ಸಾರಾಂಶ
ರಾಮನಗರ: ವಿದ್ಯಾಲಯ ಮತ್ತು ದೇವಾಲಯ ಎರಡನ್ನು ಒಟ್ಟಿಗೆ ತೆಗೆದುಕೊಂಡು ಹೋದರೆ ಹಾಲು ಮತಸ್ಥ ಕುರುಬ ಸಮುದಾಯ ಪ್ರಗತಿ ಕಾಣಲು ಸಾಧ್ಯ ಎಂದು ಹೊಸದುರ್ಗದ ಕಾಗಿನೆಲೆ ಸಂಸ್ಥಾನ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಬಿಡದಿ ಪುರಸಭೆ ವ್ಯಾಪ್ತಿಯ ಹಲಸಿನಮರದದೊಡ್ಡಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿದೇವಿಯ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಶ್ರೀಗಳು ಮಾತನಾಡಿದರು.ಮನುಷ್ಯನಲ್ಲಿ ಜ್ಞಾನ ಮತ್ತು ಭಕ್ತಿ ಇರಬೇಕು. ಆದರೆ, ನಮ್ಮ ಜನರು ಜ್ಞಾನಕ್ಕೆ ಆದ್ಯತೆಯನ್ನೇ ನೀಡುವುದಿಲ್ಲ.
ದೇವಾಲಯದಲ್ಲಿ ಭಕ್ತಿ ಮತ್ತು ವಿದ್ಯಾಲಯದಲ್ಲಿ ಜ್ಞಾನ ಪ್ರಾಪ್ತಿಯಾಗುತ್ತದೆ. ಈ ಎರಡನ್ನೂ ಒಟ್ಟಿಗೆ ಕರೆದೊಯ್ದರೆ ಹಾಲುಮತಸ್ಥ ಕುರುಬ ಸಮುದಾಯ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.ಜ್ಞಾನದಾಸೋಹ ಮತ್ತು ಅನ್ನದಾಸೋಹಗಳೆರಡರಲ್ಲಿ ಜ್ಞಾನದಾಸೋಹಕ್ಕೆ ಜನರು ಹೆಚ್ಚಿನ ಮಹತ್ವ ನೀಡಬೇಕು. ಸಮಾಜದಲ್ಲಿ ಮನುಷ್ಯ ಜ್ಞಾನವಿಲ್ಲದೆ ಅಜ್ಞಾನಿಯಾಗಿ ನೂರು ವರ್ಷ ಬದುಕಿದರೆ ಏನು ಪ್ರಯೋಜನ. ಬದುಕುವುದು ಮುಖ್ಯವಲ್ಲ, ಹೇಗೆ ಬದುಕಿದೆ ಎಂಬುದು ಬಹಳ ಮುಖ್ಯವಾಗಲಿದೆ ಎಂದು ಹೇಳಿದರು.
ಒಳ್ಳೆಯದು, ಕೆಟ್ಟದ್ದರ ಬಗ್ಗೆ ವಿವೇಚನೆ ಮಾಡುವ ಬಗ್ಗೆ ಜನರು ಕಿವಿಗೊಡಬೇಕಿದೆ. ಮೂಢನಂಬಿಕೆಗಳನ್ನು ನಂಬಿ ಸಮುದಾಯದ ಜನರು ಪ್ರಗತಿ ಮತ್ತು ಆರ್ಥಿಕವಾಗಿ ಹಿನ್ನಡೆ ಸಾಧಿಸುತ್ತಿದ್ದೀರಿ, ದೇವಿಗೆ ದುರ್ಗುಣಗಳನ್ನು ಬಲಿ ಹಾಕಿದರೆ ಆಗ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಶ್ರೀಗಳು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಸಮುದಾಯದ ಪ್ರಗತಿಗೆ ಮಕ್ಕಳಿಗೆ ಪೋಷಕರು ಶಿಕ್ಷಣವನ್ನು ಕೊಡಿಸುವ ಕೆಲಸವನ್ನು ಮಾಡುವಂತೆ ಕರೆ ನೀಡಿದರು.
ದೇವಾಲಯ ನಿರ್ಮಾಣ ಕಾರ್ಯಕ್ಕೆ ನೆರವಾದ ರಾಘವೇಂದ್ರ ನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಡದಿ ಪುರಸಭೆ ಅಧ್ಯಕ್ಷ ಎಂ.ಎನ್.ಹರಿಪ್ರಸಾದ್, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಮನುಲೋಕೇಶ್, ಹೊಂಬಯ್ಯ, ದೇವರಾಜು, ಬಿಂದ್ಯಾ, ಮಾಜಿ ಸದಸ್ಯೆ ಚಂದ್ರಕಲಾ ನಾಗೇಶ್, ಬಿ.ಎಂ.ರಮೇಶ್ ಕುಮಾರ್,ನಿವೃತ್ತ ಉಪ ವಿಭಾಗಾಧಿಕಾರಿ ಪುಟ್ಟಹಲಗಯ್ಯ, ಯಜಮಾನರಾದ ಕಗ್ಗಲ್ಲಯ್ಯ, ನಾಗೇಶ್, ಮರಿಯಪ್ಪ, ಚೌ.ಪು.ಸ್ವಾಮಿ, ನಾಗೇಶ್ ಮತ್ತಿತರರಿದ್ದರು.ಕಾರ್ಯಕ್ರಮಕ್ಕೂ ಮುನ್ನಾ ಕನಕದಾಸ ಜಾಗೃತಿ ಸಮಿತಿಯವರು ಬಿಡದಿ ಪಟ್ಟಣದಿಂದ ವಿವಿಧ ಜನಪದ ಕಲಾತಂಡಗಳೊಂದಿಗೆ ಚೌಡೇಶ್ವರಿ ದೇವಿ ಮತ್ತು ಸ್ವಾಮೀಜಿಯನ್ನು ಪೂರ್ಣಕುಂಭಗಳೊಂದಿಗೆ ಮೆರವಣಿಗೆಯಲ್ಲಿ ಗ್ರಾಮಕ್ಕೆ ಅದ್ಧೂರಿಯಾಗಿ ಕರೆತರಲಾಯಿತು.
23ಕೆಆರ್ ಎಂಎನ್ 3.ಜೆಪಿಜಿರಾಮನಗರ ತಾಲೂಕಿನ ಬಿಡದಿ ಪುರಸಭೆ ವ್ಯಾಪ್ತಿಯ ಹಲಸಿನಮರದದೊಡ್ಡಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿದೇವಿಯ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ದೇವಾಲಯ ನಿರ್ಮಾಣ ಕಾರ್ಯಕ್ಕೆ ನೆರವಾದ ರಾಘವೇಂದ್ರ ನಾಯಕ್ ಅವರನ್ನು ಶ್ರೀಗಳು ಸನ್ಮಾನಿಸಿದರು.