ಸಾರಾಂಶ
ಶಿವಾಜಿ ಮಹಾರಾಜರು ಆದರ್ಶ ಪುರುಷರು. ಅವರ ಶೌರ್ಯ, ಸಾಹಸಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ತುಮಕೂರು
ಶಿವಾಜಿ ಮಹಾರಾಜರು ಆದರ್ಶ ಪುರುಷರು. ಅವರ ಶೌರ್ಯ, ಸಾಹಸಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತುಮಕೂರು ಜಿಲ್ಲಾ ಮರಾಠ ಕ್ಷತ್ರಿಯ ಪರಿಷತ್ ವತಿಯಿಂದ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಯಲ್ಲಿ ಮಾತನಾಡಿದರು.
ಶಿವಾಜಿ ಅವರು ತಮ್ಮ ಬಾಲ್ಯ, ಫ್ರೌಡ ಮತ್ತು ರಾಜನಾಗಿ ಕೈಗೊಂಡ ನಿರ್ಧಾರಗಳು ಅಖಂಡ ಹಿಂದೂ ಸಾಮ್ರಾಜ್ಯದ ಬೆಳವಣಿಗೆಗಾಗಿ ಪೂರಕವಾಗಿತ್ತು. ಅವರ ಕಾಲಘಟ್ಟದಲ್ಲಿ ಭಾಷಾ ಸಹಿಷ್ಣುತೆ ಮೇರು ಮಟ್ಟದಲ್ಲಿ ಇದ್ದುದನ್ನು ಕಾಣಬಹುದಾಗಿತ್ತು. ಕರ್ನಾಟಕದ ಬೆಳಗಾವಿ ಮತ್ತು ಬಿಜಾಪುರ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದ ಅವರು ಎರಡು ಸಮುದಾಯಗಳ ನಡುವೆ ಉತ್ತಮ ಸಂಬಂಧ ಕಾಪಾಡಿಕೊಂಡಿದ್ದರು ಎಂದರು.ಜಿಲ್ಲಾ ಮರಾಠ ಕ್ಷತ್ರಿಯ ಪರಿಷತ್ ಗೌರವಾಧ್ಯಕ್ಷ ಜನಾರ್ಧನ್ ರಾವ್ ಸೊನಾಲೆ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಕೇಳಿದರೆ ಸಾಕು ಮೈ ನವಿರೇಳುತ್ತದೆ. ತಾಯಿಯನ್ನೇ ಮೊದಲ ಗುರುವಾಗಿ ಪಡೆದುಕೊಂಡಿದ್ದ ಅವರ ಒಂದೊಂದು ಕಥೆಗಳು ಯುವ ಜನತೆಗೆ ಸ್ಫೂರ್ತಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶ್, ಮರಾಠ ಕ್ಷತ್ರಿಯ ಪರಿಷತ್ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಸೊಂಕಿ, ನಿರ್ದೇಶಕ ಹರ್ಷ ವಿ. ಕದಂಬ, ಬನಶಂಕರಿ ಬಾಬು, ಮೋಹನ್ ರಾವ್, ಹೇಮೋಜಿ ರಾವ್ ಸಿಂಧ್ಯ ಸೇರಿದಂತೆ ಪರಿಷತ್ನ ಪದಾಧಿಕಾರಿಗಳು ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.