ವೇದಿಕೆಯಲ್ಲಿ ಜನಪದ ಕಲಾವಿದ ಮತ್ತಿಕುಂಟೆ ಕೃಷ್ಣ ತಂಡ ಭಾವಗೀತೆ ಹಾಗೂ ನಾಡಗೀತೆ ಹಾಡಿದರು, ಆಶಾ ಕಿರಣ ಸಂಸ್ಥೆಯಿಂದ ಪ್ರಾರ್ಥನೆ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.
ಕನ್ನಡಪ್ರಭ ವಾರ್ತೆ ಕೋಲಾರ
ವಿಕಲಚೇತನರಲ್ಲಿ ವಿಶೇಷ ಪ್ರತಿಭೆಗಳಿರುವುದನ್ನು ಗುರುತಿಸಿ ಬೆಳಕಿಗೆ ತರುವಂತಾಗಬೇಕು. ವಿಶೇಷ ಚೇತನರನ್ನು ಸಂಘಟಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರಲ್ಲಿರುವ ಪ್ರತಿಭೆಗೆ ಪ್ರೋತ್ಸಾಹಿಸಿ ಸಮಾಜ ಮುಖಿಗಳನ್ನಾಗಿ ರೂಪಿಸುವಂತಾಗಬೇಕೆಂದು ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಕರೆ ನೀಡಿದರು.ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ವಿಶ್ವಸಂಸ್ಥೆಯ-೨೦೨೫ರ ಸಾಮಾಜಿಕ ಪ್ರಗತಿ ಸಾಧಿಸಲು ವಿಕಲ ಚೇತನರನ್ನು ಒಳಗೊಂಡ ಸಮಾಜಗಳನ್ನು ರೂಪಿಸುವುದು ಎಂಬ ಘೋಷವಾಕ್ಯದಡಿ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನ ಮಕ್ಕಳಿಂದಲೇ ಉದ್ಘಾಟಿಸಲು ಅವಕಾಶ ಕಲ್ಪಿಸಿದ ಶಾಸಕರಾದ ಮಂಜುನಾಥ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ, ವಿಶ್ವವಿಕಲ ಚೇತರ ದಿನವನ್ನು ಹಬ್ಬದಂತೆ ಆಚರಿಸುವ ಮೂಲಕ ಅವರಿಗೆ ತಮ್ಮ ಹಕ್ಕುಗಳು ಮತ್ತು ಸರ್ಕಾರದ ಸೌಲಭ್ಯಗಳ ಕುರಿತು ಪರಿಪೂರ್ಣವಾದ ಅರಿವು ಮೂಡಿಸಬೇಕು, ವಿಕಲ ಚೇತನರಲ್ಲ, ವಿಶೇಷ ಚೇತನರು ಎಂಬುದು ಅರ್ಥಪೂರ್ಣವಾಗಿರುವುದು ಎಂದ ಅವರು, ತಮ್ಮ ಸಹೋದರ ಸಹ ವಿಕಲಚೇತನನಾಗಿದ್ದು, ಕಳೆದ ೨೦೧೯ರಲ್ಲಿ ಕಾಲವಾದರು, ಆದರೆ ಅವನು ಅನುಭವಿಸಿದ ಸಮಸ್ಯೆಗಳು, ನೋವುಗಳನ್ನು ನಾನು ಹತ್ತಿರದಿಂದ ಕಂಡಿದ್ದು, ಅರ್ಥೈಸಿಕೊಂಡಿರುವೆ ಎಂದರು.ವಿಕಲಚೇತನರನ್ನು ಗೌರವದಿಂದ ಕಾಣಬೇಕು. ಅವರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಪ್ರೀತಿಯಿಂದ ಕಂಡು ಅವರಲ್ಲಿರುವ ಕೀಳರಿಮೆ ತೊಡೆದು ಹಾಕಿ ಜೀವನದಲ್ಲಿ ಉತ್ಸಾಹ ಕಾಣುವಂತೆ ಮಾಡಬೇಕು. ಸಮಗ್ರ ಸುಸ್ಥಿತರವಾದ ಭವಿಷ್ಯಕ್ಕೆ ವಿಕಲಚೇತರ ಅಭಿವೃದ್ಧಿಗೆ ಉತ್ತೇಜನ ನೀಡುವಂತಾಗಬೇಕು. ಅವರಲ್ಲಿನ ಆಸಕ್ತಿ ಪೋಷಿಸಿ ಸಮಾಜದ ಮುಖ್ಯವಾಹಿನಿಗೆ ತಂದು ಅವರಲ್ಲಿ ನಾಯಕತ್ವಕ್ಕೆ ಉತ್ತೇಜನ ನೀಡಬೇಕೆಂದು ತಿಳಿಸಿದರು.
ಇದೇ ವಾಹನಗಳ ಅಪಘಾತದ ಬಗ್ಗೆ ನಗರದಲ್ಲಿ ಪೊಲೀಸ್ ಇಲಾಖೆ ಹೆಲ್ಮೆಟ್ ಕಡ್ಡಾಯಗೊಳಿಸುವ ಮೂಲಕ ಸಾರ್ವಜನಿಕರ ಜೀವ ಉಳಿಸುವ ಕೆಲಸಕ್ಕೆ ಪೊಲೀಸರನ್ನು ಅಭಿನಂದಿಸಿದರು.ಶಾಸಕ ಡಾ.ಕೊತ್ತೂರು ಮಂಜುನಾಥ್ ಮಾತನಾಡಿ, ವಿಕಲಚೇತನರು ಬುದ್ದಿಮಾಂದ್ಯರಲ್ಲ, ಬುದ್ದಿವಂತರು ಎಂಬುವುದನ್ನು ಅವರಲ್ಲಿನ ಪ್ರತಿಭೆ ನೋಡಿ ಹೇಳಬಹುದಾಗಿದೆ. ಅವರು ನೀಡಿದ ಕಲೆಯ ಪ್ರದರ್ಶನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಬುದ್ದಿಮಾಂದ್ಯ ಮಕ್ಕಳಿಗೆ ತರಬೇತಿ ನೀಡಿದ ಸಂಸ್ಥೆಯ ಶಿಕ್ಷಕರಿಗೆ ಧನ್ಯವಾದ ಸಲ್ಲಿಸಿದರು.
ಜಿಪಂ ಸಿಇಒ ಡಾ.ಪ್ರವೀಣ್ ಬಾಗೇವಾಡಿ ಮಾತನಾಡಿ, ವಿಶೇಷ ಚೇತನರ ಬಗ್ಗೆ ಸಮಾಜದಲ್ಲಿ ಸುಧಾರಣೆಯ ಜಾಗೃತಿಯುಂಟು ಮಾಡಬೇಕು. ವಿಶೇಷಚೇತನರಲ್ಲಿ ಸಾಕಷ್ಟು ಸಾಧನೆ ಮಾಡಿರುವಂಥ ಮಹನೀಯರಾದ ಸ್ಟೀಫನ್ ಹ್ಯಾಕ್, ಅವರು ತ್ರಿಚಕ್ರ ವಾಹನವನ್ನು ಬಳಸಿಕೊಂಡೇ ಜೀವನದಲ್ಲಿ ಅನೇಕ ಸಂಶೋಧನೆ ಮಾಡಿ ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇದೇ ರೀತಿ ನೃತ್ಯ ಕಲಾವಿದೆ ಸುಧಾ ರಾಮಚಂದ್ರನ್ ಒಂದು ಕಾಲು ಕಳೆದುಕೊಂಡರೂ ಸಹ ವಿಶ್ವ ವಿಖ್ಯಾತ ನೃತ್ಯಪಟುವಾಗಿ ರೂಪಿತ ಗೊಂಡರು ಎಂದು ಹೇಳಿದರು.ವೇದಿಕೆಯಲ್ಲಿ ಜನಪದ ಕಲಾವಿದ ಮತ್ತಿಕುಂಟೆ ಕೃಷ್ಣ ತಂಡ ಭಾವಗೀತೆ ಹಾಗೂ ನಾಡಗೀತೆ ಹಾಡಿದರು, ಆಶಾ ಕಿರಣ ಸಂಸ್ಥೆಯಿಂದ ಪ್ರಾರ್ಥನೆ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಮಾಜಿ ನಗರಸಭಾ ಸದಸ್ಯ ಅಂಬರೀಶ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ.ಎನ್., ಜಿಲ್ಲಾ ಅಂಗವಿಕಲರ ಕಲ್ಯಾಣ್ಯಾಧಿಕಾರಿ ಮಂಜುಳ.ಆರ್ ಇದ್ದರು.