ಸಾರಾಂಶ
ಶ್ರೀ ಸ್ವಯಂಪ್ರಕಾಶ ಸರಸ್ವತೀ ಪ್ರೌಢಶಾಲೆ ಆವರಣದಲ್ಲಿ ಪ್ರತಿಭಾ ಕಾರಂಜಿ- ಕಲೋತ್ಸವದಲ್ಲಿ
ಕನ್ನಡಪ್ರಭ ವಾರ್ತೆ, ಕೊಪ್ಪಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಯಾಗಿ ಎಚ್.ವಿಶ್ವನಾಥ್ ಶಿಕ್ಷಣ ಮಂತ್ರಿಯಾಗಿದ್ದ ಅವಧಿಯಲ್ಲಿ ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ಅನುವಾಗುವಂತೆ ಪ್ರತಿಭಾ ಕಾರಂಜಿ ಜಾರಿಗೊಳಿಸಿದರು. ಈ ಅವಧಿಯಲ್ಲಿ ನಾನು ಚಿಕ್ಕಮಗಳೂರು ಜಿಲ್ಲಾ ಪರಿಷತ್ನ ಅಧ್ಯಕ್ಷನಾಗಿ ಜಿಲ್ಲಾದ್ಯಂತ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಬಗ್ಗೆ ಹೆಮ್ಮೆ ಇದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ತಾಲೂಕಿನ ನಾರ್ವೆಯ ಶ್ರೀ ಸ್ವಯಂಪ್ರಕಾಶ ಸರಸ್ವತೀ ಪ್ರೌಢಶಾಲೆ ಆವರಣದಲ್ಲಿ ಜಿಪಂ, ಕೊಪ್ಪ ತಾಪಂ, ಶಾಲಾ ಶಿಕ್ಷಣ ಇಲಾಖೆ, ನರಸೀಪುರ ಗ್ರಾಪಂ, ಶ್ರೀ ಸ್ವಯಂಪ್ರಕಾಶ ಸರಸ್ವತೀ ವಿದ್ಯಾಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಮಾತನಾಡಿದ ಅವರು ಪ್ರತಿಭಾ ಕಾರಂಜಿ ಗ್ರಾಮೀಣ ಕಲೆಗಳ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ. ಆಯಾ ಭಾಗಗಳ ಗ್ರಾಮೀಣ ಮಟ್ಟದ ಆಚರಣೆ ವೈಶಿಷ್ಟ್ಯಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವ ಮಕ್ಕಳ ಮುಖೇನ ಅನಾವರಣಗೊಂಡು ಗ್ರಾಮೀಣ ಭಾಗದ ನೆನಪನ್ನು ಅವಿಸ್ಮರಣೀಯವಾಗಿಸುತ್ತಿದೆ. ಶಿಕ್ಷಣದೊಂದಿಗೆ ಮಕ್ಕಳ ಪ್ರತಿಭೆ ಅನಾವರಣಗೊಂಡು ಯಾವ ವಿಷಯದ ಮೇಲೆ ಅವರಿಗೆ ಆಸಕ್ತಿ ಇದೆ ಎನ್ನುವುದನ್ನು ಗುರುತಿಸಿ ವೇದಿಕೆ ಕಲ್ಪಿಸಲು ಇಂತಹ ಕಾರ್ಯಕ್ರಮದಿಂದ ಸಾಧ್ಯ.ಶಿಕ್ಷಣದಲ್ಲಿ ಸಾಧನೆ ಮಾಡಲಾಗದ ಅದೆಷ್ಟೊ ಜನ ಕ್ರೀಡೆ, ಸಾಂಸ್ಕೃತಿಕ, ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ವಿಶಿಷ್ಟ ಸಾಧನೆ ಮಾಡಿದ ಪ್ರತಿಭೆಗಳು ನಮ್ಮ ಸುತ್ತಮುತ್ತ ಕಾಣಸಿಗುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಗಣೇಶೋತ್ಸವ, ನಾಡ ಹಬ್ಬ ದಸರಾ ಮಹೋತ್ಸವ, ಸೇರಿದಂತೆ ಇನ್ನಿತರ ಅನೇಕ ಸಂದರ್ಭಗಳಲ್ಲಿ ನಡೆಸಲ್ಪಡುವ ಸಾಂಸ್ಕೃತಿಕ ಕಾರ್ಯಕ್ರಮಗಳ ತಂಡದ ಕಲಾವಿದರು ಇಂತಹ ವೇದಿಕೆಗಳಿಂದಲೇ ಬಂದವರಾಗಿರುತ್ತಾರೆ. ಮಕ್ಕಳು ಶಿಕ್ಷಣ ಜ್ಞಾನದೊಂದಿಗೆ ಲೋಕಜ್ಞಾನ, ಸಾಮಾನ್ಯ ಜ್ಞಾನ ಪಡೆದುಕೊಂಡಾಗ ಸಾಧನೆ ಗುರಿ ಮುಟ್ಟಲು ಸಾಧ್ಯ ಎಂದರು.
ಶಿಕ್ಷಣಾಧಿಕಾರಿ ಜ್ಯೋತಿ, ಶಿಕ್ಷಣ ಸಮಿತಿ, ಆಡಳಿತ ಸಮಿತಿಯ ಕೆ.ಆರ್. ಚಂದ್ರಶೇಖರ್, ಪ್ರತಿಭಾ ಕಾರಂಜಿಗಳ ಜಿಲ್ಲಾ ಮಟ್ಟದ ನೂಡಲ್ ಅಧಿಕಾರಿ ಸತೀಶ್, ಗೌರವ ಸಲಹೆಗಾರ ಶ್ರೀಧರ್ ಭಟ್, ಕೆ.ಆರ್. ಶ್ರೀನಿವಾಸ್, ರತ್ನಾಕರ್ ಭಟ್, ಕೆ.ಟಿ.ನಾಗೇಂದ್ರ, ಬಿ.ಪಿ.ಚಿಂತನ್, ಓಡಿ ರತ್ನಾಕರ್, ನರೇಶ್, ಅನ್ನಪೂರ್ಣ ನರೇಶ್, ಶಾಲಾ ಮುಖ್ಯ ಶಿಕ್ಷಕಿ ವಸಂತಕುಮಾರಿ ಬಾಯಿ, ಶಬ್ಬೀರ್, ನರಸೀಪುರ ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ್, ಉಪಾಧ್ಯಕ್ಷೆ ಸುಜಾತ, ಭಾಷಾ ಶಿಕ್ಷಕ ಆರ್.ಡಿ.ರವೀಂದ್ರ, ಅಕ್ಷರ ದಾಸೋಹ ಸಹ ನಿರ್ದೇಶಕ ಎಲ್.ಅಂಜನಪ್ಪ ಮುಂತಾದವರಿದ್ದರು.