ರಂಭಾಪುರಿ ಪೀಠದಲ್ಲಿ ನಡೆದ ದವನದ ಹುಣ್ಣಿಮೆ ಧರ್ಮ ಸಮಾರಂಭ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸತ್ಯ ಹೇಳು ಧರ್ಮದಂತೆ ನಡೆ ಎಂದು ಶಾಸ್ತ್ರ ಹೇಳುತ್ತದೆ. ಆದರೆ ಇಂದು ಸುಳ್ಳು ಮೋಸ ಕಪಟ ತುಂಬಿದೆ. ಸುಳ್ಳಿಗೆ ವೇಗ ವಿರುವುದು ಎಷ್ಟು ನಿಜವೋ ಸತ್ಯಕ್ಕೆ ಶಕ್ತಿ ಇರುವುದು ಅಷ್ಟೇ ಸತ್ಯವೆಂದು ಶ್ರೀ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.

ರಂಭಾಪುರಿ ಪೀಠದಲ್ಲಿ ನಡೆದ ದವನದ ಹುಣ್ಣಿಮೆ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿ ಭಗವಂತ ಮಾಡಿದ ಸೃಷ್ಟಿ ಕೆಡಿಸುವವರ ಸಂಖ್ಯೆ ಹೆಚ್ಚಿದೆ. ಕೆಟ್ಟು ಹೋದುದನ್ನು ಸರಿಪಡಿಸುವವರ ಸಂಖ್ಯೆ ಬಹಳ ಕಡಿಮೆ. ಸರಿಪಡಿಸುವ ಪ್ರಜ್ಞಾವಂತರ ಸಂಖ್ಯೆ ಹೆಚ್ಚಿಸುವ ಕೆಲಸವಾಗಬೇಕಿದೆ. ಗುರಿ ಯತ್ತ ಎಷ್ಟು ದೊಡ್ಡ ಹೆಜ್ಜೆ ಇಟ್ಟಿದ್ದೇವೆ ಎಂಬುಕ್ಕಿಂತ ಆತ್ಮ ವಿಶ್ವಾಸದ ಮೊದಲ ಹೆಜ್ಜೆ ಬಹಳ ಮುಖ್ಯ.

ಬಡತನದಿಂದ ಕುಗ್ಗಬೇಡ, ಸಿರಿತನ ಎಂದು ಉಬ್ಬಬೇಡ. ಕತ್ತಲೆ ಸರಿದ ಮೇಲೆ ಬೆಳಕು ಬಂದೇ ಬರುತ್ತದೆ ಎಂಬ ನಂಬಿಕೆ ಯಿರಲಿ ಎಂದರು.


ಇದೇ ಸಂದರ್ಭದಲ್ಲಿ ಸೋಲ್ಲಾಪುರ ದಕ್ಷಿಣ ತಾಲೂಕಿನ ಶ್ರೀಮದ್ರಂಭಾಪುರಿ ಶಾಖಾ ಹಿರೇಮಠದ ನೂತನ ಪಟ್ಟಾಧ್ಯಕ್ಷ ಅಭಿನವ ಶಿವಾನಂದ ಸ್ವಾಮಿಗೆ ಶ್ರೀ ಗುರು ಪಟ್ಟಾಧಿಕಾರದ ಸಂಪುಟ ಪತ್ರ ಪ್ರದಾನ ಮಾಡಿದರು. ಹುಡುಗಿ ಹಿರೇಮಠದ ಸೋಮೇಶ್ವರ ಶ್ರೀ ನುಡಿ ನಮನ ಸಲ್ಲಿಸಿದರು. ಅರಸೀಕೆರೆ ಮಾಜಿ ಶಾಸಕ ಕೆ.ಪಿ. ಪ್ರಭುಕುಮಾರ್, ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ, ಮುರುಂಡಿ ಶಿವಯ್ಯ, ಕೆ.ಪಿ.ಚಂದ್ರಶೇಖರ, ಬೆಂಗಳೂರಿನ ಸಿದ್ಧಲಿಂಗೇಶ್ವರ ಗುಂಡಗಟ್ಟಿ, ಶಿವಮೊಗ್ಗದ ಗಂಗಾಧರ ಗುಂಡಗಟ್ಟಿ, ಶಿರಸಿ ಎ.ರವೀಂದ್ರ ನಾಯ್ಕ, ಪ್ರಭುದೇವ ಕಲ್ಮಠ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ 10 ಜನ ವೀರಮಾಹೇಶ್ವರ ವಟುಗಳಿಗೆ ಶಾಸ್ತ್ರೋಕ್ತವಾಗಿ ಶಿವದೀಕ್ಷಾ ಅಯ್ಯಾಚಾರ ನಡೆಯಿತು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿ ಬೆಳಗಾಲಪೇಟೆ ಹಿರೇಮಠ ಸಿದ್ಧಲಿಂಗ ಶಾಸ್ತ್ರೀಗಳು ವೈದಿಕ ಕಾರ್ಯ ನೆರವೇರಿಸಿದರು. ಶ್ರೀ ಪೀಠದ ಎಲ್ಲ ದೈವರಿಗೆ ಪೌರ್ಣಿಮೆಯ ವಿಶೇಷ ಪೂಜೆ ನಡೆಯಿತು. ೦೨ಬಿಹೆಚ್‌ಆರ್ ೪:

ಸೋಲ್ಲಾಪುರ ಶ್ರೀಮದ್ರಂಭಾಪುರಿ ಶಾಖಾ ಹಿರೇಮಠದ ನೂತನ ಪಟ್ಟಾಧ್ಯಕ್ಷ ಅಭಿನವ ಶಿವಾನಂದ ಸ್ವಾಮಿಗೆ ಶ್ರೀ ಗುರು ಪಟ್ಟಾಧಿಕಾರದ ಸಂಪುಟ ಪತ್ರವನ್ನು ರಂಭಾಪುರಿ ಶ್ರೀ ಪ್ರದಾನ ಮಾಡಿದರು.