ಸಾರಾಂಶ
ಬ್ಯಾಡಗಿ: ಭೂಮಿ ಮೇಲ್ಭಾಗದಲ್ಲಿ ಶೇ.40ಕ್ಕಿಂತ ಹೆಚ್ಚು ಅರಣ್ಯ ಸಂರಕ್ಷಣೆ ಮಾಡದಿದ್ದಲ್ಲಿ ಜೀವ ಸಂಕುಲಗಳಿಗೆ ಉಳಿಗಾಲವಿಲ್ಲ ಎಂಬುದು ವಾಸ್ತವ ಸಂಗತಿ, ಆದರೆ ಪರಿಸರ ದಿನಾಚರಣೆ ಎಂಬುದು ಕೇವಲ ವಾರ್ಷಿಕ ವೇಳಾಪಟ್ಟಿಯಂತಾಗಿದೆ ಎಂದು ಪ್ರಭಾರಿ ಮುಖ್ಯಶಿಕ್ಷಕ ಮಾಲತೇಶ ಚಳಗೇರಿ ಖೇದ ವ್ಯಕ್ತಪಡಿಸಿದರು.
ತಾಲೂಕಿನ ಬುಡಪನಹಳ್ಳಿ ಗ್ರಾಮದ ಶ್ರೀ ನಾಗನಗೌಡ ಪಾಟೀಲ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ ನಿಮಿತ್ತ ವಿವಿಧ ಜಾತಿಯ ಬೀಜದ ಉಂಡೆಗಳನ್ನು ಅರಣ್ಯ ಪ್ರದೇಶದಲ್ಲಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸರ್ಕಾರದ ಪ್ರಸ್ತುತ ನಿಯಮದಂತೆ ಶೇ.33ರಷ್ಟು ಅರಣ್ಯ ಸಂರಕ್ಷಣೆ ಮಾಡಬೇಕು, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಷ್ಟನ್ನೂ ನಿರ್ವಹಿಸಿರುವ ಬಗ್ಗೆ ಅನುಮಾನಗಳಿವೆ, ಆದರೆ ಪರಿಸರದ ಯಾರೊಬ್ಬರೂ ಕಾಳಜಿ ತೋರುತ್ತಿಲ್ಲ, ಹೀಗಾಗಿ ವೃಕ್ಷಗಳನ್ನು ನಾವು ರಕ್ಷಿಸಿದಲ್ಲಿ ಅವುಗಳು ನಮ್ಮನ್ನು ಆರೋಗ್ಯವಾಗಿಡಲಿವೆ ಎಂದರು.
ಬೀಜದ ಉಂಡೆ ಅತ್ಯಂತ ಪರಿಣಾಮಕಾರಿ: ಶುಚಿಯಾದ ಮಣ್ಣಿನಲ್ಲಿ ಬೀಜಗಳನ್ನು ಮಿಶ್ರಣ ಮಾಡಿ, ಅವುಗಳನ್ನು ಉಂಡೆ ಆಕಾರದಲ್ಲಿ ರಚಿಸಿ ಅರಣ್ಯಗಳಲ್ಲಿ ಚೆಲ್ಲಬೇಕು, ಪರಿಸರದಲ್ಲಿ ಸಸಿಗಳನ್ನು ನೆಡುವುದರ ಜೊತೆಗೆ ಅರಣ್ಯ ಪ್ರದೇಶದಲ್ಲಿ ಖಾಲಿ ಇರುವಂತಹ ಪ್ರದೇಶದಲ್ಲಿ ಬೀಜದುಂಡೆಗಳನ್ನು ಹಾಕುವುದರಿಂದ ಮಳೆಗಾಲದಲ್ಲಿ ಮೊಳಕೆಯೊಡೆದು ಬೆಳೆಯುತ್ತವೆ, ಇದರಿಂದ ಅತ್ಯಂತ ಪರಿಣಾಮಕಾರಿಯಾಗಿ ಅರಣ್ಯ ವೃಕ್ಷಗಳನ್ನು ಬೆಳೆಸಬಹುದಾಗಿದೆ, ಬೀಜ ಪ್ರಸರಣಕ್ಕೆ ಇದು ಸಕಾಲವಾಗಿದ್ದು ಎಂದರು.ಸಾವಿರ ಬೀಜದುಂಡೆ ಪ್ರಸರಣ: ಅರಣ್ಯ ನಾಶದಿಂದ ಜೀವ ಸಂಕುಲ ಸಂಕಷ್ಟದಲ್ಲಿದೆ, ನಾವೆಲ್ಲರೂ ಪರಿಸರ ಉಳಿಸಿ ಬೆಳೆಸಬೇಕು, ಪರಿಸರ ಕಾಪಾಡಿದರೆ ಅದು ನಮ್ಮ ಭವಿಷ್ಯವನ್ನು ಕಾಪಾಡುತ್ತದೆ, ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳುವ ಮೂಲಕ ಸಮತೋಲನ ಕಾಪಾಡಿಕೊಳ್ಳಬೇಕು ಮನುಷ್ಯನ ಬದುಕು ತ್ವೇಷಮಯವಾಗಿದ್ದರೆ, ಸುಮಾರು ಒಂದು ಸಾವಿರಕ್ಕೂ ಅಧಿಕ ಬೀಜಗಳನ್ನು ಸಿದ್ದಪಡಿಸಿ ಅರಣ್ಯ ಪ್ರದೇಶದಲ್ಲಿ ಎಸೆಯಲಾಯಿತು. ಇದೇ ಸಂದರ್ಭದಲ್ಲಿ ಬೀಜದುಂಡೆಯಲ್ಲಿನ ಬೀಜವು ಮೊಳಕೆಯೊಡೆದು ಗಿಡವಾಗಿ ಬೆಳೆಯುವುದರ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ತೋರಿಸಲಾಯಿತು. ವಿಜ್ಞಾನ ಶಿಕ್ಷಕ ರವಿ ಚೌಟಗಿ, ಕನ್ನಡ ಶಿಕ್ಷಕ ದೇವೇಂದ್ರಪ್ಪ, ಹಿಂದಿ ಶಿಕ್ಷಕ ಸಂಗಪ್ಪ, ಗಣಿತ ಶಿಕ್ಷಕಿ ಅಪರ್ಣಾ, ಸಮಾಜ ವಿಜ್ಞಾನ ಶಿಕ್ಷಕಿ ನಾಗರತ್ನ, ರಮೇಶ ಅಂಬಿಗೇರ, ಪ್ರದೀಪ ವಡ್ನಿಕೊಪ್ಪ ಅರಣ್ಯ ಕಾವಲುಗಾರ ಮೋಟೆಬೆನ್ನೂರ ಸೇರಿದಂತೆ ವಿದ್ಯಾರ್ಥಿಗಳು ಈ ವೇಳೆ ಉಪಸ್ಥಿತರಿದ್ದರು.