ಸಂವಿಧಾನ ಇಲ್ಲದಿದ್ದರೆ ದೇಶವೂ ಅತಂತ್ರ: ಷಡಕ್ಷರಿ

| Published : Feb 10 2024, 01:50 AM IST

ಸಾರಾಂಶ

ಸಂವಿಧಾನ ಮನುಷ್ಯನ ದೇಹದಲ್ಲಿನ ಹೃದಯವಿದ್ದಂತೆ, ಹೃದಯ ನಿಂತರೆ ಹೇಗೆ ಮನುಷ್ಯ ಸ್ತಬ್ಧವಾಗುತ್ತಾನೋ ಹಾಗೆ ಸಂವಿಧಾನ ಇಲ್ಲದಿದ್ದರೆ ದೇಶವೂ ಅತಂತ್ರವಾಗುತ್ತದೆ. ಆದರೆ ಕೆಲವರು ಸಂವಿಧಾನವನ್ನು ಬದಲು ಮಾಡುತ್ತೇವೆಂದು ಹುಚ್ಚುತನದ ಹೇಳಿಕೆಯನ್ನು ಕೊಡುತ್ತಾರೆ ಸಂವಿಧಾನವಿಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ಭಾರತ ಸಂವಿಧಾನ ಜಾಗೃತಿ ಕಾರ್ಯಕ್ರಮ । ಸಂವಿಧಾನದ ಕರಡು ರಚನಾ ಸಮಿತಿಯ ಅಣಕು ಪ್ರದರ್ಶನ

ಕನ್ನಡಪ್ರಭ ವಾರ್ತೆ ತಿಪಟೂರು

ಸಂವಿಧಾನ ಮನುಷ್ಯನ ದೇಹದಲ್ಲಿನ ಹೃದಯವಿದ್ದಂತೆ, ಹೃದಯ ನಿಂತರೆ ಹೇಗೆ ಮನುಷ್ಯ ಸ್ತಬ್ಧವಾಗುತ್ತಾನೋ ಹಾಗೆ ಸಂವಿಧಾನ ಇಲ್ಲದಿದ್ದರೆ ದೇಶವೂ ಅತಂತ್ರವಾಗುತ್ತದೆ. ಆದರೆ ಕೆಲವರು ಸಂವಿಧಾನವನ್ನು ಬದಲು ಮಾಡುತ್ತೇವೆಂದು ಹುಚ್ಚುತನದ ಹೇಳಿಕೆಯನ್ನು ಕೊಡುತ್ತಾರೆ ಸಂವಿಧಾನವಿಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ನಗರದ ಕಲ್ಪತರು ಆಡಿಟೋರಿಯಂನಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಭಾರತ ಸಂವಿಧಾನ ಜಾಗೃತಿ ಕಾರ್ಯಕ್ರಮ ಹಾಗೂ ಭಾರತ ಸಂವಿಧಾನದ ಕರಡು ರಚನಾ ಸಮಿತಿಯ ಅಣಕು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪವಿತ್ರ ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸಬೇಕು. ಸಂವಿಧಾನ ಕೊಟ್ಟಿರುವ ಹಕ್ಕು, ಕರ್ತವ್ಯಗಳನ್ನು ಸರಿಯಾಗಿ ಪಾಲಿಸುವ ಮೂಲಕ ಅದರಂತೆ ನಡೆದುಕೊಳ್ಳಬೇಕು. ಸಂವಿಧಾನವನ್ನು ಅಂಬೇಡ್ಕರ್‌ ಸೇರಿದಂತೆ ಹಲವು ನಾಯಕರು ಉತ್ಕೃಷ್ಟ ಮತ್ತು ಲಿಖಿತ ಸಂವಿಧಾನವನ್ನು ಮಂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಆದ್ದರಿಂದಲೇ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿದೆ. ಸರ್ವರೂ ಅದಕ್ಕೆ ವಿದೇಯರಾಗಿ ಗೌರವದಿಂದ ಜೀವಿಸಿ ಬದುಕಿ ಬಾಳಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಸಂವಿಧಾನವನ್ನು ತಿರುಚುವಂತೆ ಮಾತನಾಡುವವರಿದ್ದಾರೆ. ಅವರಿಗೆ ಈ ರೀತಿ ಸ್ವಾತಂತ್ರ ಕೊಟ್ಟಿರುವುದೂ ಸಂವಿಧಾನವೇ ಎಂಬುದನ್ನು ತಿಳಿಯಬೇಕು. ರಾಜ್ಯದಲ್ಲಿ ಫೆ.16ರಂದು ಬಜೆಟ್ ಮಂಡನೆಯಾಗುತ್ತಿರುವುದು ಸಂವಿಧಾನ ನಮಗೆ ನೀಡಿರುವ ಹಕ್ಕು. ಅದೇ ಹಕ್ಕನ್ನು ಚಲಾಯಿಸಿ ನಾವು ಇತ್ತೀಚೆಗೆ ದೆಹಲಿಗೆ ಹೋಗಿ ರಾಜ್ಯದ ಪಾಲಿಗೆ ಬರಬೇಕಾದ ಪಾಲನ್ನು ಸಂವಿಧಾನಬದ್ದವಾಗಿ ಕೇಳಿದ್ದೇವೆ ಎಂದರು. ಫೆ.18ಕ್ಕೆ ಸಂವಿಧಾನ ರಥ ನೊಣವಿನಕೆರೆ ಮೂಲಕ ನಮ್ಮ ತಾಲೂಕಿಗೆ ಆಗಮಿಸುತ್ತಿದ್ದು ಅಂದು ಎಲ್ಲ ಅಧಿಕಾರಿಗಳು, ಶಿಕ್ಷಕರೂ, ವಿದ್ಯಾರ್ಥಿಗಳು ಹಾಜರಿದ್ದು ಗೌರವಪೂರ್ವಕವಾಗಿ ಸಂವಿಧಾನ ರಥವನ್ನು ಸ್ವಾಗತಿಸೋಣ ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮಾತನಾಡಿ, ಭಾರತದ ಸಂವಿಧಾನ ದೇಶದ ಎಲ್ಲ ಪ್ರಜೆಗಳಿಗೂ ಸಮಾನ ಅವಕಾಶ ನೀಡಿದೆ. ಭಾರತದ ಸಂವಿಧಾನ ಸಧೃಢವಾಗಿದ್ದು ಇದರ ಉತ್ತಮ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಬೆಳವಣಿಗೆ ಸಾಧ್ಯ. ಇಂಥಹ ಶ್ರೇಷ್ಠ ಸಂವಿಧಾನವುಳ್ಳ ಭಾರತ ದೇಶದಲ್ಲಿ ಜನಿಸಿರುವುದೇ ನಮ್ಮ ಪುಣ್ಯ ಎಂದು ತಿಳಿಸಿದರು.

ನಗರಸಭಾ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರಪಂಚದ ಎಲ್ಲ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಎಲ್ಲ ದೇಶಗಳ ಸಂವಿಧಾನದ ಪ್ರಮುಖ ಅಂಶಗಳನ್ನು ಒಳಗೊಂಡ ಶ್ರೇಷ್ಠ ಸಂವಿಧಾನವನ್ನು ರಚಿಸಿ ಭಾರತಕ್ಕೆ ಉನ್ನತ ಕೊಡುಗೆ ನೀಡಿದರು. ಈ ಸಂವಿಧಾನವು ಪ್ರಪಂಚದ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಪವನ್‌ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತ್ರಿವೇಣಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಜಾಕ್ಷಮ್ಮ, ಶಿಕ್ಷಕರ ಸಂಘದ ಕಾರ್ಯದರ್ಶಿ ಸುರೇಶ್, ಮುಖ್ಯಶಿಕ್ಷಕ ಕುಮಾರಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು. ಫೋಟೋ

ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಶಾಸಕ ಕೆ. ಷಡಕ್ಷರಿ ಉದ್ಘಾಟಿಸಿದರು,