಾಗೃತಿ ವೇದಿಕೆಯ ಅಧ್ಯಕ್ಷ ತೀ.ನ.ಶ್ರೀನಿವಾಸ್ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದಂತೆ ಸಾಮಾಜಿಕ ನ್ಯಾಯ ನೀಡುವ ಹಿನ್ನೆಲೆಯಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿತ್ತು. ಈಗಾಗಲೇ ಅದು ತನ್ನ ವರದಿಯನ್ನು ಕೂಡ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿಗಳು ಇದನ್ನು ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಆದರೆ ವಿನಾಕಾರಣ ಅದು ವಿಳಂಬವಾಗುತ್ತಿದೆ. ಸ್ಥಾಪಿತ ಹಿತಾಸಕ್ತಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದೇ ಕಾರಣವಾಗಿದೆ. ಕೆಲ ಜಾತಿಗಳ ನಾಯಕರು ತಮ್ಮ ಅಸಿತ್ವಕ್ಕಾಗಿ ಈ ವರದಿಯನ್ನು ವಿರೋಧಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಇದಕ್ಕೆ ಕಿವಿಗೊಡದೆ ಮಾತುಕೊಟ್ಟಂತೆ ಕೂಡಲೇ ವರದಿ ಜಾರಿ ಮಾಡಬೇಕು ಎಂದರು.
ಶಾಸನ ಸಭೆಯಲ್ಲಿರು ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಶಾಸಕರು ಮತ್ತು ಮಂತ್ರಿಗಳು ಕೂಡ ಏನೂ ಗೊತ್ತಿಲ್ಲದವರಂತೆ ಕುಳಿತ್ತಿದ್ದಾರೆ. ಇವರಿಗೆ ಹಿಂದುಳಿದ ವರ್ಗಗಳ ಮತಗಳು ಬೇಡವೆ? ಈ ವರದಿ ಜಾರಿ ಮಾಡಲು ಭಯ ಏಕೆ? ಮುಖ್ಯಮಂತ್ರಿಗಳು ತಮ್ಮ ಕುರ್ಚಿಯನ್ನು ಲೆಕ್ಕಿಸದೆ ಈ ವರದಿ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ಮೋದಿಯವರು ಕೂಡ ಜಾತಿಗಣತಿಗೆ ಒಪ್ಪಿಕೊಂಡಿದ್ದಾರೆ. ಇದನ್ನು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಕೂಡ ಸ್ವಾಗತಿಸಿದ್ದಾರೆ. ಆದರೆ ರಾಜ್ಯದಲ್ಲಿ ಕಾಂತ್ರಾಜ್ ವರದಿ ಜಾರಿಗೆ ಎರಡೂ ಪಕ್ಷದವರು ಜಾರಿ ಮಾಡುವಲ್ಲಿ ತಮ್ಮ ಸೋಗಲಾಡಿತನವನ್ನು ಪ್ರದರ್ಶನ ಮಾಡುತ್ತಿದ್ದಾರೆ. ತಾವು ಅಹಿಂದಾ ಎಂದು ಹೇಳಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗಲಿಬಿಲಿಗೆ ಒಳಗಾಗಿ ಸಾಮಾಜಿಕ ನ್ಯಾಯ ಮರೆತುಬಿಟ್ಟಿದ್ದಾರೆ. ಇದೆಲ್ಲವನ್ನು ಬಿಟ್ಟು, ಕೂಡಲೇ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಪ್ರೊ.ರಾಚಪ್ಪ, ನಟರಾಜ್, ಎಸ್.ವಿ.ರಾಜಮ್ಮ, ಪಾಂಡುರಂಗಪ್ಪ, ವರಲಕ್ಷ್ಮೀ, ಪರಮೇಶ್ವರಪ್ಪ, ಎ.ಕೆ. ಚಂದ್ರಪ್ಪ ಇದ್ದರು.