ಪ್ರಾಮಾಣಿಕತೆ ಇದ್ದಲ್ಲಿ ನಿರ್ಭೀತಿಯಿಂದ ಕಾರ್ಯ ಸಾಧ್ಯ

| Published : Apr 16 2025, 12:36 AM IST

ಪ್ರಾಮಾಣಿಕತೆ ಇದ್ದಲ್ಲಿ ನಿರ್ಭೀತಿಯಿಂದ ಕಾರ್ಯ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ಪೆನ್ನಿನ ಮಾನ, ಮರ್ಯಾದೆ ಉಳಿಯಬೇಕಾದರೆ ಪತ್ರಕರ್ತ ತನ್ನ ಬರಹವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಬೇಕಾಗುತ್ತದೆ. ಪ್ರಾಮಾಣಿಕತೆ ಮತ್ತು ನಿಷ್ಠುರ ಮನೋಭಾವವನ್ನು ಹೊಂದಿದಾಗ ಪತ್ರಿಕಾ ಕ್ಷೇತ್ರದಲ್ಲಿ ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ನಾಡೋಜ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ಶಿವಮೊಗ್ಗ: ಪೆನ್ನಿನ ಮಾನ, ಮರ್ಯಾದೆ ಉಳಿಯಬೇಕಾದರೆ ಪತ್ರಕರ್ತ ತನ್ನ ಬರಹವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಬೇಕಾಗುತ್ತದೆ. ಪ್ರಾಮಾಣಿಕತೆ ಮತ್ತು ನಿಷ್ಠುರ ಮನೋಭಾವವನ್ನು ಹೊಂದಿದಾಗ ಪತ್ರಿಕಾ ಕ್ಷೇತ್ರದಲ್ಲಿ ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ನಾಡೋಜ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಸಂಜೆ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ‘ಪಿ.ಲಂಕೇಶ್ ಪ್ರಶಸ್ತಿ’ ಹಾಗೂ ‘ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಹಣ ಇರುವಲ್ಲಿ ಮನುಷ್ಯ ಭ್ರಷ್ಟನಾಗುತ್ತಾನೆ. ಪತ್ರಿಕಾ ಕ್ಷೇತ್ರದಲ್ಲಿ ಯಾವುದಕ್ಕೂ ಅಂಜದೇ ವಾಸ್ತವದ ನೆಲೆಗಟ್ಟಿನಲ್ಲಿ ಮತ್ತು ನಿಷ್ಠುರವಾಗಿ ಕೆಲಸ ಮಾಡಿದಾಗ ಆ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯುತ್ತಾನೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯನ ದೌರ್ಬಲ್ಯವನ್ನೇ ಹಿಡಿದು ಸುಲಿಗೆ ಮಾಡುವಂತಹ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಪತ್ರಕರ್ತರಿಗೆ ಯಾವುದೇ ಸೌಲಭ್ಯವನ್ನು ನೀಡದೇ ಇರುವುದು ಇದಕ್ಕೆ ಕಾರಣವಿರಬಹುದು ಎಂದರು.

ಪಿ.ಲಂಕೇಶ್ ಪತ್ರಿಕಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದವರು. ಸರ್ಕಾರವನ್ನೇ ಬದಲಿಸಿದಂತಹ ಕೀರ್ತಿ ಅವರ ಬರಹಕ್ಕಿತ್ತು. ಸಮಾಜದಲ್ಲಿ ಶೋಷಿತರ ಮತ್ತು ನೊಂದವರ ಬಗ್ಗೆ ಬೆಳಕು ಚೆಲ್ಲುವಂತಹ ಕಾರ್ಯವನ್ನು ಪಿ.ಲಂಕೇಶ್ ನಿರಂತರವಾಗಿ ಮಾಡಿಕೊಂಡು ಬಂದವರು. ಅವರೊಂದು ಚುಂಬಕ ಶಕ್ತಿಯಾಗಿದ್ದರು ಎಂದು ಹೇಳಿದರು.

ಅತ್ಯಂತ ನಿರ್ಭೀತಿಯಿಂದ ಮತ್ತು ಯಾರಿಗೂ ತಲೆಬಾಗದೇ ಅನೇಕ ದಶಕಗಳ ಕಾಲ ಪಿ.ಲಂಕೇಶ್ ಪತ್ರಿಕಾ ಕ್ಷೇತ್ರದಲ್ಲಿ ತಮ್ಮ ಕಾರ್ಯವನ್ನು ಸಾಧಿಸಿದರು. ಅನೇಕ ಪತ್ರಕರ್ತರನ್ನು ಬರಹಗಾರರನ್ನು ಬೆಳೆಸಿದರು. ಇಂತವರ ಹೆಸರಿನಲ್ಲಿ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಹಿರಿಯ ಪತ್ರಕರ್ತರಿಗೆ ಪ್ರಶಸ್ತಿಯನ್ನು ನೀಡುತ್ತಿರುವುದು ಅತ್ಯಂತ ಸಂತಸದ ಸಂಗತಿ. ಆದರೆ, ಮಹಿಳಾ ಪತ್ರಕರ್ತರನ್ನು ಕೂಡ ಇಂತಹ ಪ್ರಶಸ್ತಿಗೆ ಗುರುತಿಸಬೇಕು ಎಂಬ ಸಲಹೆ ನೀಡಿದರು.

ಮಾಜಿ ಸಚಿವ ಬಿ.ಎಲ್.ಶಂಕರ್ ಮಾತನಾಡಿ, ಓದುಗರೇ ಪತ್ರಿಕೆಯ ಆಸ್ತಿ. ಪತ್ರಕರ್ತರೂ ಕೂಡ ಪತ್ರಿಕೆಗಳ ಆಸ್ತಿ. ಉತ್ತಮ ಬರಹಗಳನ್ನು ನೀಡಿದಾಗ ಓದುಗರ ಸಂಖ್ಯೆ ಹೆಚ್ಚಾಗುತ್ತದೆ. ಪ್ರಜಾ ಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳ ಆಸ್ತಿ. ಆದರೆ ಇಂದಿನ ದಿನಮಾನದಲ್ಲಿ ಹಣವಂತರ ಕೈಯಲ್ಲಿ ಎಲ್ಲವೂ ಸಿಕ್ಕು ಈ ಪದಗಳ ಅರ್ಥಗಳೇ ಕಳೆದು ಹೋಗಿವೆ ಎಂದರು.

ರಾಷ್ಟ್ರ ನಾಯಕನಾಗಬೇಕಾದರೆ ಹುಟ್ಟಿನ ಹಿನ್ನೆಲೆ ಬೇಕಾಗುತ್ತದೆ ಎಂಬುದು ಇಂದಿನ ಸನ್ನಿವೇಶ. ಏಕೆಂದರೆ ಅಂಬೇಡ್ಕರ್‌ ಅವರನ್ನು ಒಂದು ಸಮುದಾಯಕ್ಕೆ ಸೀಮಿತ ಪಡಿಸಿರುವುದು ಇದನ್ನು ಸ್ಪಷ್ಟಪಡಿಸುತ್ತದೆ. ಸಮಾಜ ಕಲ್ಯಾಣ ಇಲಾಖೆ ಮೂಲಕ ಸರ್ಕಾರ ಇವರ ಕುರಿತು ಪ್ರಕಟಣೆ, ಜಾಹೀರಾತುಗಳನ್ನು ನೀಡುತ್ತದೆ. ನಿಜವಾಗಿಯೂ ಅಂಬೇಡ್ಕರ್ ಜಯಂತಿಯನ್ನು ಕಾನೂನು ಇಲಾಖೆ ಮಾಡಬೇಕಾಗಿತ್ತು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಪ್ರೆಸ್‌ಟ್ರಸ್ಟ್‌ ಕಾರ್ಯದರ್ಶಿ ನಾಗರಾಜ್ ನೇರಿಗೆ, ಸಂತೋಷ್ ಕಾಚಿನಕಟ್ಟೆ, ರವಿ ಆರಗ, ಕಿರಣ್ ಕಂಕಾರಿ, ಎಸ್.ಕೆ.ಗಜೇಂದ್ರಸ್ವಾಮಿ, ಶಿ.ಜು.ಪಾಶ, ಗೋ.ವಾ.ಮೋಹನಕೃಷ್ಣ, ಪಿ.ಜೇಸುದಾಸ್, ಸುನಿಲ್ ಶಿರನಲ್ಲಿ, ಹೊನ್ನಾಳಿ ಚಂದ್ರಶೇಖರ್, ವಿ.ಸಿ. ಪ್ರಸನ್ನ, ರಾಕೇಶ್ ಡಿಸೋಜ ಮುಂತಾದವರು ಉಪಸ್ಥಿತರಿದ್ದರು. ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರ ರಾಮಚಂದ್ರ ಗುಣಾರಿ ಪ್ರಾರ್ಥಿಸಿದರು.ಲಂಕೇಶ್‌ ಹೆಸರಿನಲ್ಲಿ ಸರ್ಕಾರ

ಪತ್ರಕರ್ತರಿಗೆ ಪ್ರಶಸ್ತಿ ನೀಡಲಿ

ಯಾವ ಜಾಹೀರಾತು, ರಾಜಕಾರಣಿಗಳ ಆಶ್ರಯ ಇಲ್ಲದೆ ಹಲವು ವರ್ಷ ಪತ್ರಿಕೆ ನಡೆಸಿದ ಕೀರ್ತಿ ಪಿ.ಲಂಕೇಶ್‌ ಅವರಿಗೆ ಸಲ್ಲುತ್ತದೆ. ಅವರ ಬರವಣಿಗೆಗೆ ಸರ್ಕಾರವನ್ನು ಬೀಳಿಸುವ ಶಕ್ತಿ ಇತ್ತು. ಅವರು ಮನಸ್ಸು ಮಾಡಿದ್ದರೆ ಉತ್ತಮ ಸ್ಥಾನಕ್ಕೇರಬಹುದಿತ್ತು. ಆದರೆ, ಅವರೆಂದು ವೃತ್ತಿಯ ಪಾವಿತ್ರ್ಯತೆ ಬಿಡಲಿಲ್ಲ. ಹೀಗೆ ಪತ್ರಿಕೋದ್ಯಮಕ್ಕೆ ಅಪರಿಮಿತ ಸೇವೆ ಸಲ್ಲಿಸಿರುವ ಪತ್ರಕರ್ತ ಪಿ.ಲಂಕೇಶ್‌ ಅವರ ಹೆಸರಿನಲ್ಲಿ ಸರ್ಕಾರ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ನೀಡಬೇಕು ಎಂದು ಸಾಹಿತಿ ಕುಂ.ವೀರಭದ್ರಪ್ಪ ಒತ್ತಾಯಿಸಿದರು.

ಪ್ರಶಸ್ತಿ ಪ್ರದಾನ

ಕಾರ್ಯಕ್ರಮದಲ್ಲಿ ಜೀವಮಾನ ಸಾಧನೆಗಾಗಿ ಕನ್ನಡಪ್ರಭದ ಪ್ರಧಾನ ವರದಿಗಾರ ಗೋಪಾಲ್‌ ಯಡಗೆರೆ, ಶಿವಮೊಗ್ಗ ಟೈಮ್ಸ್ ಸಂಪಾದಕ ಎಸ್.ಚಂದ್ರಕಾಂತ್, ಸಂಯುಕ್ತ ಕರ್ನಾಟಕ ವರದಿಗಾರ ಕೆ.ತಿಮ್ಮಪ್ಪ ಅವರಿಗೆ ‘ಪಿ.ಲಂಕೇಶ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಪತ್ರಕರ್ತರಾದ ತೀರ್ಥಹಳ್ಳಿಯ ಶಿವಾನಂದ ಕರ್ಕಿ ಹಾಗೂ ಕನ್ನಡಪ್ರಭದ ಸೊರಬ ವರದಿಗಾರ ಎಚ್‌.ಕೆ.ಬಿ.ಸ್ವಾಮಿ ಅವರಿಗೆ ‘ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿ’ ಪ್ರದಾನ ಮಾಡಲಾಯಿತು.