ಸಾರಾಂಶ
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಮಾನವ ತನ್ನ ದುರಾಸೆಗಳಿಗಾಗಿ ಪರಿಸರ ನಾಶ ಮಾಡುತ್ತಿದ್ದಾನೆ. ಇದರಿಂದ ನಿತ್ಯ ಕಾಡು ಕ್ಷೀಣಿಸುತ್ತಾ ಪರಿಸರ ಸಮತೋಲನ ಕಳೆದುಕೊಳ್ಳುತ್ತಿದೆ. ಇದರಿಂದ ಪ್ರಕೃತಿಯಲ್ಲಿ ವಿಪರೀತ ಬದಲಾವಣೆಗಳಾಗಿ ವಿಕೋಪಗಳು ಸಂಭವಿಸುತ್ತಿವೆ. ಜಿಲ್ಲೆಯಲ್ಲಿ ಕೂಡ ಅರಣ್ಯ ನೀತಿಯ ಪ್ರಕಾರದಷ್ಟು ಅರಣ್ಯ ಇಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಅಪಾಯದ ಮುನ್ಸೂಚನೆ ನೀಡುತ್ತಿದೆ. ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಆಯಾ ಜಿಲ್ಲೆಯ ಶೇ.33ರಷ್ಟು ಅರಣ್ಯಭೂಮಿ ಇರಬೇಕು ಎಂಬ ನಿಯಮವಿದೆ. ಅಂದಾಗ ಮಾತ್ರ ಜನರಿಗೆ ಶುದ್ಧ ಗಾಳಿ, ಕಾಲಕ್ಕೆ ಸರಿಯಾಗಿ ಮಳೆ, ಬೆಳೆ ಬರಲಿದೆ ಎಂಬ ಅಂದಾಜು ಇದೆ. ಅಂದಾಜಿನ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ ಹತ್ತು ಲಕ್ಷ ಹೆಕ್ಟೇರ್ ಭೂಮಿ ಇದ್ದು, ಶೇ.33 ಅಂದರೆ ಮೂರು ಲಕ್ಷ ಹೆಕ್ಟೇರ್ ಅರಣ್ಯ ಭೂಮಿ ಇರಬೇಕು. ಆದರೆ ಜಿಲ್ಲಾದ್ಯಂತ ಒಟ್ಟುಗೂಡಿಸಿದರೆ ಕೇವಲ 1807 ಹೆಕ್ಟೇರ್ ಮಾತ್ರ ಅರಣ್ಯ ಭೂಮಿ ಇದೆ. ಇದರಿಂದ ಜನರಿಗೆ ಮುಂದಿನ ದಿನಗಳಲ್ಲಿ ಶುದ್ಧ ಗಾಳಿಯ ಸಮಸ್ಯೆ ಉಂಟಾಗುವ ಸಂಭವ ಇದೆ.
ಜನರೇ ಅರಣ್ಯ ಹಚ್ಚಿಸಲು ಒತ್ತು ನೀಡಿ:ಜಿಲ್ಲೆಯಲ್ಲಿ ಈಗಿರುವ ಅರಣ್ಯ ಭೂಮಿಯ ಎವರೇಜ್ ಪ್ರಕಾರ ಕೇವಲ 0.17ಪರ್ಸೆಂಟ್ ಅರಣ್ಯ ಪ್ರದೇಶ ಇದೆ. ಜಿಲ್ಲೆಯಲ್ಲಿ ಅರಣ್ಯ ಭೂಮಿಯೇ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದಿರುವ ಕಾರಣ ಇದನ್ನು ಹೆಚ್ಚಿಸಲು ಸಾಧ್ಯವೇ ಇಲ್ಲ. ಹಾಗಾಗಿ ಜನರೇ ತಮ್ಮ ತಮ್ಮ ಜಮೀನುಗಳಲ್ಲಿ, ಕೃಷಿ ಭೂಮಿ, ಮನೆಗಳ ಮುಂದೆ, ಗಾರ್ಡನ್ಗಳಲ್ಲಿ, ಗೋಮಾಳ, ಗೋಶಾಲೆಗಳು, ರಸ್ತೆ ಬದಿ, ಸರಕಾರಿ ಜಾಗ, ಖಾಲಿ ಜಾಗೆಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಟ್ರೀ ಕವರೇಜ್ ಏರಿಯಾ ಹೆಚ್ಚಿಗೆ ಮಾಡಬೇಕಿದೆ. ಈಗಾಗಲೇ ಅರಣ್ಯ ಇಲಾಖೆ, ಸಂಘ ಸಂಸ್ಥೆಗಳು, ರೈತರು, ಜನರ ಪರಿಸರ ಕಾಳಜಿಯಿಂದ ಫಾರೆಸ್ಟ್ ಏರಿಯಾ ಹೊರತುಪಡಿಸಿ ಗಿಡ, ಮರಗಳ ಹೊದಿಕೆ ಪ್ರಮಾಣ ಮೊದಲು 10.7 ಪ್ರತಿಷತ ಇದ್ದಿದ್ದು ಕಳೆದ 5 ವರ್ಷಗಳಲ್ಲಿ 2 ಪರ್ಸೆಂಟ್ನಷ್ಟು ಹೆಚ್ಚಾಗಿ ಜಿಲ್ಲೆಯಲ್ಲಿ 13.7ರಷ್ಟು ಟ್ರೀ ಕವರೇಜ್ ಆಸ್ತಿ ಆಗಿದೆ. ಆದರೆ ಪ್ರತಿಯೊಬ್ಬರ ಪ್ರಯತ್ನದಿಂದ ಕರ್ನಾಟಕದಲ್ಲಿ 21ಪರ್ಸೆಂಟ್ನಷ್ಟು ಮರಗಳ ಹೊದಿಕೆ ಪ್ರಮಾಣ ಆಗಬೇಕಿದೆ.
ರೈತರಿಗೆ ಸಸಿಗಳ ವಿತರಣೆ:ಜಿಲ್ಲೆಯಲ್ಲಿ ಹಸಿರು ಹೊದಿಕೆ ಕಡಿಮೆ ಇರುವ ಕಾರಣ ಅದನ್ನು ಹೆಚ್ಚಿಸಲು ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲಾಗುತ್ತಿದೆ. ವಿಜಯಪುರದ ಭೂತನಾಳ ನರ್ಸರಿ, ಇಂಡಿಯ ಜೇವೂರ ನರ್ಸರಿ, ಸಿಂದಗಿ ನರ್ಸರಿ, ಬಬಲೇಶ್ವರ ನರ್ಸರಿ, ಮುದ್ದೇಬಿಹಾಳದ ಜಂಬಲದಿನ್ನಿ ನರ್ಸರಿಗಳಲ್ಲಿ ಸಸಿಗಳನ್ನು ವಿತರಿಸಲಾಗುತ್ತದೆ. 8×12 ಬ್ಯಾಗ್ ಸೈಜ್ ಇರುವ ಸಸಿಗಳಿಗೆ ₹6 ಹಾಗೂ 6×9 ಪಾಲಿಥಿನ ಚೀಲಗಳು ಇರುವ ಸಸಿಗಳಿಗೆ ₹3 ದರದಲ್ಲಿ ವಿತರಿಸಲಾಗುತ್ತದೆ.
ಒಟ್ಟಾರೇ ಇನ್ನು ಮುಂದಾದರೂ ಜನರು ಎಚ್ಚೆತ್ತುಕೊಂಡು ತಮ್ಮ ತಮ್ಮ ಮನೆ ಸುತ್ತಮುತ್ತ ಹಾಗೂ ಖಾಲಿ ಜಾಗೆಯಲ್ಲಿ ಸಸಿಗಳನ್ನು ನೆಟ್ಟು ಅವುಗಳ ಪಾಲನೆ ಪೋಷಣೆ ಮಾಡಬೇಕು. ಇಲ್ಲವಾದಲ್ಲಿ ಭವಿಷ್ಯಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ.---ಈಗಾಗಲೇ ಅರಣ್ಯ ಇಲಾಖೆಯ ನರ್ಸರಿಗಳಿಂದ ರೈತರಿಗೆ ಮಹಾಗಣಿ, ತೇಗು, ಶ್ರೀಗಂಧ, ರಕ್ತಚಂದನ, ಬೇವು, ಇಲಾಚಿ, ಹುಣಸೆ ಸೇರಿದಂತೆ ಹಲವು ಸಸಿಗಳನ್ನು ಒಂದಕ್ಕೆ ಮೂರು ರುಪಾಯಿಯಿಂದ ಆರು ರುಪಾಯಿಯಂತೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಈ ಬಾರಿ 45 ಸಾವಿರ ಸಸಿಗಳನ್ನು ಕೊಡಲಾಗಿದೆ. ಕಚೇರಿಗೆ ಬಂದು ಸಂಪರ್ಕಿಸಿದ ಸಾರ್ವಜನಿಕರಿಗೂ ಸಹ ಮನೆಗಳ ಮುಂದೆ, ಗಾರ್ಡನ್ ನಲ್ಲಿ ನಡೆಸಲು ಸಸಿಗಳನ್ನು ವಿತರಿಸಲಾಗುತ್ತಿದೆ.
-ಶಿವಶರಣಯ್ಯ, ಉಪಅರಣ್ಯ ಸಂರಕ್ಷಣ ಅಧಿಕಾರಿ.--ಹಸರೀಕರಣ ಹೆಚ್ಚಿಸುವ ಸಲುವಾಗಿ ಜಿಲ್ಲೆಯಾದ್ಯಂತ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು, ಗಿಡ-ಮರಗಳನ್ನು ಬೆಳೆಸುವ ಅಗತ್ಯವಿದೆ. ಕಾಯ್ದಿರಿಸಿದ ಅರಣ್ಯಭೂಮಿ ಕಡಿಮೆ ಇರುವುದರಿಂದ ಅಲ್ಲಷ್ಟೇ ಸಸಿಗಳನ್ನು ನೆಟ್ಟರೆ ಅರಣ್ಯೀಕರಣ ಹೆಚ್ಚಾಗುವುದಿಲ್ಲ. ಹಾಗಾಗಿ ಹಸಿರು ಹೊದಿಕೆ ಪ್ರಮಾಣ ಹೆಚ್ಚಿಸಿಲು ರೈತರು, ಸಾರ್ವಜನಿಕರು, ಸಂಘಸಂಸ್ಥೆಗಳು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಜಾಗೃತಿ ಮೂಡಿಸಲಾಗುತ್ತಿದೆ.
-ಸಂತೋಷ ಅಜೂರ, ವಲಯ ಅರಣ್ಯಾಧಿಕಾರಿ, ವಿಜಯಪುರ.