ಸಾರಾಂಶ
ಅರಸೀಕೆರೆ: ಸಮಾಜ ಸೇವೆಯ ಹಂಬಲ ಹೊಂದಿರುವವರಿಗೆ ರಾಜಕೀಯವೇ ಸೂಕ್ತ ಮಾರ್ಗವಾಗಿದ್ದು, ಜನರ ನೋವು ನಲಿವುಗಳಿಗೆ ಸ್ಪಂದಿಸುವ ಮನಸ್ಥಿತಿ ಹೊಂದಿದವರನ್ನು ಜನರು ಯಾವ ಜಾತಿ ಧರ್ಮವೂ ನೋಡದೆ ಬೆಂಬಲಿಸುತ್ತಾರೆ ಎಂದು ನಿವೃತ್ತ ಪ್ರಾಂಶುಪಾಲ ಡಾ. ಎಚ್.ಆರ್. ಸ್ವಾಮಿ ಅಭಿಪ್ರಾಯಪಟ್ಟರು.ರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನ, ಕೀರ್ತಿ, ಅಪಕೀರ್ತಿ, ಆರೋಪ ಪ್ರತ್ಯಾರೋಪಗಳು ಸಹಜ. ಆದರೆ ವೈಯಕ್ತಿಕ ಸ್ವಾರ್ಥಕ್ಕಾಗಿ ಮತ್ತೊಬ್ಬರನ್ನು ನೋಯಿಸುವುದು ಅಥವಾ ಅಪಪ್ರಚಾರ ಮಾಡುವುದು ಎಂದಿಗೂ ಆದರ್ಶ ರಾಜಕಾರಣಿಯ ಗುಣವಲ್ಲ ಎಂದು ಹೇಳಿದರು.ಅರಸೀಕೆರೆ ವಿಧಾನಸಭಾ ಕ್ಷೇತ್ರವು ಹಲವಾರು ಶಾಸಕರನ್ನು ಕಂಡಿದೆ. ಅನೇಕ ಮುಖಂಡರು ತಮ್ಮದೇ ಆದ ಶೈಲಿಯಲ್ಲಿ ಗುರುತು ಮೂಡಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ನಡೆನುಡಿ ಮತ್ತು ಹೇಳಿಕೆಗಳಿಂದ ರಾಜಕೀಯಕ್ಕಿಂತಲೂ ವೈಯಕ್ತಿಕ ದಾಳಿ ಹಾಗೂ ಟೀಕೆ ಟಿಪ್ಪಣಿಗಳಿಗೆ ಕಾರಣವಾಗುತ್ತಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ರಾಜಕೀಯದಲ್ಲಿ ವಿಭಿನ್ನ ನಿಲುವು, ಸೈದ್ಧಾಂತಿಕ ಭಿನ್ನಾಭಿಪ್ರಾಯ ಸಹಜವೆಂದರು. ಆದರೆ ಪರಸ್ಪರ ದೂಷಣೆ, ಏಕವಚನದ ನಿಂದನೆ ಹಾಗೂ ವೈಯಕ್ತಿಕ ಅವಹೇಳನ ರಾಜಕೀಯದ ಗುಣಮಟ್ಟವನ್ನು ಕುಗ್ಗಿಸುತ್ತದೆ ಎಂದು ಎಚ್ಚರಿಸಿದರು.ಜನಪ್ರತಿನಿಧಿಗಳು ಸದಾ ತಮ್ಮ ನಡೆ ನುಡಿಗಳಲ್ಲಿ ಜಾಗರೂಕರಾಗಿರಬೇಕು. ವಿರೋಧ ಅಭಿಪ್ರಾಯಗಳು ಬಂದಾಗ ಆರೋಗ್ಯಪೂರ್ಣ ಚರ್ಚೆ ನಡೆಯಬೇಕು. ಅಷ್ಟೇ ಅಲ್ಲದೆ ಇಂತಹ ಚರ್ಚೆಗಳು ಸಮಾಜದ ಬೆಳವಣಿಗೆಗೆ ಸಹಕಾರಿ ಆಗಿ, ಮುಂದಿನ ಪೀಳಿಗೆಯ ಯುವಕರಿಗೆ ಆದರ್ಶವಾಗಬೇಕು. ಹಿರಿಯರ ಮಾತಿನಂತೆ ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವ ತತ್ವವನ್ನು ಪಾಲಿಸಬೇಕು ಎಂದು ಡಾ. ಸ್ವಾಮಿ ಕರೆ ನೀಡಿದರು.