ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಈ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಕಾರ್ಯದರ್ಶಿ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಈಡುಗಾಗಿ ಸೇವೆ ನಡೆಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಇಲ್ಲಿನ ಹಳೇಯೂರು ಆಂಜನೇಯ ದೇವಸ್ಥಾನದ ಬಳಿ ತೆಂಗಿನಕಾಯಿ ‘ಈಡುಗಾಯಿ’ ಒಡೆಯುವ ವಿಶೇಷ ಚಳುವಳಿ ವೇಳೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಳು ಇವೆಂಟ್‌ ಮ್ಯಾನೇಜರ್‌ಗಳಂತೆ ವರ್ತಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಶಾಪದಿಂದ ಮುಕ್ತಿ ಸಿಗಲಿ ಹಾಗೂ ದಕ್ಷ ಅಧಿಕಾರಿಗಳು ಜಿಲ್ಲೆಗೆ ಬರಲಿ ಎಂದು ನಾವು ಭಗವಂತನಿಗೆ ಇಡುಗಾಯಿ ಸೇವೆ ಸಲ್ಲಿಸಿದ್ದೇವೆ, ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಲ್ಲಿಕಾರ್ಜುನ್‌ ಅವರನ್ನು ಬಂಧಿಸಿ ಕರೆದೊಯ್ದರು. ಸಂಜೆ ಬಿಡುಗಡೆ ನಂತರ ಮಾತನಾಡಿದ ಅವರು ಪೊಲೀಸರ ದಬ್ಬಾಳಿಕೆಗೆ ಹೆದರಲ್ಲ. ಇದು ಗೃಹ ಸಚಿವರ ಆದೇಶದಿಂದಾಗಿರುವ ಘಟನೆ. ಇಂತಹ 100 ಕೇಸು ಹಾಕಿದರೂ ಹೋರಾಟ ನಿರಂತರ ಎಂದು ಕಿಡಿ ಕಾರಿದರು. ಈ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷದ ಮುಖಂಡ ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.