ಸಾರಾಂಶ
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ
ಕನ್ನಡಪ್ರಭ ವಾರ್ತೆ, ಕಡೂರುಪ್ರಸ್ತುತ ದಿನಗಳಲ್ಲಿ ಮಾದಕ ವಸ್ತುಗಳ ಸೇವನೆ ಪ್ರಕರಣಗಳು ಹೆಚ್ಚುತ್ತಿದ್ದು ದೇಶ ಕಟ್ಟಬೇಕಾದ ಯುವ ಸಮೂಹ ಮತ್ತು ಶಾಲಾ-ಕಾಲೇಜಿನ ಮಕ್ಕಳು ಮಾದಕ ವಸ್ತುಗಳಿಂದ ದೂರ ಇದ್ದರೆ ಭವಿಷ್ಯ ಉಜ್ವಲ ವಾಗಲು ಸಾಧ್ಯ ಎಂದು ಕಡೂರು ನ್ಯಾಯಾಲಯದ ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಇರ್ಫಾನ್ ಹೇಳಿದರು.
ಗುರುವಾರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಕಡೂರು ಪೊಲೀಸ್, ಪಿಟಿಎಸ್ ತರಬೇತಿ ಸಂಸ್ಥೆ ಕಡೂರು, ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ಶಾಲಾ ಮಕ್ಕಳು ಮಾದಕ ದ್ರವ್ಯಗಳ ಪರಿಣಾಮ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು. ಕಡೂರು ಪೊಲೀಸ್ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳು ಮುಂದಿನ ದಿನಗಳಲ್ಲಿ ನಿಮ್ಮ ಕರ್ತವ್ಯದ ಸ್ಥಳಗಳಿಗೆ ತೆರಳಿದ ನಂತರ ಮಾದಕ ವಸ್ತುಗಳ ಮಾರಾಟ ಮಾಡುವವರನ್ನು ಬಂಧಿಸಿ ಕಾನೂನು ಮೂಲಕ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಶಾಲಾ-ಕಾಲೇಜಿನ ಮಕ್ಕಳು ಬೀಡಿ, ಸಿಗರೇಟ್ ನಂತಹ ದುಶ್ಚಟಗಳಿಗೆ ಬಲಿಯಾದರೆ ಮಾದಕ ವಸ್ತುಗಳ ಮಾರಾಟದ ಏಜೆಂಟರು ನಿಮ್ಮನ್ನು ಬಳಸಿಕೊಂಡು ಮದ್ಯ ವ್ಯಸನಿ ಗಳನ್ನಾಗಿ ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತಾರೆ. ಅಂತಹವರ ವಿರುದ್ಧ ಪೋಷಕರು, ಶಿಕ್ಷಕರು ಮತ್ತು ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.ಕಡೂರು ವೃತ್ತ ನಿರೀಕ್ಷಕ ರಫೀಕ್ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಮಾದಕ ವಸ್ತುಗಳ ಬಳಕೆ ವ್ಯಕ್ತಿಯ ಜೀವನದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ತಮ್ಮ ಆರೋಗ್ಯ, ಭವಿಷ್ಯ ಮತ್ತು ಕುಟುಂಬದ ಒಳಿತಿಗೆ ಮಾದಕ ವಸ್ತುಗಳಿಂದ ದೂರ ಇರಬೇಕು. ತಮ್ಮ ಸ್ನೇಹಿತರು ಹಾಗೂ ಕುಟುಂಬದವರು ಮಾದಕ ದ್ರವ್ಯಗಳಿಂದ ದೂರ ಇರುವಂತೆ ಜಾಗೃತಿ ಮೂಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಚ್. ಸವಿತಾರಾಣಿ, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ತಹಾ ಖಲೀಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಡೂರು ಪೊಲೀಸ್ ತರಬೇತಿ ಶಾಲೆ ಎಸ್ಪಿ.ಪಾಪಣ್ಣ, ಕಡೂರು ಪಿಎಸ್ಐ ಸಜಿತ್, ಪಂಚನಹಳ್ಳಿ ಪಿಎಸ್ಐ ಶಾಹಿದ್ ಅಪ್ರಿದ್, ಗೀತಾ, ಪಿಎಸ್ಐಗಳಾದ ರಂಗನಾಥ್, ಧನಂಜಯ್, ಲೀಲಾವತಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಎಚ್.ಆರ್.ರೇಖಾ, ಪಿಟಿಎಸ್ ತರಬೇತಿ ಕೇಂದ್ರದ 450 ಕ್ಕೂ ಹೆಚ್ಚು ಪೊಲೀಸ್ ಪೇದೆಗಳು ಶಾಲಾ ಮಕ್ಕಳು, ಶಿಕ್ಷಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.26ಕೆಕೆಡಿಯು1.ಕಡೂರು ಪೊಲೀಸ್, ಪಿಟಿಎಸ್ ಶಿಬಿರಾರ್ಥಿಗಳು ಹಾಗೂ ಶಾಲಾ ಮಕ್ಕಳು ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಪ್ರಯುಕ್ತ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಜಾಥಕ್ಕೆ ನ್ಯಾಯಾಧೀಶ ಇರ್ಫಾನ್ ಚಾಲನೆ ನೀಡಿದರು,