ಸಾರಾಂಶ
ಸುಹಾಸ್ ಶೆಟ್ಟಿ ಹತ್ಯೆ ಬಳಿಕ ದ.ಕ.ಪೊಲೀಸರು ತಡರಾತ್ರಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮನೆಗಳಿಗೆ ತೆರಳಿ ತೊಂದರೆ ನೀಡುತ್ತಿದ್ದಾರೆ. ಇದನ್ನು ತಕ್ಷಣ ನಿಲ್ಲಿಸಬೇಕು.
ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಬಳಿಕ ದ.ಕ.ಪೊಲೀಸರು ತಡರಾತ್ರಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮನೆಗಳಿಗೆ ತೆರಳಿ ತೊಂದರೆ ನೀಡುತ್ತಿದ್ದಾರೆ. ಇದನ್ನು ತಕ್ಷಣ ನಿಲ್ಲಿಸಬೇಕು. ಇದೇ ವರ್ತನೆಯನ್ನು ಮುಂದುವರಿಸಿದರೆ ಆಂದೋಲನ ರೂಪದಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ಕನ್ನಡದಲ್ಲಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ಜಿಲ್ಲೆಗೆ ಭೇಟಿ ನೀಡಿ, ಅಧಿಕಾರಿಗಳು, ಕಾರ್ಯಕರ್ತರ ಜತೆ ಮಾತುಕತೆ ನಡೆಸಿತು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, ದ.ಕ.ಜಿಲ್ಲಾ ಪೊಲೀಸರ ಇತ್ತೀಚಿನ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಪೊಲೀಸರು ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಗೂಂಡಾವರ್ತನೆ ತೋರಿಸುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಮನೆಗಳಿಗೆ ತಡರಾತ್ರಿ ಬಾಗಿಲು ತಟ್ಟಿ ಫೋಟೋ ತೆಗೆದು ಬೆದರಿಸುತ್ತಿದ್ದಾರೆ. ಇದನ್ನು ನಿಲ್ಲಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ಬೀದಿ ಬೀದಿಗಳಲ್ಲಿ ಹೋರಾಟ ಮಾಡಲಿದ್ದೇವೆ. ಪರಿಸ್ಥಿತಿಯನ್ನು ಅಲ್ಲಿಯವರೆಗೆ ತೆಗೆದುಕೊಂಡು ಹೋಗಲು ಬಿಡಬೇಡಿ ಎಂದು ಹೇಳಿದರು.
ಹಿಂದೂ ಕಾರ್ಯಕರ್ತರ ಟಾರ್ಗೆಟ್:
ಕೆಲ ಸಮಯದ ಹಿಂದೆ ಕಾಂಗ್ರೆಸ್ ಸರ್ಕಾರ ಕೋಮು ನಿಗ್ರಹ ದಳ ರಚನೆ ಮಾಡಿದ ನಂತರ ಪೊಲೀಸರ ಗೂಂಡಾವರ್ತನೆ ಜಾಸ್ತಿಯಾಗಿದೆ. ಕೋಮು ನಿಗ್ರಹ ದಳ ಇರುವುದೇ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲು. ಕರಾವಳಿ ಬಿಜೆಪಿ, ಹಿಂದೂ ಕಾರ್ಯಕರ್ತರ ಭದ್ರಕೋಟೆಯಾಗಿದೆ. ಅದಕ್ಕಾಗಿಯೇ ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ಷಡ್ಯಂತ್ರವನ್ನು ಕಾಂಗ್ರೆಸ್ ಸರ್ಕಾರ ರೂಪಿಸಿದೆ ಎಂದು ದೂರಿದರು.
ರಾಜ್ಯದಲ್ಲಿ 800ಕ್ಕೂ ಅಧಿಕ ರೇಪ್ ಪ್ರಕರಣಗಳು ನಡೆದಿವೆ. ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇವುಗಳ ಬಗ್ಗೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ದ.ಕ.ದಲ್ಲಿ ಅಲ್ಪಸಂಖ್ಯಾತರನ್ನು ಖುಷಿಪಡಿಸಲು ಹಿಂದೂಗಳಿಗೆ ತೊಂದರೆ ನೀಡಲಾಗುತ್ತಿದೆ. ಹೀಗೆ ಮುಂದುವರಿದು ಕಾನೂನು ಸುವ್ಯವಸ್ಥೆ ಕುಸಿದುಬಿಟ್ಟರೆ ರಾಜ್ಯ ಸರ್ಕಾರವೇ ಅದರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್ಐಆರ್ ದಾಖಲು ಮಾಡುತ್ತಾರೆ. ಆದರೆ, ರಾಜ್ಯಪಾಲರ ವಿರುದ್ಧ ಮಾತನಾಡಿದ ಎಂಎಲ್ಸಿ ಐವನ್ ಡಿಸೋಜ ಮೇಲೆ ಏಕೆ ಕ್ರಮ ಇಲ್ಲ? ಇಲ್ಲಿನ ಪೊಲೀಸರು ರಾಜ್ಯ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.
ಅಕ್ರಮಗಳಿಗೆ ಕಡಿವಾಣ ಹಾಕಲಿ:
ಕೋಮು ಸೌಹಾರ್ದತೆ ಕಾಪಾಡಬೇಕಾದರೆ ಲವ್ ಜಿಹಾದ್, ಗೋಹತ್ಯೆ, ಮರಳು ಮಾಫಿಯಾ, ಡ್ರಗ್ಸ್ ಪ್ರಕರಣಗಳನ್ನು ಸರಿಯಾಗಿ ನಿರ್ವಹಿಸಬೇಕು. ಪೊಲೀಸರು ಈ ಕೆಲಸ ಮಾಡಿದ್ದರೆ ನಮ್ಮ ಕಾರ್ಯಕರ್ತರು ಬೀದಿಗಿಳಿಯುವ ಪರಿಸ್ಥಿತಿ ಬರುತ್ತಿರಲಿಲ್ಲ. ಮೊದಲು ಇಂತಹ ಅಕ್ರಮಗಳಿಗೆ ಪೊಲೀಸರು ಕಡಿವಾಣ ಹಾಕಲಿ ಎಂದು ಒತ್ತಾಯಿಸಿದರು.
ಗೃಹ ಸಚಿವರು ಯಾರದ್ದೋ ಒತ್ತಡಕ್ಕೆ ಮಣಿದು ಸುಹಾಸ್ ಶೆಟ್ಟಿ ಮನೆಗೆ ಹೋಗಿಲ್ಲ. ಈ ಪ್ರಕರಣವನ್ನು ಎನ್ಐಎಗೆ ವಹಿಸಲು ಒತ್ತಾಯ ಹೇರಿದರೂ ರಾಜ್ಯ ಸರ್ಕಾರ ಒಪ್ಪಿರಲಿಲ್ಲ. ಆದರೆ, ಪ್ರಕರಣದಲ್ಲಿ ವಿದೇಶಿ ಹಣ, ನಿಷೇಧಿತ ಪಿಎಫ್ಐ ಸಂಚು ಇರುವುದು ಗೊತ್ತಾಗಿ ಕೇಂದ್ರ ಸರ್ಕಾರವೇ ಎನ್ಐಎ ತನಿಖೆಗೆ ವಹಿಸಿರುವುದು ಸ್ವಾಗತಾರ್ಹ ಎಂದು ವಿಜಯೇಂದ್ರ ಹೇಳಿದರು.
‘ರಾತ್ರಿ ಮನೆಗೆ ಹೋಗಿ ಫೋಟೋ ತೆಗೆಯೋದು ಯಾವ ಕಾನೂನು?’
ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ದಕ್ಷಿಣ ಕನ್ನಡದ ಎಲ್ಲ ಪೊಲೀಸ್ ಠಾಣೆಗಳು ಕಾಂಗ್ರೆಸ್ ಠಾಣೆಗಳಾಗಿವೆ ಎಂದು ಆರೋಪಿಸಿದರು. ರಾತ್ರಿ 12, 2, 3 ಗಂಟೆಗೆ ಮನೆಗೆ ಹೋಗಿ ಫೋಟೊ ತೆಗೆಯೋದು ಯಾವ ಕಾನೂನು ಪುಸ್ತಕದಲ್ಲಿದೆ? ‘ಭಾರತ್ ಮಾತಾಕೀ ಜೈ’ ಎನ್ನುವವರನ್ನೂ, ಪಾಕಿಸ್ತಾನ್ ಜಿಂದಾಬಾದ್ ಹೇಳೋರನ್ನೂ ಸಮಾನವಾಗಿ ನೋಡುವುದು ಸರಿಯಾ? ಪೊಲೀಸರು ಇಂತಹ ವರ್ತನೆಯನ್ನು ಕೈಬಿಡುವಂತೆ ಖುದ್ದು ಭೇಟಿ ನೀಡಿ ಹೇಳಿದ್ದೇವೆ. ಇದೆಲ್ಲ ಬಹಳ ದಿನ ನಡೆಯಲ್ಲ. ಇನ್ನು ಎರಡೇ ವರ್ಷ ಸರ್ಕಾರ ಇರೋದು. ಯಾರ್ಯಾರ ಮಾತನ್ನೋ ಕೇಳಿದರೆ ಮುಂದೆ ಪಶ್ಚಾತ್ತಾಪ ಪಡಬೇಕಾದೀತು. ಇಂದೇ ಲಾಸ್ಟ್. ನಾಳೆಯಿಂದ ಇಂಥ ಪಾಠ ಇಟ್ಕೋಬೇಡಿ. ಹಿಂದೂ ಕಾರ್ಯಕರ್ತರಿಗೆ ತೊಂದರೆಯಾಗಲು ನಾವು ಬಿಡಲ್ಲ. ಇಡೀ ಪಕ್ಷ ಕಾರ್ಯಕರ್ತರ ಜತೆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಹಾಸ್ ಶೆಟ್ಟಿಯನ್ನು ರೌಡಿ ಶೀಟರ್ ಎನ್ನುತ್ತಾರೆ. ರೌಡಿ ಎನ್ನಲು ಬಹಳ ವ್ಯಾಖ್ಯಾನಗಳಿವೆ. ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಮೇಲೆ ಎಷ್ಟು ಪ್ರಕರಣಗಳಿಲ್ಲ? ನ್ಯಾಯಾಲಯವು ಅಪರಾಧಿ ಅಂತ ತೀರ್ಮಾನ ಮಾಡುವವರೆಗೂ ಅಪರಾಧಿಯಾಗಲು ಸಾಧ್ಯವಿಲ್ಲ. ಅಬ್ದುಲ್ ರಹೀಂ ಹತ್ಯೆ ಪ್ರಕರಣವನ್ನು ಬೇಕಾದರೂ ಎನ್ಐಎಗೆ ವಹಿಸಲಿ, ನಮ್ಮ ಆಕ್ಷೇಪವಿಲ್ಲ ಎಂದು ಹೇಳಿದರು.