ಸಾರಾಂಶ
ಕನ್ನಡಪ್ರಭ ವಾರ್ತೆ ಕೋಟ
ಗಿಡ ಮರದ ಬಗ್ಗೆ ನಿರ್ಲಕ್ಷ್ಯದ ಭಾವನೆ ಮೊದಲು ಬಿಟ್ಟು ಬಿಡಿ, ಅದರ ಬಗ್ಗೆ ಸದಾ ತುಡಿತ ಹೊಂದಿ ಒಂದಿಷ್ಟು ಪರಿಸರ ಉಳಿಸುವ ಕಾರ್ಯ ಆಗಬೇಕು. ಇಲ್ಲದಿದ್ದರೆ ಮುಂದೆ ಆಪತ್ತು ಕಾದಿದೆ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಹೇಳಿದರು.ಅವರು ಇಲ್ಲಿನ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಸುವರ್ಣ ಎಂಟರ್ಪ್ರೈಸ್ ಬ್ರಹ್ಮಾವರ, ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಹಂದಟ್ಟು ಮಹಿಳಾ ಬಳಗ ಕೋಟ, ಸಮುದ್ಯತಾ ಗ್ರೂಪ್ಸ್ ಕೋಟ ಇವುಗಳ ಸಹಯೋಗದೊಂದಿಗೆ ಟೀಮ್ ಭವಾಬ್ಧಿ ಪಡುಕರೆ ಸಂಯೋಜನೆಯೊಂದಿಗೆ ವಿಶ್ವಪರಿಸರದ ದಿನದ ಅಂಗವಾಗಿ ೨೧೦ನೇ ಭಾನುವಾರದ ಪರಿಸರಸ್ನೇಹಿ, ಸತತ ಮೂರು ತಿಂಗಳ ಕಾಲ ನಡೆಯುವ ಗಿಡ ನೆಟ್ಟು ಪೋಷಿಸುವ ಹಸಿರುಜೀವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಂಚವರ್ಣ ಸಂಸ್ಥೆಯ ನಿತ್ಯ ನಿರಂತರ ಪರಿಸರಸ್ನೇಹಿ ಸಮಾಜಮುಖಿ ಕಾರ್ಯ ಇತರ ಎಲ್ಲಾ ಭಾಗದ ಸಂಘಸಂಸ್ಥೆಗಳಿಗೆ ಮಾದರಿದಾಯಕ. ಜತೆಗೆ ಟೀಮ್ ಭವಾಬ್ಧಿ ತಂಡ ಈ ಭಾಗದಲ್ಲಿ ಗಿಡ ನಡುವ ಸಂಕಲ್ಪ ಯೋಜನೆ ಮುಂದಿನ ಪೀಳಿಗೆಯ ಮನ್ವಂತರ ಬರೆಯಲಿದೆ. ತಮ್ಮ ಗೀತಾನಂದ ಫೌಂಡೇಶನ್ ಈಗಾಗಲೇ ೧೫ ಸಾವಿರ ಗಿಡ ನಡುವ ಸಂಕಲ್ಪ ಮಾಡಿದೆ. ಎಲ್ಲ ಸಂಘಸಂಸ್ಥೆಗಳಿಗೆ ಇದರ ವಿತರಣೆ ಮಾಡಲಿದೆ ಎಂದರು.ಸುವರ್ಣ ಎಂಟರ್ಪ್ರೈಸ್ ಬ್ರಹ್ಮಾವರ ಇದರ ಮಾಲಿಕ ಮಧುಸೂದನ್ ಹೇರೂರು, ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್, ಕೋಟತಟ್ಟು ಗ್ರಾ.ಪಂ. ಸದಸ್ಯ ರವೀಂದ್ರ ತಿಂಗಳಾಯ, ಮಹಿಳಾ ಮಂಡಲದ ಪ್ರಧಾನ ಕಾರ್ಯದರ್ಶಿ ವಸಂತಿ ಹಂದಟ್ಟು, ಪಂಚವರ್ಣದ ಸಂಚಾಲಕ ಅಮೃತ್ ಜೋಗಿ, ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್, ಟೀಮ್ ಭವಾಬ್ಧಿ ಅಧ್ಯಕ್ಷ ದೇವೇಂದ್ರ ಶ್ರೀಯಾನ್ ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.