ಸಾರಾಂಶ
ಸರ್ಕಾರಿ ಭೂಮಿಗಳು ಗುರುತು ಮಾಡಿ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಪಂ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಬೇಕು. ಅದರ ಸುತ್ತಲೂ ತಂತಿ ಬೇಲಿಗಳ ನಿರ್ಮಿಸಿ ರಕ್ಷಣೆ ಮಾಡಬೇಕು. ಒಂದು ವೇಳೆ ಸರ್ಕಾರಿ ಜಮೀನುಗಳು ಒತ್ತುವರಿಯಾಗಿದ್ದರೂ ಅದನ್ನು ತೆರವುಗೊಳಿಸಲು ಅಗತ್ಯ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನಲ್ಲಿನ ನಿವೇಶನ ರಹಿತ ಬಡವರಿಗೆ ನಿವೇಶನ ಕಲ್ಪಿಸಲು ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಗುರುತಿಸುವಂತೆ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕಂದಾಯ ಅಧಿಕಾರಿಗಳಿಗೆ ಸರ್ಕಾರಿ ಜಮೀನು ಗುರುತಿಸುವಂತೆ ಸೂಚಿಸಿದರು.
ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಗಳಲ್ಲಿ ಸರ್ಕಾರಿ ಭೂಮಿಗಳಿದ್ದರೆ ಅದನ್ನು ಗುರುತಿಸಬೇಕು. ಜೊತೆಗೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೂ ಸಹ ಅದನ್ನು ಗುರುತು ಮಾಡಬೇಕು. ಗ್ರಾಮ ಲೆಕ್ಕಾಧಿಕಾರಿ, ರವಿನ್ಯೂ ಅಧಿಕಾರಿ, ಉಪ ತಹಸೀಲ್ದಾರ್ ಸೇರಿ ಜಂಟಿಯಾಗಿ ಸರ್ಕಾರಿ ಭೂಮಿಯ ದಾಖಲೆಗಳ ಪರಿಶೀಲಿಸಿ ಸರ್ವೇ ಅಧಿಕಾರಿಗಳ ಮೂಲಕ ಸರ್ವೇ ಕಾರ್ಯ ಮಾಡಿ ಸಂರಕ್ಷಿಸುವ ಜವಾಬ್ದಾರಿ ನಿಮ್ಮದಾಗಿದೆ ಎಂದರು.ಸರ್ಕಾರಿ ಭೂಮಿಗಳು ಗುರುತು ಮಾಡಿ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಪಂ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಬೇಕು. ಅದರ ಸುತ್ತಲೂ ತಂತಿ ಬೇಲಿಗಳ ನಿರ್ಮಿಸಿ ರಕ್ಷಣೆ ಮಾಡಬೇಕು. ಒಂದು ವೇಳೆ ಸರ್ಕಾರಿ ಜಮೀನುಗಳು ಒತ್ತುವರಿಯಾಗಿದ್ದರೂ ಅದನ್ನು ತೆರವುಗೊಳಿಸಲು ಅಗತ್ಯ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.
ಪಂಚಾಯ್ತಿಯಿಂದ ನಡೆದ ಜನ ಸಂಪರ್ಕ ಸಭೆಯಲ್ಲಿ ನಿವೇಶನ ರಹಿತ ಫಲಾನುಫವಿಗಳ ಅರ್ಜಿಗಳನ್ನು ಸಹ ಪರಿಶೀಲಿಸಿ ತಹಸೀಲ್ದಾರ್ ಗಮನಕ್ಕೆ ತರಬೇಕು. ನಿವೇಶನ ರಹಿತ ಬಡವರಿಗೆ ನಿವೇಶನ ನೀಡುವ ಕೆಲಸವಾಗಬೇಕು ಎಂದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ, ಎಡಿಎಲ್ಆರ್ ಮೇಘ, ಉಪ ತಹಸೀಲ್ದಾರ್ ಚೈತ್ರ, ರವಿನ್ಯೂ ಅಧಿಕಾರಿಗಳು, ಗ್ರಾಮಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.