ಶಾಸಕರಿಗೆ ಆಫರ್‌ ಬಂದಿದ್ದರೆ ಆಣೆ ಮಾಡಲಿ: ರೇಣು

| Published : Nov 20 2024, 12:32 AM IST

ಸಾರಾಂಶ

ನಿಮ್ಮ ಶಾಸಕರನ್ನು ಖರೀದಿ ಮಾಡುವುದಕ್ಕೆ ಅವರೇನು ಎಮ್ಮೆ, ಕೋಣನಾ? ಶಾಸಕರ ಖರೀದಿಗೆ ₹50 ಕೋಟಿ, ₹100 ಕೋಟಿ ಆಫರ್ ಬಂದಿದೆಯೆಂಬ ಹೇಳಿಕೆ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ, ಶಾಸಕ ರವಿ ಗಣಿಗ ಧರ್ಮಸ್ಥಳ, ಅಜ್ಜಯ್ಯನ ಸನ್ನಿಧಿ ಅಥವಾ ಮೈಸೂರು ಶ್ರೀ ಚಾಮುಂಡೇಶ್ವರಿ ತಾಯಿ ಬಳಿ ಬಂದು, ಆಣೆ ಮಾಡಿ ಹೇಳಲಿ ಎಂದು ಬಿಜೆಪಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪಂಥಾಹ್ವಾನ ನೀಡಿದ್ದಾರೆ.

- ನಿಮ್ಮ ಶಾಸಕರನ್ನೇನು ದನ, ಕರುಗಳ ರೀತಿ ವ್ಯಾಪಾರಕ್ಕೆ ಇಟ್ಟಿದ್ದೀರಾ ಎಂದು ಮಾಜಿ ಸಚಿವ ಪ್ರಶ್ನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಿಮ್ಮ ಶಾಸಕರನ್ನು ಖರೀದಿ ಮಾಡುವುದಕ್ಕೆ ಅವರೇನು ಎಮ್ಮೆ, ಕೋಣನಾ? ಶಾಸಕರ ಖರೀದಿಗೆ ₹50 ಕೋಟಿ, ₹100 ಕೋಟಿ ಆಫರ್ ಬಂದಿದೆಯೆಂಬ ಹೇಳಿಕೆ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ, ಶಾಸಕ ರವಿ ಗಣಿಗ ಧರ್ಮಸ್ಥಳ, ಅಜ್ಜಯ್ಯನ ಸನ್ನಿಧಿ ಅಥವಾ ಮೈಸೂರು ಶ್ರೀ ಚಾಮುಂಡೇಶ್ವರಿ ತಾಯಿ ಬಳಿ ಬಂದು, ಆಣೆ ಮಾಡಿ ಹೇಳಲಿ ಎಂದು ಬಿಜೆಪಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪಂಥಾಹ್ವಾನ ನೀಡಿದರು.

ಬಿಜೆಪಿಯಿಂದ ನಿಮಗೆ ಆಫರ್ ಮಾಡಿದ್ದ ಬಗ್ಗೆ ದಾಖಲೆ ಇದ್ದರೆ ದೂರು ಕೊಟ್ಟು, ತಕ್ಷಣ ಬಂಧಿಸಲು ಕ್ರಮ ಕೈಗೊಳ್ಳಿ. ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿ, ತನಿಖೆ ಮಾಡಿಸಿ. ಉಪ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಲೆ ಸಿದ್ದರಾಮಯ್ಯನವರಿಂದ ಕಾಂಗ್ರೆಸ್ಸಿನವರೇ ರಾಜೀನಾಮೆ ಕೊಡಿಸುತ್ತಾರೆ ಎಂದರು.

ರಾಜ್ಯದಲ್ಲಿ ಸುಮಾರು 14 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಇದರ ಪರಿಣಾಮವನ್ನೂ ನೀವು ಎದುರಿಸಬೇಕಾಗುತ್ತದೆ. ಈ ಹಿಂದೆ ವಿಪಕ್ಷ ನಾಯಕರಾಗಿದ್ದಾಗಲೇ ಈ ಬಗ್ಗೆ ನೀವು ಯಾಕೆ ಧ್ವನಿ ಎತ್ತಲಿಲ್ಲ? ಗ್ಯಾರಂಟಿಗೆ ಹಣ ಹೊಂದಿಸಲಾಗದೇ, ಬಿಪಿಎಲ್ ಕಾರ್ಡ್ ರದ್ದುಪಡಿಸಲು ಹೊರಟಿದ್ದಾರೆ. ಅಭಿವೃದ್ಧಿಗೆ ಹಣ ಇಲ್ಲದ, ಇದೊಂದು ಅಸಮರ್ಥ ಸರ್ಕಾರ ಎಂದು ಮಾಜಿ ಸಚಿವರು ಟೀಕಿಸಿದರು.

ಹೆಸರು ಬಹಿರಂಗಪಡಿಸಿ:

ಕಾಂಗ್ರೆಸ್ ಶಾಸಕರಿಗೆ ₹100 ಕೋಟಿ ಆಫರ್ ನೀಡಿದ್ದು ಯಾರು? ಆಫರ್ ನೀಡಿದವರ ಹೆಸರನ್ನು ತಕ್ಷಣವೇ ಕಾಂಗ್ರೆಸ್ ಶಾಸಕ ರವಿ ಗಣಿಗ ಬಹಿರಂಗಪಡಿಸಲಿ. ಬಿಜೆಪಿ ಮೇಲೆ ರವಿ ಗಣಿಗ ಮಾಡಿರುವ ಆರೋಪವನ್ನು ಸ್ವತಃ ಕಾಂಗ್ರೆಸ್ಸಿನ ಶಾಸಕರಾದ ಎಚ್.ಡಿ.ತಮ್ಮಯ್ಯ, ಬಾಬು ಸಾಹೇಬ್‌ ಪಾಟೀಲ್ ಒಪ್ಪಿಲ್ಲ. ಪ್ರತಿ ದಿನ ನನ್ನ ಬುಟ್ಟಿಯಲ್ಲಿ ಹೆಬ್ಬಾವಿದೆ, ಕರಿನಾಗ ಇದೆ ಅಂತಾ ಇನ್ನೂ ಎಷ್ಟು ದಿನ ಸುಳ್ಳು ಹೇಳುತ್ತೀರಿ? ದಾಖಲೆಗಳನ್ನು ಬಿಡುಗಡೆ ಮಾಡಿ, ನಿಮ್ಮದೇ ಸರ್ಕಾರದಿಂದ ಎಸ್ಐಟಿಯಿಂದಲೇ ತನಿಖೆ ಮಾಡಿಸಿ. ರಾಜ್ಯದ ಜನತೆಗೆ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ರವಿ ಗಣಿಗ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ ಎಂದು ಎಚ್ಚರಿಸಿದರು.

ಪಕ್ಷದ ಮುಖಂಡರಾದ ರಾಜು ವೀರಣ್ಣ, ಪ್ರವೀಣ ಜಾಧವ್, ಮಂಜು ಪಂಜು ಇತರರು ಇದ್ದರು.

- - - ಟಾಪ್‌ ಕೋಟ್‌

ಸಚಿವ ಜಮೀರ್ ಅಹಮ್ಮದ್ ವಿರುದ್ಧ ಕಾಂಗ್ರೆಸ್ ನೈತಿಕತೆ ಇದ್ದರೆ ತಕ್ಷಣವೇ ಶಿಸ್ತು ಕ್ರಮ ಕೈಗೊಳ್ಳಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಗೃಹ ಸಚಿವ ಡಾ.ಜಿ.ಪರಮೇಶ್ವರ ಸೇರಿದಂತೆ ಅನೇಕರೇ ಅವರ ಹೇಳಿಕೆ ಒಪ್ಪುತ್ತಿಲ್ಲ. ತಕ್ಷಣವೇ ಜಮೀರ್ ಅಹಮ್ಮದ್‌ಗೆ ಸಂಪುಟದಿಂದ ವಜಾಗೊಳಿಸಬೇಕು. ಜಮೀರ್ ನಾಲಿಗೆಗೆ ಕಡಿವಾಣ ಹಾಕದಿದ್ದರೆ, ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ, ಬಿಜೆಪಿ

- - -