ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ

| Published : Sep 14 2025, 01:06 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಎಪಿಎಂಸಿ ಕಟ್ಟಡದಲ್ಲಿ ಕಾಂಗ್ರೆಸ್ ಕಚೇರಿ ತೆರೆದಿದ್ದು ನನ್ನ ತಪ್ಪು. ಅದನ್ನು ನಾನು ಒಪ್ಪಿಕೊಂಡು ಕಚೇರಿ ತೆರವುಗೊಳಿಸುವೆ. ಭೂಸನೂರ ಅವರ ಅವಧಿಯಲ್ಲಿಯೇ ಎಪಿಎಂಸಿಯಲ್ಲಿ 16 ವ್ಯಾಪಾರಸ್ಥರು ನಿಯಮ ಮೀರಿ ಬೇರೆ ಬೇರೆ ರೀತಿಯ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಇದಕ್ಕೆಲ್ಲ ಆಸ್ಪದ ನೀಡಿದವರು ಭೂಸನೂರ. ಕಾಂಗ್ರೆಸ್ ಕಚೇರಿ ತೆರವಿನ ಬಳಿಕ ಉಳಿದ ವ್ಯಾಪಾರಸ್ಥರ ಮಳಿಗೆಗಳನ್ನು ತೆರವುಗೊಳಿಸಲು ಮಾಜಿ ಶಾಸಕರೇ ನೇರ ಹೊಣೆಗಾರರು. ನನ್ನ ವಿರುದ್ಧದ 15 ಆಪಾದನೆಗಳಲ್ಲಿ ಒಂದನ್ನಾದರೂ ಸಾಬೀತು ಪಡಿಸಲು ತಿಂಗಳ ಕಾಲಾವಕಾಶ ಕೊಡುತ್ತೇನೆ.

ಕನ್ನಡಪ್ರಭ ವಾರ್ತೆ ಸಿಂದಗಿ

ಎಪಿಎಂಸಿ ಕಟ್ಟಡದಲ್ಲಿ ಕಾಂಗ್ರೆಸ್ ಕಚೇರಿ ತೆರೆದಿದ್ದು ನನ್ನ ತಪ್ಪು. ಅದನ್ನು ನಾನು ಒಪ್ಪಿಕೊಂಡು ಕಚೇರಿ ತೆರವುಗೊಳಿಸುವೆ. ಭೂಸನೂರ ಅವರ ಅವಧಿಯಲ್ಲಿಯೇ ಎಪಿಎಂಸಿಯಲ್ಲಿ 16 ವ್ಯಾಪಾರಸ್ಥರು ನಿಯಮ ಮೀರಿ ಬೇರೆ ಬೇರೆ ರೀತಿಯ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಇದಕ್ಕೆಲ್ಲ ಆಸ್ಪದ ನೀಡಿದವರು ಭೂಸನೂರ. ಕಾಂಗ್ರೆಸ್ ಕಚೇರಿ ತೆರವಿನ ಬಳಿಕ ಉಳಿದ ವ್ಯಾಪಾರಸ್ಥರ ಮಳಿಗೆಗಳನ್ನು ತೆರವುಗೊಳಿಸಲು ಮಾಜಿ ಶಾಸಕರೇ ನೇರ ಹೊಣೆಗಾರರು. ನನ್ನ ವಿರುದ್ಧದ 15 ಆಪಾದನೆಗಳಲ್ಲಿ ಒಂದನ್ನಾದರೂ ಸಾಬೀತು ಪಡಿಸಲು ತಿಂಗಳ ಕಾಲಾವಕಾಶ ಕೊಡುತ್ತೇನೆ. ಅಷ್ಟರೊಳಗೆ ಸಾಬೀತು ಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಸಾಬೀತು ಪಡಿಸದಿದ್ದರೆ ನೀವು ರಾಜಕೀಯ ನಿವೃತ್ತಿಯಾಗಬೇಕು ಎಂದು ಶಾಸಕ ಅಶೋಕ ಮನಗೂಳಿ ಸವಾಲು ಹಾಕಿದರು.

ಸಿಂದಗಿ ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಪಾದನೆ ಮಾಡುವುದು ದೊಡ್ಡದಲ್ಲ. ಅದನ್ನು ಸಾಬೀತು ಪಡಿಸುವುದು ಬದ್ಧತೆ. 2020ರಲ್ಲಿ ದಿ.ಎಂ.ಸಿ.ಮನಗೂಳಿ ಅವರ ಅಧಿಕಾರಾವಧಿಯಲ್ಲಿ 250 ಹುಡ್ಕೋ ಮನೆಗಳು ಮಂಜೂರಾಗಿದ್ದು, ಅದನ್ನು ನಾನೇ ಮಾಡಿಸಿದ್ದು ಎಂದು ಭೂಸನೂರ ಬಿಗುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ತೆರವುಗೊಳಿಸಲಾದ ಸರ್ವೇ ನಂ.842ರ ಜಾಗೆಯ ಬಗ್ಗೆ ನನಗೇನೂ ಗೊತ್ತೇ ಇಲ್ಲ ಎಂದು ಹೇಳುವ ಮಾಜಿ ಶಾಸಕರು, ಉಪ-ಚುನಾವಣೆ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈ ವಿಷಯದ ಬಗ್ಗೆ ಸಲ್ಲಿಸಿದ ಮನವಿ ಪತ್ರ ನಮ್ಮ ಬಳಿ ಇದೆ. ಮಾಜಿ ಶಾಸಕ ಭೂಸನೂರ ಇದರ ಕುರಿತು ಪರಿಹಾರ ಕಂಡುಕೊಳ್ಳಬಹುದಿತ್ತು. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ವೈಯಕ್ತಿಕವಾಗಿ ನಮ್ಮ ಕುಟುಂಬದ ಬಗ್ಗೆ ಆಪಾದನೆ ಮಾಡುವ ಮೂಲಕ ಕೀಳು ಮಟ್ಟದ ರಾಜಕೀಯಕ್ಕೆ ನಾಂದಿ ಹಾಡಿದ್ದಾರೆ ಎಂದು ಹರಿಹಾಯ್ದರು.ನೊಂದ 84 ಬಡ ಕುಟುಂಬಗಳಿಗೆ ಸ್ಥಳಾವಕಾಶ ಮಾಡಿಕೊಟ್ಟು ಸರ್ಕಾರ, ತಾಲೂಕಾಡಳಿತ, ಜಿಲ್ಲಾಡಳಿತದಿಂದ ಸಿಗುವ ಎಲ್ಲ ಅನುದಾನ ಬಳಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸುಸಜ್ಜಿತವಾದ ಕಾಲೋನಿ ಮಾಡಿಕೊಡುವಲ್ಲಿ ಕಾರ್ಯಪ್ರವೃತ್ತನಾಗಿ ಅವರ ನೋವನ್ನು ನಿವಾರಿಸುವ ಎಲ್ಲ ಪ್ರಯತ್ನವನ್ನು ಪುರಸಭೆ ಹಾಗೂ ಅಧಿಕಾರಿಗಳ ಸಹಯೋಗದೊಂದಿಗೆ ಮಾಡುತ್ತೇನೆ. ಈ ಕಾರ್ಯಕ್ಕೆ ವಿರೋಧ ಪಕ್ಷದವರು ಸಹಕಾರ ನೀಡಲೆಂದು ಆಶಿಸುತ್ತೇನೆ ಎಂದರು. ಈ ವೇಳೆ ಇಂಡಿ ಎಸಿ ಅನುರಾಧ ವಸ್ತ್ರದ ಸರ್ವೇ ನಂ.842ರ ಜಾಗೆಯ ಸಂಪೂರ್ಣ ಮಾಹಿತಿ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಉಪಾಧ್ಯಕ್ಷ ಸಂದೀಪ ಚೌರ, ತಹಸೀಲ್ದಾರ್ ಕರೆಪ್ಪ ಬೆಳ್ಳಿ, ಮುಖ್ಯಾಧಿಕಾರಿ ಎಸ್.ರಾಜಶೇಖರ, ಭಾಷಾಸಾಬ ತಾಂಬೊಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಕಾಂಬಳೆ, ಸುರೇಶ ಪೂಜಾರಿ ಸೇರಿದಂತೆ ಪುರಸಭೆ ಸಿಬ್ಬಂದಿ ಇದ್ದರು.

ಕೋಟ್‌2021ರಲ್ಲಿಯೇ ಸಿಂದಗಿಯ ಜನಸಂಖ್ಯೆ 50 ಸಾವಿರದಷ್ಟಿತ್ತು. ಆ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಸಿಂದಗಿಯನ್ನು ನಗರಸಭೆ ಮಾಡುವಂತೆ ಸರ್ಕಾರಕ್ಕೆ ಮನವಿ ಪತ್ರ ನೀಡಿರುವ ಒಂದಾದರೂ ಉದಾಹರಣೆ ತೋರಿಸಲಿ. ಆದರೆ, ಭೂಸನೂರ ಅವರಿಗೆ ನಗರಸಭೆಯಾದದ್ದು ಖುಷಿ ಇಲ್ಲ. ಇದರಲ್ಲಿಯೂ ರಾಜಕೀಯ ಮಾಡುವ ದುರುದ್ದೇಶ ಅವರದು. ಮೆರವಣಿಗೆ ಮಾಡಿಕೊಂಡದ್ದು ನಾನಲ್ಲ. ಸಿಂದಗಿಯ ಜನತೆ ನಗರಸಭೆಯಾದ ಖುಷಿಯಲ್ಲಿ ತಮ್ಮ ಅಭಿಮಾನದಿಂದ ವಿಜಯೋತ್ಸವ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಆಲಮೇಲ ಭಾಗದಲ್ಲಿ ತೋಟಗಾರಿಕಾ ಬೆಳೆಗಳಿಲ್ಲ. ಮಹಾವಿದ್ಯಾಲಯ ಸ್ಥಾಪಿಸಲು ಸೂಕ್ತ ವಾತಾವರಣವಿಲ್ಲವೆಂಬ ಕಾರಣ ನೀಡಿ ತಿಡಗುಂದಿಗೆ ವರ್ಗಾವಣೆ ಮಾಡುವಂತೆ ಪತ್ರ ಕೊಡಸಿದ್ದು ಇದೇ ಭೂಸನೂರ.ಅಶೋಕ ಮನಗೂಳಿ, ಶಾಸಕರು