ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರಕ್ಕಾಗಿ ಸದನದಲ್ಲಿ ಧರಣಿ ಕೂರುತ್ತೇನೆ. ಸದನದಲ್ಲಿ ಎದ್ದು ನಿಂತು ಸ್ಪೀಕರ್‌‌ಗೆ ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆ ತೆಗೆದುಕೊಳ್ಳಲು ಹೇಳುತ್ತೇನೆ. ತೆಗೆದುಕೊಳ್ಳದಿದ್ದರೆ ಧರಣಿ ನಿಶ್ಚಿತ. ನಾಳೆಯೇ ಸಮಯ ನಿಗದಿ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರಕ್ಕಾಗಿ ಸದನದಲ್ಲಿ ಧರಣಿ ಕೂರುತ್ತೇನೆ. ಸದನದಲ್ಲಿ ಎದ್ದು ನಿಂತು ಸ್ಪೀಕರ್‌‌ಗೆ ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆ ತೆಗೆದುಕೊಳ್ಳಲು ಹೇಳುತ್ತೇನೆ. ತೆಗೆದುಕೊಳ್ಳದಿದ್ದರೆ ಧರಣಿ ನಿಶ್ಚಿತ. ನಾಳೆಯೇ ಸಮಯ ನಿಗದಿ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ಉತ್ತರ ಕರ್ನಾಟಕ ಸಮಸ್ಯೆ ಚರ್ಚೆಗೆ ಸಮಯ ನಿಗದಿ ಮಾಡಬೇಕು. ಪ್ರತಿ ದಿನ ಎರಡೂ ತಾಸು ಸಮಯ ಕೊಡಬೇಕು. ನಾಳೆ ಸ್ಪೀಕರ್‌ಗೆ ಆಗ್ರಹ ಮಾಡುತ್ತೇನೆ. ಅವಕಾಶ ಕೊಡದೆ ಹೋದರೆ ಧರಣಿ ಮಾಡುತ್ತೇನೆ ಎಂದರು.

ಅಧಿವೇಶನದಲ್ಲಿ ಪ್ರಚೋದನಕಾರಿ ಭಾಷಣ ತಡೆಗೆ ಹೊಸ ಕಾನೂನು ರಚನೆ ವಿಚಾರದ ಕುರಿತು ಮಾತನಾಡಿ, ಈ ಕಾಯ್ದೆ ತರುತ್ತಿರುವ ಟಾರ್ಗೆಟ್ ನಾನೇ. ಹಿಂದೂಗಳ ಪರವಾಗಿ ಮಾತನಾಡುವವರನ್ನು ಟಾರ್ಗೆಟ್ ಮಾಡಬೇಕು ಅನ್ನೋದು ಅವರ ಉದ್ದೇಶ. ವಿಜಯೇಂದ್ರ, ಆರ್.ಅಶೋಕರನ್ನು ಅವರು ಟಾರ್ಗೆಟ್ ಮಾಡಲ್ಲ. ಕರ್ನಾಟಕದಲ್ಲಿ ಅವರಿಗೆ ಬಸನಗೌಡ ಪಾಟೀಲ ಯತ್ನಾಳದ್ದೆ ಅಂಜಿಕೆ ಇದೆ. ಆ ಬಿಲ್‌ ಅನ್ನು ನನಗಾಗಿಯೇ ಜಾರಿಗೆ ತರುತ್ತಿದ್ದಾರೆ. ಹಾಗಾಗಿ ಎಚ್.ಕೆ.ಪಾಟೀಲರಿಗೆ ಧನ್ಯವಾದ. ಈ ಕಾಯ್ದೆಯನ್ನು ನಾನು ವಿರೋಧ ಮಾಡುತ್ತೇನೆ ಎಂದು ಹೇಳಿದರು.

ಗೋ ರಕ್ಷಣಾ ಕಾಯ್ದೆ ತಿದ್ದುಪಡಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಗೋ ಪ್ರೇಮಿ ಶಾಸಕರು ಸೇರಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಎಲ್ಲರೂ ಒಂದೆಡೆ ಸೇರುತ್ತೇವೆ. ಇದು ಒಂದು ಪಾರ್ಟಿ ವಿಚಾರವಲ್ಲ. ಗೋ, ಸನಾತನ ಧರ್ಮದ ಪರ ಇರೋರು ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್ ಪಕ್ಷದಲ್ಲಿಯೂ ಇದ್ದಾರೆ. ಎಲ್ಲರೂ ಸೇರಿ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಬಂಡಾಯ ನಾಯಕರ ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಈಗ ಬಿಜೆಪಿಯ ತಂಡದ ಜೊತೆ ಹೋಗಿಲ್ಲ. ನಾನು ಇದ್ದ ಫೋಟೋಗಳು ಹಳೆಯದು. ಅವರೆಲ್ಲ ಹೋಗಿ ಏನೇನು ಮಾತನಾಡಿದ್ದಾರೆ ಗೊತ್ತಿಲ್ಲ. ಮಾಹಿತಿಯೂ ಸಿಕ್ಕಿಲ್ಲ. ಆದರೆ ಬಹಳ ಪಾಸಿಟಿವ್ ಇದೆ ಅಂತಾ ಹೇಳಿದ್ದಾರೆ. ಎಲ್ಲರೂ ನನ್ನ ಸಂಪರ್ಕದಲ್ಲಿದ್ದಾರೆ. ಎಲ್ಲ ಎಂಪಿಗಳು, ಸಂಪೂರ್ಣ ಬಿಜೆಪಿ ನನ್ನ ಸಂಪರ್ಕದಲ್ಲಿದೆ. ವಿಜಯಪುರದಲ್ಲಿರುವ ಚಿಲ್ಲರೆ ನಾಯಕರನ್ನು ಯಾರು ಕೇಳಲ್ಲ ಎಂದು ವಾಗ್ದಾಳಿ ನಡೆಸಿದರು.

ಲಿಂಗಾಯತ ಪಂಚಮಸಾಲಿ ಹೋರಾಟ ಒಂದು ವರ್ಷ ಪೂರ್ಣ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದೆ. ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲ. ಆದರೆ ಮುಸ್ಲಿಮರಿಗೆ ಕೊಡುತ್ತಾರೆ. ಅಂಬೇಡ್ಕರ್‌ ನಿಗಮದ ಹಗರಣ, ವಾಲ್ಮೀಕಿ ‌ನಿಗಮದ ಹಗರಣ, ದಲಿತರ ಹಣ ತಿನ್ನುವವರು ಅಹಿಂದ ಲೀಡರ್ ಅಂತಾ ಹೇಳಿಕೊಳ್ಳುತ್ತಾರೆ‌. ಸಿದ್ದರಾಮಯ್ಯ ಸರ್ಕಾರ ಸಾಬರ ಸರ್ಕಾರವಾಗಿದೆ. ಹಿಂದೂಗಳ ಗುಡಿ ಗುಂಡಾರದ ಹಣ ತಿನ್ನುತ್ತಾರೆ. ಟೆಂಡರ್‌ನಲ್ಲಿ ಸಹಿತ ಮುಸ್ಲಿಮರಿಗೆ ಮೀಸಲಾತಿ, 400 ಯುವಕರಿಗೆ ಪಿಎಸ್ಐ ಟ್ರೈನಿಂಗ್ ಅಂತಾರೆ ಜಮೀರ. ಇದನ್ನು ನೋಡಿದರೆ ಎತ್ತ ಹೋಗುತ್ತಿದೆ ಸರ್ಕಾರ ಎಂಬುದು ಗೊತ್ತಾಗುತ್ತದೆ‌. ಸಿದ್ದರಾಮಯ್ಯ ಸರ್ಕಾರ ನಿರುದ್ಯೋಗಿಗಳಿಗೆ ಸ್ಪಂದನೆ ಮಾಡುತ್ತಿಲ್ಲ. ಒಳ ಮೀಸಲಾತಿ ಸಹಿತ ಇನ್ನು ಗೊಂದಲದಲ್ಲಿದೆ. ಸಿಎಂ ನಾಟಿಕೋಳಿ ತಿನ್ನವುದರಲ್ಲಿ ಇದ್ದಾರೆ. ಆದರೆ ವಿಜಯೇಂದ್ರ ಕೂಡ ಈ ವಿಚಾರ ಏನೂ ಮಾಡಲ್ಲ. ವಿಧಾನಸಭೆ ಮುತ್ತಿಗೆ ಹಾಕುತ್ತೀನಿ ಅನ್ನುತ್ತಾರೆ, ಏನು ಮುತ್ತಿಗೆ ಹಾಕುತ್ತಾರೆ ನೋಡೋಣ ಎಂದರು.

ಯತೀಂದ್ರ ಹೇಳಿದ್ದೆ ಅಧಿಕೃತ: ಸಿದ್ದುನೇ 5 ವರ್ಷ ಸಿಎಂ

ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನದ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಿದ್ದರಾಮಯ್ಯ ಸಿಎಂ ಆಗಿ ಐದು ವರ್ಷ ಮುಂದುವರಿಯುತ್ತಾರೆ ಎಂದು ಸಿಎಂ ಪುತ್ರ ಯತೀಂದ್ರ ಹೇಳಿದ್ದಾರೆ. ಸಿಎಂ ಮಗ ಹೇಳಿದ್ದಾರೆ ಅಂದರೆ ಅದು ಅಧಿಕೃತ. ಯುದ್ಧ ಮುಂದುವರಿದಿದೆ ಎಂದಾಯ್ತು, ಇನ್ನೂ ಮುಂದುವರಿದ ಭಾಗ ಇದೆ ಎಂದು ಹೇಳಿದರು.

ಅಧಿವೇಶನದಲ್ಲಿ ಇಡ್ಲಿ ತಿನ್ನುತ್ತಾರೋ, ದೋಸೆ ತಿನ್ನುತ್ತಾರೋ? ಒಬ್ಬರ ಕಪಾಳಕ್ಕೆ ಒಬ್ಬರು ಹೊಡೆಯುತ್ತಾರಾ ನೋಡಬೇಕು. ಸಿಎಂ ಗದ್ದಲದ ನಡುವೆ ಕಾರ್ಖಾನೆ ಮಾಲೀಕರ ಸಮಸ್ಯೆ ಹೇಳಲು ಟೈಂ ಕೊಟ್ಟಿಲ್ಲ. ಶಾಸಕರನ್ನು ಕರೆದು ನಮ್ಮ ಜೊತೆಗಿರು ಇಷ್ಟು ಕೋಟಿ ಕೊಡ್ತೀನಿ ಎನ್ನುತ್ತಿದ್ದಾರೆ. ಆಡಳಿತ ಕುಸಿದು ಹೋಗಿದೆ. ಭ್ರಷ್ಟ ಸರ್ಕಾರದಲ್ಲಿ ಅಧಿಕಾರಿಗಳು ಹೆದರುತ್ತಿಲ್ಲ. ಅಧಿಕಾರಿಗಳು ಹಣ ಕೊಟ್ಟು ಬರ್ತಿದ್ದಾರೆ. ಅಧಿಕಾರಿಗೆ ಕೆಲಸ ಮಾಡಿ ಎಂದರೆ ₹50 ಲಕ್ಷ ಕೊಟ್ಟು ಬಂದಿದ್ದೀನಿ ಎನ್ನುತ್ತಿದ್ದಾರೆ ಎಂದರು.

ವರ್ಗಾವಣೆ ದಂಧೆಯ ಬಗ್ಗೆ ಸ್ಫೋಟಕ ಮಾಹಿತಿ ತಿಳಿಸಿದ ಅವರು, ವರ್ಗಾವಣೆಗಾಗಿ ಒಬ್ಬ ಅಧಿಕಾರಿಗೆ ₹2 ಕೋಟಿ ಕೇಳಿದ್ದಾರೆ. ಯಾವ ಹುದ್ದೆ ಎಂದು ನಾನು ಹೇಳೋದಿಲ್ಲ ₹2 ಕೋಟಿ ಕೇಳಿದ್ದಾರೆ. ಮತ್ತೊಬ್ಬ ಅಧಿಕಾರಿ ಬಂದು ₹3 ಕೋಟಿ ಕೊಡುತ್ತೇನೆ ಎಂದರಂತೆ. ಈಗ ಆ ಹುದ್ದೆ ₹5 ಕೋಟಿಗೆ ಬಂದು ನಿಂತಿದೆ. ಈ ವ್ಯವಹಾರ ನಡೆದಿದೆ ಎಂದು ಶಾಸಕ ಯತ್ನಾಳ ಆರೋಪಿಸಿದರು.