ವಿಷಗಾಳಿ ಮುಂದುವರೆದರೆ ಮನೆಗೊಬ್ಬ ಕ್ಯಾನ್ಸರ್‌ ರೋಗಿ ಸಿಗ್ತಾನೆ..!

| N/A | Published : Jun 20 2025, 12:34 AM IST / Updated: Jun 20 2025, 02:19 PM IST

ವಿಷಗಾಳಿ ಮುಂದುವರೆದರೆ ಮನೆಗೊಬ್ಬ ಕ್ಯಾನ್ಸರ್‌ ರೋಗಿ ಸಿಗ್ತಾನೆ..!
Share this Article
  • FB
  • TW
  • Linkdin
  • Email

ಸಾರಾಂಶ

ಕೆಮಿಕಲ್‌ ವಿಷಗಾಳಿ, ತ್ಯಾಜ್ಯ ದುರ್ನಾತ, ಹದಗೆಟ್ಟ ಪರಿಸರ ಹೀಗೆ ಮುಂದುವರೆದರೆ ಬರುವ ದಿನಗಳಲ್ಲಿ ಈ ಭಾಗದಲ್ಲಿ ಮನೆಗೊಬ್ಬ ಕ್ಯಾನ್ಸರ್‌ ರೋಗಿ ಸಿಕ್ಕರೆ ಅಚ್ಚರಿ ಪಡಬೇಕಿಲ್ಲ..!

 ಯಾದಗಿರಿ : ಕೆಮಿಕಲ್‌ ವಿಷಗಾಳಿ, ತ್ಯಾಜ್ಯ ದುರ್ನಾತ, ಹದಗೆಟ್ಟ ಪರಿಸರ ಹೀಗೆ ಮುಂದುವರೆದರೆ ಬರುವ ದಿನಗಳಲ್ಲಿ ಈ ಭಾಗದಲ್ಲಿ ಮನೆಗೊಬ್ಬ ಕ್ಯಾನ್ಸರ್‌ ರೋಗಿ ಸಿಕ್ಕರೆ ಅಚ್ಚರಿ ಪಡಬೇಕಿಲ್ಲ..!

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌- ತ್ಯಾಜ್ಯ ಕಂಪನಿಗಳ ವ್ಯತಿರಿಕ್ತ ಪರಿಣಾಮದಿಂದ ಭವಿಷ್ಯದಲ್ಲಿ ಜೀವಸಂಕುಲದ ಮೇಲೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದು ಮನೆ-ಮನಗಳಲ್ಲಿ ದುಗುಡಕ್ಕೆ ಕಾರಣವಾಗಿದೆ. ಸರ್ಕಾರ ಕೆಮಿಕಲ್‌ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಅವರಿಗೆ ಮತ್ತಷ್ಟೂ ಅನುಕೂಲತೆಗಳನ್ನು ಮಾಡಿಕೊಡುತ್ತಿರುವುದು ಜನರ ಆತಂಕ ಇಮ್ಮಡಿಸಿದೆ.

ಸರ್ಕಾರದ ಅಧಿಕಾರಿಗಳನ್ನೇ ಒಳಬಿಡದ ಕಂಪನಿಗಳು, ಅಲ್ಲಿ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿದಂತಿದೆ. ಷರತ್ತುಗಳ ಉಲ್ಲಂಘನೆ ಆರೋಪದಡಿ ಜಿಲ್ಲಾಡಳಿತ ಕೆಮಿಕಲ್‌ ಕಂಪನಿಗಳಿಗೆ ನೋಟಿಸ್‌ ನೀಡಿ ಒಂದಕ್ಕೆ ಬೀಗ ಜಡಿದರೂ, ತಿದ್ದಿಕೊಳ್ಳದ ಕೆಲವು ಕೆಮಿಕಲ್‌ ಕಂಪನಿಗಳು ಈಗ್ಯೂ ತ್ಯಾಜ್ಯ ಹಾಗೂ ವಿಷಗಾಳಿಯನ್ನು ಎಗ್ಗಿಲ್ಲದೆ ಹೊರಬಿಡುತ್ತಿದೆ. ಜಿಲ್ಲಾಡಳಿತ ನೋಟೀಸ್‌ಗೆ ಕ್ಯಾರೇ ಅನ್ನದ ಇವರಿಗೆ ಇಂಡಸ್ಟ್ರಿಯಲ್‌ ಫ್ರೆಂಡ್ಲೀ " ರಾಜಕೀಯ ಗಣ್ಯರ ಹಿಮ್ಮೇಳ ಸಾಕು ಅಂತಾರೆ. ಹೀಗಾಗಿ, ಜಿಲ್ಲಾಧಿಕಾರಿ ನೋಟೀಸು ನೀಡಿದ ನಂತರವೂ ತಮ್ಮ ಹಳೆಯ ಚಾಳಿ ಮುಂದುವರೆಸಿರುವ ಕೆಲವು ಕಂಪನಿಗಳು ರಾತೋರಾತ್ರಿ ತ್ಯಾಜ್ಯ ನೀರನ್ನು ಹಳ್ಳಕ್ಕೆ, ವಿಷಗಾಳಿಯನ್ನು ಆಗಸಕ್ಕೆ ಬಿಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಇದರ ವ್ಯತಿರಿಕ್ತ ಪರಿಣಾಮ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳ ಬೀರುತ್ತಿದೆ ಎಂಬ ಜನಾಕ್ರೋಶ ಮೂಡಿಬರುತ್ತಿದೆ.

ಈ ಕೈಗಾರಿಕೆ ಪ್ರದೇಶಕ್ಕೆ ಮೊದಲ ಹಂತವಾಗಿ ಸುಮಾರು 3 ಸಾವಿರ ಎಕರೆ ಭೂಮಿ ನೀಡಲಾಗಿದೆ. ಅದರಲ್ಲಿ ಈಗಾಗಲೇ ಕೆಮಿಕಲ್ ಕಂಪನಿಗಳು ಹಾಕಿ ಜನರ ಜೀವದ ಜೊತೆ ಅಧಿಕಾರಿಗಳು ಮತ್ತು ಸರ್ಕಾರದಲ್ಲಿರುವ ಜನಪ್ರತಿನಿಧಿಗಳು ಚೆಲ್ಲಾಟವಾಡುತ್ತಿದ್ದಾರೆ. ಇಲ್ಲಿನ ಕಂಪನಿಗಳು ಪರಿಸರದ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಜನರ ಮತ್ತು ಪ್ರಾಣಿಗಳ ಜೀವಕ್ಕೆ ಕಂಟಕವಾಗಿವೆ. ಇವು ಬಿಡುವ ವಿಷಕಾರಿ ತ್ಯಾಜ್ಯವು ನೀರು, ಮಣ್ಣು ಮತ್ತು ಗಾಳಿಯನ್ನು ಕಲುಷಿತವನ್ನಾಗಿ ಮಾಡಿವೆ. ಇದರಿಂದಾಗಿ ಭವಿಷ್ಯತಿನಲ್ಲಿ ಮನೆಗೊಬ್ಬ ಕ್ಯಾನ್ಸರ್, ಕ್ಷಯ ಮತ್ತು ಉಸಿರಾಟದ ತೊಂದರೆ ಇರುವ ವ್ಯಕ್ತಿ ದೊರೆಯಬಹುದು.

-ಸಾಬು ನಾಯಕ, ನೀಲಹಳ್ಳಿ. 

ನಮ್ಮ ಭಾಗದಲ್ಲಿ ಕೈಗಾರಿಕೆಗಳು ಬಂದರೆ ನಮ್ಮಗೆ ಮತ್ತು ಮಕ್ಕಳಿಗೆ ಉದ್ಯೋಗ ದೊರೆಯುತ್ತದೆ. ಹಾಗೂ ಉದ್ಯೋಗವನ್ನರಿಸಿ ದೂರದ ಬೆಂಗಳೂರು-ಮುಂಬೈ ಮಹಾನಗರಗಳಿಗೆ ಗುಳೆ ಹೋಗುವುದು ತಪ್ಪುತ್ತದೆ ಎಂದು ಇಲ್ಲಿನ ರೈತರು ಭೂಮಿ ನೀಡಿದರೆ, ಇದಕ್ಕೆ ತದ್ವಿರುದ್ಧಂತೆ ಈ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಅದರ ಜತೆ ಇಲ್ಲಿನ ಜನಕ್ಕೆ ವಿಷಗಾಳಿ, ನೀರು ನೀಡುತ್ತಿವೆ. ಇದರಿಂದ ಉಸಿರಾಟದ ಸಮಸ್ಯೆ, ಗರ್ಭಿಣಿಯರಿಗೆ ಗರ್ಭಕೋಶದ ತೊಂದರೆ ಅದಲ್ಲದೆ ಬೆಳೆಯುವ ಮಕ್ಕಳಿಗೆ ಉಸಿರಾಟ ಮತ್ತು ಚರ್ಮ ತೊಂದರೆ ಕಾಣುತ್ತಿರುವುದು ಅತ್ಯಂತ ಶೋಚನೀಯ ಸ್ಥಿತಿ ಎದುರಾಗಿದೆ.

- ಶರಣು ಎಸ್ ಹಿರೇಮಠ, ಗ್ರಾ.ಪಂ ಸದಸ್ಯ ಕಿಲ್ಲನಕೇರಾ

Read more Articles on