ಸಂಸ್ಕಾರವಂತರಾದರೆ ದೇವರನ್ನು ಅನುಭವಿಸಲು ಸಾಧ್ಯ

| Published : Apr 17 2025, 12:52 AM IST

ಸಾರಾಂಶ

ದೇವರಿಗೆ ಮೊರೆ ಹೋದರೆ ಮಾತ್ರ ಸುಖ, ಶಾಂತಿ, ನೆಮ್ಮದಿ ದೊರೆಯಲು ಸಾಧ್ಯ

ಕನ್ನಡಪ್ರಭ ವಾರ್ತೆ ಜಮಖಂಡಿ

ನಿಸರ್ಗದಲ್ಲಿ ದೇವರಿದ್ದಾನೆ. ಆದರೆ, ಗೋಚರಿಸುವುದಿಲ್ಲ. ಹಾಲಿನಲ್ಲಿ ತುಪ್ಪವಿದ್ದರೂ ಕಾಣುವುದಿಲ್ಲ. ಹಾಲಿಗೆ ಸಂಸ್ಕಾರ ಕೊಟ್ಟಾಗ ತುಪ್ಪವಾಗುವುದು. ಹಾಗೆಯೇ ಸಂಸ್ಕಾರವಂತರಾದರೆ ದೇವರನ್ನು ಅನುಭವಿಸಲು ಸಾಧ್ಯ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏ.15ರಿಂದ ಏ.26ರವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ, ಸದ್ಭಾವನಾ ಪಾದಯಾತ್ರೆ ಅಂಗವಾಗಿ ಮಂಗಳವಾರ ನಡೆದ ವಚನ ಜಾತ್ರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ ಚಿಂತನೆಯ ಮೂಲಕ ಎಲ್ಲರನ್ನೂ ಪುನೀತರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಸದ್ಭಾವನಾ ಪಾದಯಾತ್ರೆ ಕೈಗೊಂಡು ದುಶ್ಚಟಗಳ ಭಿಕ್ಷೆ ಬೇಡುವ ಹಾಗೂ ಸದ್ಗುಣಗಳ ದೀಕ್ಷೆ ನೀಡುವ ಶ್ರೀಮಠದ ಸತ್ಕಾರ್ಯ ಶ್ಲಾಘನೀಯವಾಗಿದೆ. ದೇವರಿಗೆ ಮೊರೆ ಹೋದರೆ ಮಾತ್ರ ಸುಖ, ಶಾಂತಿ, ನೆಮ್ಮದಿ ದೊರೆಯಲು ಸಾಧ್ಯ ಎಂದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಜಮಖಂಡಿ ಆಧ್ಯಾತ್ಮಿಕ ಕ್ಷೇತ್ರದ ಕೇಂದ್ರವಾಗಿದೆ. ಜಗತ್ತಿಗೆ ಆಧ್ಯಾತ್ಮಿಕ ಸಂದೇಶಗಳು ಜಮಖಂಡಿ ಮೂಲಕ ಸಾಗುತ್ತವೆ. ಆದ್ದರಿಂದ ಇಂದಿನ ಯುವಕರಿಗೆ ಸಂಸ್ಕಾರ ಕೊಟ್ಟು ಸನ್ಮಾರ್ಗದಲ್ಲಿ ಸಾಗುವಂತೆ ಪ್ರೇರೇಪಿಸುವ ಶ್ರೀಮಠದ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದರು.

ವಿಪ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ ಮಾತನಾಡಿ, ಇಳಕಲ್ಲನ ವಿಜಯ ಮಹಾಂತೇಶ ಸಂಸ್ಥಾನ ಮಠದ ಮಹಾಂತ ಜೋಳಿಗೆಯ ಪರಿಕಲ್ಪನೆಯನ್ನು ಜಮಖಂಡಿಯಲ್ಲಿ ಅನುಷ್ಠಾನಗೊಳಿಸುತ್ತಿರುವುದು ಸಂತಸದ ಸಂಗತಿ. ಪುರಾತನ ಮಠವಾಗಿರುವ ಓಲೇಮಠ ಜಮಖಂಡಿ ನಗರಕ್ಕೆ ಕಳಶಪ್ರಾಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮೀಜಿ ಸಮ್ಮುಖ ವಹಿಸಿ ಮಾತನಾಡಿ, ಸುಳ್ಳು ಹೇಳುವುದಿಲ್ಲ. ಯಾರೊಂದಿಗೆ ಜಗಳ ಕಾಯುವುದಿಲ್ಲ. ಯಾವುದೇ ದುಶ್ಚಟ ಮಾಡುವುದಿಲ್ಲ ಎಂದು ಸಂಕಲ್ಪ ಮಾಡಿ ಜೀವನ ಪವಿತ್ರ ಮಾಡಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ನಾಯಕರು. ಆದ್ದರಿಂದ ಇಂದಿನ ಮಕ್ಕಳಿಗೆ ಸಂಸ್ಕಾರ ನೀಡುವುದು ಬಹಳ ಮುಖ್ಯವಾಗಿದೆ ಎಂದು ಆಶೀರ್ವಚನ ನೀಡಿದರು.

ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಮು ಶಿರೋಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಿರಿಯ ವಕೀಲ ಡಾ.ತಾತಾಸಾಹೇಬ ಬಾಂಗಿ ಮಾತನಾಡಿದರು. ಝುಂಜರವಾಡದ ಬಸವರಾಜೇಂದ್ರ ಶರಣರು ಪ್ರವಚನ ಹೇಳಿದರು. ಗಾಣಿಗ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಕೆ.ಕೆ.ತುಪ್ಪದ, ಲೆಕ್ಕಪರಿಶೋಧಕ ಗಿರೀಶ ಬಾಂಗಿ ಇದ್ದರು. ನಿಖಿತಾ ಹಿರೇಮಠ, ಸಾನ್ವಿ ಬನ್ನಿಗಿಡದ ವಚನ ಪ್ರಾರ್ಥನಾ ಗೀತೆ ಹಾಡಿದರು. ಎಸ್.ವೈ.ಪಾಟೀಲ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶಂಕರ ಲಮಾಣಿ ನಿರೂಪಿಸಿದರು. ಓಲೇಮಠದ ಆನಂದ ದೇವರು ಶ್ರೀಗಳು ಶರಣು ಸಮರ್ಪಿಸಿದರು.