ಜೆರೋಸಾ ಶಾಲೆ ಘಟನೆ ತನಿಖೆಗೆ ಐಎಎಸ್ ಅಧಿಕಾರಿ ನೇಮಕ: ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌

| Published : Feb 18 2024, 01:30 AM IST / Updated: Feb 18 2024, 03:31 PM IST

Dinesh gundurao
ಜೆರೋಸಾ ಶಾಲೆ ಘಟನೆ ತನಿಖೆಗೆ ಐಎಎಸ್ ಅಧಿಕಾರಿ ನೇಮಕ: ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿಯ ಜಿಲ್ಲಾ ಹೆಚ್ಚುವರಿ ಆಯುಕ್ತ, ಐಎಎಸ್‌ ಅಧಿಕಾರಿ ಆಕಾಶ್‌ ಶಂಕರ್‌ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಈ ಸಂಬಂಧ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದ್ದು, ಶೀಘ್ರ ವರದಿ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು 

ನಗರದ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಧರ್ಮ ನಿಂದನೆ ಮಾಡಿದ್ದಾರೆ ಎನ್ನಲಾದ ಪ್ರಕರಣ ಹಾಗೂ ಅದರ ನಂತರದ ಬೆಳವಣಿಗೆಗಳ ಕುರಿತು ಸಮಗ್ರ ತನಿಖೆ ನಡೆಸಲು ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳೂರಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯ ಜಿಲ್ಲಾ ಹೆಚ್ಚುವರಿ ಆಯುಕ್ತ, ಐಎಎಸ್‌ ಅಧಿಕಾರಿ ಆಕಾಶ್‌ ಶಂಕರ್‌ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. 

ಈ ಸಂಬಂಧ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದ್ದು, ಶೀಘ್ರ ವರದಿ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ ಎಂದರು.

ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಿಕ್ಷಕಿ ಪಾಠ ಮಾಡುವಾಗ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಶಾಸಕರು, ಮಕ್ಕಳನ್ನು, ಶಿಕ್ಷಕರನ್ನು ಬೀದಿಯಲ್ಲಿ ನಿಲ್ಲಿಸಿ ಪ್ರತಿಭಟನೆ ಮಾಡಿದ್ದಾರೆ. 

ಇದು ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು. ಇಲ್ಲಿನ ಜನತೆ ತಲೆತಗ್ಗಿಸುವಂತೆ ಮಾಡಿದ್ದಾರೆ. ಶಾಸಕರ ನಡವಳಿಕೆಯಿಂದ ಬೇಸರವಾಗಿದೆ. ಘಟನೆ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಶಾಸಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. 

ಬಿಜೆಪಿಯವರು ಹೇಳಿದಾಕ್ಷಣ ಪ್ರಕರಣ ಹಿಂಪಡೆಯಲಾಗದು. ತನಿಖೆ ನಡೆಯುತ್ತಿದ್ದು, ತಪ್ಪು ಎಸಗಿದ್ದು ದೃಢಪಟ್ಟರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವರು ಹೇಳಿದರು.

ಶಿಕ್ಷಕಿಯ ವಿರುದ್ಧವೂ ಶಿಕ್ಷಣ ಇಲಾಖೆ ತನಿಖೆ ನಡೆಸುತ್ತದೆ. ಪೊಲೀಸರು ತನಿಖೆ ನಡೆಸುವುದಿಲ್ಲ, ಹಾಗಾಗಿ ಎಫ್‌ಐಆರ್‌ ದಾಖಲಿಸಿಲ್ಲ. ಯಾರು ತಪ್ಪು ಮಾಡಿದರೂ ತನಿಖೆಯಲ್ಲಿ ತಿಳಿದುಬರುತ್ತದೆ ಎಂದರು.

ಈ ಘಟನೆಯಿಂದ ಜಿಲ್ಲೆಗೆ ಡ್ಯಾಮೇಜ್‌ ಆಗಿದೆ. ಮಕ್ಕಳನ್ನು ರಸ್ತೆಯಲ್ಲಿ ನಿಲ್ಲಿಸಿ ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ. ಶಾಲೆಯ ಎದುರು ಗೂಂಡಾಗಿರಿ ಮೆರೆದಿದ್ದಾರೆ. ರಾಜಕೀಯ ಸ್ವಾರ್ಥಕ್ಕಾಗಿ ಧರ್ಮದ ಹೆಸರಿನಲ್ಲಿ ಪ್ರಚೋದನೆ ನೀಡಿದ್ದಾರೆ. 

ಹೊರಗಿನ ಜನತೆ ಜಿಲ್ಲೆಯಲ್ಲಿ ಏನಾಗುತ್ತಿದೆ ಎಂದು ಕೇಳುತ್ತಿದ್ದಾರೆ. ಡಾ.ಭರತ್‌ ಶೆಟ್ಟಿ ಮತ್ತು ಶರಣ್‌ಪಂಪ್‌ವೆಲ್‌ ಮೇಲೆ ಸುಳ‍್ಳು ಕೇಸು ದಾಖಲಾಗಿಲ್ಲ. ಎಲ್ಲಿ ಹೇಳಿಕೆ ನೀಡಿದರೂ ಅದು ತಪ್ಪೇ. 

ಲಂಡನ್‌ನಲ್ಲಿ ಕುಳಿತುಕೊಂಡು ಕಾನ್ವೆಂಟ್‌ ಶಾಲೆಗಳಿಗೆ ಹೋಗಬೇಡಿ ಎನ್ನುವುದು ತಪ್ಪಲ್ಲವೇ, ಪ್ರಚೋದನಕಾರಿ ಹೇಳಿಕೆ ವಿರುದ್ಧ ಕೇಸು ಹಾಕಲಾಗಿದೆ. ಪೊಲೀಸ್‌ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ದೇವಸ್ಥಾನ ದುಡ್ಡು ದೇವಸ್ಥಾನಕ್ಕೆ: ರಾಜ್ಯ ಬಜೆಟ್ ಬಗ್ಗೆ ಬಿಜೆಪಿ ನಾಯಕರ ಟೀಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವ ದಿನೇಶ್‌ ಗುಂಡೂರಾವ್‌, ಬಿಜೆಪಿಯವರು ಬಾಯಿ ತೆರೆದರೆ ಬರೀ ಸುಳ್ಳೇ ಹೊರಗೆ ಬರುತ್ತದೆ. 

ದೇವಸ್ಥಾನದ ದುಡ್ಡು ದೇವಸ್ಥಾನಕ್ಕೆ ಖರ್ಚು ಮಾಡುತ್ತೇವೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟವಾಗಿ ಹೇಳಿದ್ದಾರೆ. ಮತ್ತೆ ಇದರಲ್ಲಿ ಗೊಂದಲ ಏನಿದೆ?, ಕೇವಲ ಪ್ರಚೋದನೆ ಮಾಡುವುದೇ ಬಿಜೆಪಿಯವರ ಅಭ್ಯಾಸವಾಗಿದೆ ಎಂದರು.

ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎನ್ನುತ್ತಾ ರಾಜಕಾರಣ ಮಾಡುತ್ತಿದ್ದಾರೆ. ಇದೇ ಸುಳ್ಳನ್ನ ಇಪ್ಪತ್ತು, ನೂರು ಸಲ ಹೇಳುವವರಿಗೆ ಏನು ಹೇಳೋದು. ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ್ ಬಜೆಟ್‌ ಬಗ್ಗೆ ಟೀಕೆ ಮಾಡುತ್ತಿದ್ದಾರೆ. 

ವಿರೋಧ ಪಕ್ಷಗಳು ಬಜೆಟ್ ಸಂದರ್ಭದಲ್ಲಿ ಆ ರೀತಿ ಹೇಳುವುದು ಸಹಜ. ಆದರೆ ಬಜೆಟ್‌ನಲ್ಲಿ ರಾಜ್ಯ ದಿವಾಳಿ‌ ಆಗಿದೆ,ಇವರಿಂದ ಸರ್ಕಾರ ನಡೆಸಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ಅಭಿವೃದ್ಧಿ ಪರ ಇರುವ ತೀರ್ಮಾನ ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದರು.

ಗ್ಯಾರಂಟಿ ಸ್ಕೀಂ ಮಾಡಿದ ಬಳಿಕ ಏನೂ ಮಾಡಲು ಆಗುವುದಿಲ್ಲ ಎಂದು ಭಾವಿಸಿದ್ದರು. ಆದರೆ ಇದೆಲ್ಲಾ ಮಾಡಿರೋದು ಅವರಿಗೆ ಆಶ್ಚರ್ಯ ಆಗಿದೆ. ಹೀಗಾಗಿ ಹೇಗೆ ಪ್ರತಿಕ್ರಿಯಿಸಬೇಕು ಎಂದು ಅವರಿಗೆ ಗೊತ್ತಾಗುತ್ತಿಲ್ಲ ಎಂದರು. 

ಈ ಬಾರಿ ದ.ಕ.ದಲ್ಲೂ ಬದಲಾವಣೆ: ಇಲ್ಲಿ ನಾವು ಪಾರ್ಲಿಮೆಂಟ್ ಚುನಾವಣೆ ಗೆಲ್ಲುವುದಕ್ಕೆ ಆಗಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ನಮ್ಮ ಪ್ರಯತ್ನವನ್ನು ನಾವು ಮಾಡುತ್ತೇವೆ. 

ಜನರ ಮುಂದೆ ಕೊಟ್ಟಿರುವ ಮಾತು ಉಳಿಸಿಕೊಂಡಿರುವ ಸರ್ಕಾರ ನಮ್ಮದು. ಒಳ್ಳೆಯ ಕೆಲಸ ಮಾಡಲು ಮುಖ್ಯಮಂತ್ರಿಗಳು ಮುಂದೆ ಹೆಜ್ಜೆ ಇಡುತ್ತಿದ್ದಾರೆ. 

ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರತಿಪಾದನೆ ಮಾಡುತ್ತಿದ್ದಾರೆ. ಕೊಡಗಿನಲ್ಲಿ ನಾವು ಗೆದ್ದೇ ಇಲ್ಲ ಎನ್ನುತ್ತಿದ್ದರು. ಮೊನ್ನೆ ಎರಡು ಶಾಸಕ ಸ್ಥಾನ ಗೆದ್ದಿದ್ದೇವೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಬದಲಾವಣೆ ಆಗಲಿದೆ ಎಂದರು.