ಸಾರಾಂಶ
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಒತ್ತಾಯಿಸಿದರು.
ವಿಜಯಪುರ : ರಾಜೀನಾಮೆ ಕೊಡಲಿ ಎಂದು ಶಾಸಕ ಯತ್ನಾಳ ಅವರ ಸವಾಲನ್ನು ಸಚಿವ ಶಿವಾನಂದ ಪಾಟೀಲರು ಸವಾಲಾಗಿ ಸ್ವೀಕರಿಸಿ ರಾಜೀನಾಮೆ ಸಲ್ಲಿಸಿದ್ದಾರೆ. ಈಗ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸರದಿ ಬಂದಿದ್ದು, ಅವರು ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಾನಂದ ಪಾಟೀಲರ ರಾಜೀನಾಮೆ ಕುರಿತು ಯತ್ನಾಳ ಮಾತನಾಡುವುದು ನೋಡಿದರೆ ಹಿಂದೂ ಹುಲಿ ಎಂದು ಕರೆಸಿಕೊಳ್ಳುತ್ತಿದ್ದವರು ಈಗ ಹಿಂದೂ ಇಲಿ ಆಗಿಬಿಟ್ಟಿದೆ ಎಂದು ಲೇವಡಿ ಮಾಡಿದರು. ಯತ್ನಾಳಗೆ ಸ್ವಂತ ಗೆಲ್ಲುವ ಶಕ್ತಿ ಇದ್ದರೆ, ಧಮ್ ಇದ್ದರೆ ರಾಜೀನಾಮೆ ನೀಡಿ ಚುನಾವಣೆಗೆ ಬರಲಿ ಎಂದರು.
ಬೆಂಗಳೂರಿಗೆ ಹೋಗಿ ಸಿದ್ದರಾಮಯ್ಯರಿಗೆ ಹಾಗೂ ವಿಜಯಪುರದಲ್ಲಿ ಎಂ.ಬಿ.ಪಾಟೀಲರಿಗೆ ಓಲೈಸುವುದನ್ನು ಬಿಟ್ಟರೆ ಬೇರೇನು ಮಾಡಿಲ್ಲ. ಮಾಡೋದೆಲ್ಲ ಭ್ರಷ್ಟಾಚಾರ, ಬಾಯಲ್ಲಿ ಸಾಚಾತನ. ನೀವು ಆರಂಭಿಸಿದ ಸಿದ್ಧಸಿರಿಯಿಂದ ಎಷ್ಟು ಜನಕ್ಕೆ ಅನುಕೂಲ ಮಾಡಿದ್ದೀರಿ, ಹಿಂದೂಗಳಿಗೆ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಸರಳತೆ, ಸಜ್ಜನಿಕೆ ಹಾಗೂ ಬದ್ಧತೆಯಿಂದ ರಾಜಕಾರಣ ಮಾಡುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಬಗ್ಗೆ ಹಗುರವಾಗಿ ಮಾತನಾಡುತ್ತೀರಿ. ಒಮ್ಮೆ ಅವರ ಕ್ಷೇತ್ರಕ್ಕೆ ಹೋಗಿ ನೋಡಿ, ಹೇಗೆಲ್ಲ ಅಭಿವೃದ್ಧಿ ಮಾಡಿದ್ದಾರೆ. ಅವರ ಬಗ್ಗೆ ಮಾತನಾಡುವ ನಿಮಗೆ ನಾಚಿಕೆ, ಮಾನ ಮರ್ಯಾದೆ ಏನೂ ಇಲ್ಲ. ಯಶವಂತರಾಯಗೌಡರ ಬಗ್ಗೆ ಮಾತನಾಡುವ ನೈತಿಕತೆಯೇ ನಿಮಗಿಲ್ಲ ಎಂದರು.
ಸುದ್ದಿಗೊಷ್ಠಿಯಲ್ಲಿ ಡಾ.ರವಿ ಬಿರಾದಾರ, ಎಂ.ಸಿ.ಮುಲ್ಲಾ, ಫಯಾಜ್ ಕಲಾದಗಿ ಉಪಸ್ಥಿತರಿದ್ದರು.