ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದರೆ ಮುಂದಿನ ಭವಿಷ್ಯ ಉಜ್ವಲ

| Published : May 26 2025, 12:33 AM IST

ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದರೆ ಮುಂದಿನ ಭವಿಷ್ಯ ಉಜ್ವಲ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜಿನ ಹಂತಕ್ಕೆ ಮಕ್ಕಳು ಬಂದಾಗ ಪೋಷಕರು ಸ್ನೇಹಿತರಂತೆ ಕಂಡು ಉತ್ತಮ ಸಂಸ್ಕಾರ ಕಲಿಸಿದರೆ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆ ಆಗುತ್ತಾರೆ. ಜೊತೆಗೆ ಮಕ್ಕಳಲ್ಲೂ ಕೂಡ ಒಂದು ಗುರಿ ಇದ್ದು, ಸಾಧನೆ ಮಾಡುವ ಛಲ ಇದ್ದರೇ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ವಾಗ್ಮಿಗಳಾದ ಜಿ.ಎಸ್. ಮಂಜುನಾಥ್ ಅಭಿಪ್ರಾಯಪಟ್ಟರು. ಪಿಯುಸಿ ಎನ್ನುವ ಮೆಟ್ಟಿಲು ಮಕ್ಕಳಿಗೆ ಮುಖ್ಯವಾಗಿದ್ದು, ಈ ವೇಳೆ ನಿಮ್ಮ ಮನಸ್ಸು ಬೇರೆಡೆಗೆ ತಿರುಗದಂತೆ ಗಮನವಹಿಸಿದರೇ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಕಾಲೇಜಿನ ಹಂತಕ್ಕೆ ಮಕ್ಕಳು ಬಂದಾಗ ಪೋಷಕರು ಸ್ನೇಹಿತರಂತೆ ಕಂಡು ಉತ್ತಮ ಸಂಸ್ಕಾರ ಕಲಿಸಿದರೆ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆ ಆಗುತ್ತಾರೆ. ಜೊತೆಗೆ ಮಕ್ಕಳಲ್ಲೂ ಕೂಡ ಒಂದು ಗುರಿ ಇದ್ದು, ಸಾಧನೆ ಮಾಡುವ ಛಲ ಇದ್ದರೇ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ವಾಗ್ಮಿಗಳಾದ ಜಿ.ಎಸ್. ಮಂಜುನಾಥ್ ಅಭಿಪ್ರಾಯಪಟ್ಟರು.

ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಾಸ್ಟರ್‌ ಪದವಿಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ೨೦೨೫-೨೬ನೇ ಸಾಲಿನ ಪ್ರಥಮ ಪಿಯು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅರಿವು ಹಾಗೂ ಸ್ವಾಗತ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು, ತಕ್ಷಣ ಮಿಡಿಯುವಂತದ್ದು ತಾಯಿ ಹೃದಯ ಮಾತ್ರ. ವಾತ್ಸಲ್ಯ ಎಂಬುದು ಇರುವುದು ತಾಯಿಯಲ್ಲಿ. ವಿದ್ಯೆ ಕಲಿಸುವಂತದ್ದು ಗುರುವಿನ ಶಿಕ್ಷಣ ಆದರೇ ಬುದ್ಧಿ ಹೇಳುವುದು ಕೂಡ ನಮ್ಮ ಧರ್ಮ ಆಗಲೇಬೇಕು. ಮಕ್ಕಳೊಂದಿಗೆ ತಂದೆ ತಾಯಿ ಸ್ನೇಹಿತರಾಗಿರಬೇಕು. ಮಕ್ಕಳು ಹುಟ್ಟಿದ ಐದು ವರ್ಷಗಳ ಕಾಲ ಮಗುವನ್ನು ಮುದ್ದಿಸಬೇಕು. ಮನೆಯ ಕುಟುಂಬದ ಜೊತೆ ಬಾಂಧವ್ಯ ಬರಬೇಕು. ೧೦ ವರ್ಷಗಳ ಕಾಲ ಸ್ವಲ್ಪ ಹೊಡೆಯಬೇಕು ಎಂದರೇ ಶಿಸ್ತನ್ನು ಕಲಿಸಬೇಕು ಎಂದರು.

ಇನ್ನು ೧೬ ವರ್ಷ ಮಗುವಿಗೆ ಆದರೇ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಸ್ನೇಹಿತರ ವರ್ತನೆ ಆಗಬೇಕಾದರೇ ನಾವು ಮಕ್ಕಳ ಜೊತೆ ಸಮಾಲೋಚನೆ ನಡೆಸಬೇಕು ಎಂದು ಕಿವಿಮಾತು ಹೇಳಿದರು. ಮಕ್ಕಳಿಗೆ ಶಿಕ್ಷಣ ಪಡೆಯುವಾಗ ವಾಹನ ಕೊಡಿಸಬೇಡಿ. ವಾಹನ ಚಾಲನೆಯ ಲೆಸೆನ್ಸ್ ಪಡೆದ ಮೇಲೆ ಗಮನ ವಹಿಸಬೇಕು. ಮಕ್ಕಳಲ್ಲೂ ಕೂಡ ಒಂದು ಗುರಿ ಇರಬೇಕು. ಸಾಧನೆ ಮಾಡುವ ಛಲ ಇದ್ದರೆ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಕಿವಿಮಾತು ಹೇಳಿದರು. ಪಿಯುಸಿ ಎನ್ನುವ ಮೆಟ್ಟಿಲು ಮಕ್ಕಳಿಗೆ ಮುಖ್ಯವಾಗಿದ್ದು, ಈ ವೇಳೆ ನಿಮ್ಮ ಮನಸ್ಸು ಬೇರೆಡೆಗೆ ತಿರುಗದಂತೆ ಗಮನವಹಿಸಿದರೇ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಸಲಹೆ ನೀಡಿದರು.

ಮಾಸ್ಟರ್ ಕಾಲೇಜಿನ ಮಂಜುನಾಥ್ ಕಾರ್ಯಕ್ರಮದ ಸ್ವಾಗತ ಮತ್ತು ಆಶಯ ನುಡಿಯಲ್ಲಿ ಮಾತನಾಡಿ, ೨೪೦ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಕಾಲೇಜು ಈಗ ೮೦೦ ವಿದ್ಯಾರ್ಥಿಗಳು ಇದ್ದಾರೆ. ನೂರಕ್ಕೆ ನೂರು ಪರ್ಸೆಂಟ್ ಫಲಿತಾಂಶ ಬಂದಿದ್ದು, ಹೊರ ಜಿಲ್ಲೆಗಳಿಂದ ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ವಿದ್ಯಾರ್ಥಿಗಳು ಪ್ರತಿವರ್ಷ ಬರುತ್ತಿದ್ದಾರೆ. ಯಾವುದೇ ಪಲಿತಾಂಶದ ನಿರ್ಧಾರ ಮಾಡಬೇಕಾದರೇ ವಿದ್ಯಾರ್ಥಿಗಳ ಶ್ರಮ ಅವಲಂಬಿತವಾಗಿರುತ್ತದೆ ಎಂದರು.

ಮಾಸ್ಟರ್‌ ಪಿಯು ಕಾಲೇಜು ಕಾರ್ಯದರ್ಶಿ ಗೌಡೇಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಲ್ಲುಗಳನ್ನು ವಿಗ್ರಹ ಆಗಿ ರೂಪಿಸುವ ಕಾರ್ಯ ನಮ್ಮದಾಗಿದೆ. ಹತ್ತನೇ ಕ್ಲಾಸ್ ಮುಗಿಸುವವರೆಗೂ ಮಗುವಾಗಿತ್ತು. ಈ ಮಗುವನ್ನು ಮೇಲೆ ತರುವುದು ಸುಲಭವಲ್ಲ ಚಾಲೆಂಜ್ ವಿಚಾರ. ಆ ಕೆಲಸ ನಾವು ಮಾಡಬೇಕಾಗಿದೆ. ಎಸ್.ಎಸ್.ಎಲ್.ಸಿ. ಪರ್ಸೆಂಟ್‌ಗಿಂತ ಕಾಲೇಜಿಗೆ ಬಂದಾಗ ನಾವು ಹೆಚ್ಚು ಅಂಕ ತೆಗೆಸಿ ತೋರಿಸುತ್ತೇವೆ ಎಂದರು. ಗಳಿಸಿದ ಜ್ಞಾನವನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳನ್ನು ರ್‍ಯಾಂಕ್ ತರುವುದಕ್ಕಿಂತ ವಿದ್ಯಾರ್ಥಿಗಳೇ ಮುಖ್ಯ. ಮಾನಸಿಕವಾಗಿ ವಿದ್ಯಾರ್ಥಿಯನ್ನು ಸಿದ್ಧಪಡಿಸಬೇಕು. ಮಕ್ಕಳ ಮನಃಶಾಸ್ತ್ರ ತಿಳಿದುಕೊಳ್ಳುವುದರಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಇರುತ್ತದೆ. ಭಾವನಾತ್ಮಕವಾಗಿ ಮಕ್ಕಳನ್ನು ಪೋಷಕರು ತಿಳಿದುಕೊಳ್ಳಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಪಿಯುಸಿ ಹಂತ ಎಂದರೆ ಕಠಿಣವಾದ ಹಂತ. ಮಕ್ಕಳ ಮನಸ್ಸು ಇತರೆ ಕಡೆ ಹೋಗದಂತೆ ನೋಡಿಕೊಂಡಾಗ ಪರಿವರ್ತನೆ ಖಂಡಿತ ಸಾಧ್ಯ. ಇದಕ್ಕೆಲ್ಲ ಪೋಷಕರ ಪಾತ್ರ ಬಹಳ ಮುಖ್ಯ. ಮಕ್ಕಳನ್ನು ತಿದ್ದಲು ಅಪ್ಪ ಅಮ್ಮ ಶಿಕ್ಷಕರು ಇವರಿಂದಲೇ ಸಾಧ್ಯ. ನಮ್ಮ ಕರ್ತವ್ಯದ ಮೂಲಕ ಮಕ್ಕಳನ್ನು ಬದಲಾವಣೆ ಮಾಡಬಹುದು ಎಂದು ಸಲಹೆ ನೀಡಿದರು. ಮಕ್ಕಳ ಜೊತೆ ಪೋಷಕರು ಅತ್ಯಂತ ಆತ್ಮಿಯ ಸ್ನೇಹಿತರಾಗಿ ವರತು ಅಧಿಕಾರ ಚಲಾಯಿಸಬೇಡಿ. ಇವತ್ತಿನ ಮೊಬೈಲ್‌ ಯುಗದಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಜಾಸ್ತಿ. ಸಾಧ್ಯವಾದಷ್ಟು ಸಂಜೆ ಮಕ್ಕಳ ಜೊತೆ ಒಟ್ಟಿಗೆ ಊಟ ಮಾಡಿ. ಮಕ್ಕಳಿಗೆ ಸಂಸ್ಕಾರ ಕಲಿಯಿಸಿದರೇ ಮಕ್ಕಳು ನಿಮ್ಮ ಜೊತೆ ಇರುತ್ತಾರೆ. ಮಕ್ಕಳ ಮೇಲೆ ಅಧಿಕಾರ ಚಲಾಯಿಸಿದರೇ ಮುಂದಿನ ಪರಿಣಾಮಕ್ಕೆ ಜವಾಬ್ದಾರಿ ಯಾರಾಗಬಹುದು ಬಗ್ಗೆ ಯೋಚಿಸುವುದು ಉತ್ತಮ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಸ್ಟರ್‌ ಪಿಯು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಟಿ.ಎ. ಎಚ್. ರಾಯುಡು, ಉಪಾಧ್ಯಕ್ಷೆ ಎಚ್.ಸಿ. ನಂದಿನಿ ಇತರರು ಉಪಸ್ಥಿತರಿದ್ದರು.