ಗಣೇಶ ಆರಾಧಿಸಿದರೆ ಕಷ್ಟಗಳು ದೂರ: ಶಾಸಕ ಬಾಲಚಂದ್ರ ಜಾರಕಿಹೊಳಿ

| Published : Sep 29 2024, 01:53 AM IST

ಸಾರಾಂಶ

ಹಿಂದು ಧರ್ಮದಲ್ಲಿ ಯಾವುದೇ ಪೂಜೆ, ಪುನಸ್ಕಾರವಿರಲಿ. ಮೊದಲು ಗಣೇಶನಿಗೆ ಪೂಜೆ ಸಲ್ಲಿಸುವ ವಾಡಿಕೆ ಪ್ರಾಚಿನ ಕಾಲದಿಂದಲೂ ರೂಢಿಯಲ್ಲಿದೆ. ಯಾವುದೇ ಕೆಲಸವಿರಲಿ ಗಣೇಶನನ್ನು ಪೂಜಿಸಿ ಆರಾಧಿಸಿದರೆ ಕಷ್ಟ, ಕಾರ್ಪಣ್ಯಗಳು ದೂರವಾಗಲಿವೆ ಎಂಬ ನಂಬಿಕೆ ಈಗಲೂ ಇದೆ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಹಿಂದು ಧರ್ಮದಲ್ಲಿ ಯಾವುದೇ ಪೂಜೆ, ಪುನಸ್ಕಾರವಿರಲಿ. ಮೊದಲು ಗಣೇಶನಿಗೆ ಪೂಜೆ ಸಲ್ಲಿಸುವ ವಾಡಿಕೆ ಪ್ರಾಚಿನ ಕಾಲದಿಂದಲೂ ರೂಢಿಯಲ್ಲಿದೆ. ಯಾವುದೇ ಕೆಲಸವಿರಲಿ ಗಣೇಶನನ್ನು ಪೂಜಿಸಿ ಆರಾಧಿಸಿದರೆ ಕಷ್ಟ, ಕಾರ್ಪಣ್ಯಗಳು ದೂರವಾಗಲಿವೆ ಎಂಬ ನಂಬಿಕೆ ಈಗಲೂ ಇದೆ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಶುಕ್ರವಾರ ಪಟ್ಟಣದ ಬಸವ ಮಂಟಪದಲ್ಲಿ ಏಕದಂತ ಉತ್ಸವ ಸಮಿತಿಯ ಮೂಡಲಗಿ ಮಹಾರಾಜ ಗಣೇಶನ ವಿಸರ್ಜನಾ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಧರ್ಮದಲ್ಲಿ ಗಣೇಶನೇ ಶ್ರೇಷ್ಠವಾದ ದೇವರು ಎಂದರು.

ಮೂಡಲಗಿಯಲ್ಲಿ ಇದೇ ಮೊದಲ ಬಾರಿಗೆ ಏಕದಂತ ಯುವಕ ಮಂಡಳ ಸಾರ್ವಜನಿಕ ಗಣೇಶ ಉತ್ಸವ ಮಾಡುತ್ತಿದ್ದು, 21ನೇ ದಿನಕ್ಕೆ ಗಣೇಶನನ್ನು ವಿಸರ್ಜನೆ ಮಾಡುತ್ತಿದೆ. ಸಂತೋಷ ಸೋನವಾಲಕರ, ಮಹಾದೇವ ಶೆಕ್ಕಿ, ಮಲ್ಲು ಯಾದವಾಡ ಅವರ ನೇತೃತ್ವದಲ್ಲಿ ಅನೇಕ ಯುವಕರು ಮೂಡಲಗಿ ಮಹಾರಾಜ ಗಣೇಶನನ್ನು 21 ದಿನಗಳ ತನಕ ಪ್ರತಿಷ್ಠಾಪಿಸಿದ್ದು, ಯುವಕರ ಕಾರ್ಯಕ್ಕೆ ಅಭಿನಂದಿಸುವುದಾಗಿ ಹೇಳಿದರು.

ಈ ಭಾಗದ ಆರಾಧ್ಯ ದೈವವಾಗಿರುವ ಶಿವಬೋಧರಂಗ ಮಠ ಕೂಡ ಅನೇಕ ಪವಾಡ ಸೃಷ್ಟಿಸಿದೆ. ಪ್ರತಿಯೊಬ್ಬರ ಮನಸ್ಸು, ಹೃದಯಲ್ಲಿ ಶ್ರೀಮಠ ನೆಲೆಸಿರುವುದು ಭಕ್ತ ಸಮೂಹದ ಜಾತ್ಯತೀತ ತತ್ವಕ್ಕೆ ಮಾದರಿಯಾಗಿದೆ ಎಂದ ಅವರು, ಈ ಭಾಗದ ಸಕಲ ಭಕ್ತರ ಸೇವಾ ಕಾರ್ಯಗಳನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದರು.

ಲೋಕ ಕಲ್ಯಾಣಕ್ಕೆ ಒಳ್ಳೆಯದಾಗಲಿ, ಸಕಾಲಕ್ಕೆ ಮಳೆಯಾಗಿ, ಉತ್ತಮ ಫಸಲು ಬಂದು, ರೈತರ ಮೊಗದಲ್ಲಿ ಸಂತಸವನ್ನುಂಟು ಮಾಡಲಿ. ಅನ್ನದಾತನ ಕಷ್ಟಗಳು ದೂರವಾಗಲಿ ಎಂದು ಶಾಸಕರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಪ್ರಮುಖರಾದ ಸುಭಾಸ ಢವಳೇಶ್ವರ, ರವಿ ಸೋನವಾಲಕರ, ಸಂತೋಷ ಸೋನವಾಲಕರ, ಮಹಾದೇವ ಶೆಕ್ಕಿ, ಶಂಕರಯ್ಯ ಹಿರೇಮಠ, ಅರುಣ ಪತ್ತಾರ, ಮಲ್ಲು ಯಾದವಾಡ, ವಿನೋದ ಮಾನೆ, ಅನ್ವರ್‌ ನದಾಫ್‌, ಭೀಮಶಿ ಢವಳೇಶ್ವರ, ಹಣಮಂತ ಗುಡ್ಲಮನಿ, ವಿನೋದ ಪತ್ತಾರ, ಶಿವಬಸು ಸುಣಧೋಳಿ, ಶೀತಲ ಬೇವಿನಕಟ್ಟಿ, ಮನೋಹರ ಸಣ್ಣಕ್ಕಿ, ಪುರಸಭೆ ಸದಸ್ಯರು, ಏಕದಂತ ಉತ್ಸವ ಸಮಿತಿ ಸದಸ್ಯರು, ವ್ಯಾಪಾರಸ್ಥರು, ಗಣ್ಯರು ಉಪಸ್ಥಿತರಿದ್ದರು.ಭಾರತ ಕೋಮು ಸಾಮರಸ್ಯ ಬಿಂಬಿಸುವ ಜಗತ್ತಿನ ಏಕಮೇವ ದೇಶವಾಗಿದೆ. ಅನೇಕ ಜಾತಿಗಳು, ನಾನಾ ಧರ್ಮಗಳು, ವಿವಿಧ ಪಂಕ್ತಿಗಳು ಇದ್ದರೂ ಎಲ್ಲರೂ ಜಾತ್ಯತೀತ ಮನೋಭಾವದಿಂದ ಬದುಕುತ್ತಿದ್ದೇವೆ. ನಮ್ಮ ಆಚರಣೆಗಳು ಭಿನ್ನವಾಗಿದ್ದರೂ ವಿವಿಧತೆಯಲ್ಲಿ ಏಕತೆ ಅಳವಡಿಸಿಕೊಳ್ಳುತ್ತಿದ್ದೇವೆ. ಅದು ಯಾವುದೇ ಆಚರಣೆ ಇರಬಹುದು. ಎಲ್ಲರೂ ಜಾತ್ಯತೀತರಾಗಿ ಭಾಗವಹಿಸುತ್ತಾರೆ. ಅದಕ್ಕೇ ಹೇಳುವುದು ಭಾರತವು ಜಾತ್ಯಾತೀತ ರಾಷ್ಟ್ರ ಎಂದು.

-ಬಾಲಚಂದ್ರ ಜಾರಕಿಹೊಳಿ ಶಾಸಕ ಅರಬಾವಿ