ಸಾರಾಂಶ
ನಾವು ಧರ್ಮದಿಂದ ನಡೆಯುವ ಹಾದಿ ಮರೆತಿದ್ದೇವೆ. ಅನ್ಯಾಯ ಮೋಸ, ವಂಚನೆ ಸಮಾಜದಲ್ಲಿ ಹೆಚ್ಚುತ್ತಿದೆ.
ಮುಳಗುಂದ: ಸಂತೃಪ್ತಿಯ ಜೀವನ ನಡೆಸಿದ ಶರಣ ಹಾದಿಯಲ್ಲಿ ಸಾಗಿದರೆ ಜೀವನಮುಕ್ತಿ ಎಂದು ಮಣಕವಾಡದ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಸ್ವಾಮಿಗಳು ಹೇಳಿದರು.
ಸಮೀಪದ ಹರ್ತಿ ಗ್ರಾಮದಲ್ಲಿ 12 ದಿನಗಳ ಕಾಲ ನಡೆದ ವಚನ ದರ್ಶನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪ್ರವಚನಕಾರರಾಗಿ ಮಾತನಾಡಿದ ಅವರು, ಸಾವು ಬಂದು ನಮ್ಮನ್ನು ಮುಟ್ಟುವ ತನಕ ಆನಂದದ ಬದುಕು ಬದುಕಬೇಕು. ಜೀವನದಲ್ಲಿ ಇದ್ದುದರಲ್ಲಿಯೇ ಸಾರ್ಥಕತೆ ಕಾಣಬೇಕು. ಇರುವವರೆಗೂ ಪರೋಪಕಾರದ ಕೆಲಸ ಮಾಡಬೇಕು ಎಂದರು.ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ನಾವು ಧರ್ಮದಿಂದ ನಡೆಯುವ ಹಾದಿ ಮರೆತಿದ್ದೇವೆ. ಅನ್ಯಾಯ ಮೋಸ, ವಂಚನೆ ಸಮಾಜದಲ್ಲಿ ಹೆಚ್ಚುತ್ತಿದೆ. ನಿರಂತರ ಅತ್ಯಾಚಾರ ನಡೆಯುವ ಈ ಸಮಾಜದಲ್ಲಿ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಇರುವವರು ಮಾತ್ರ ಆರೋಗ್ಯವಂತರು. ಮನಸ್ಸನ್ನು ಸ್ವಚ್ಛಗೊಳಿಸಲು ಪ್ರವಚನದ ಅವಶ್ಯಕತೆಯಿದೆ ಎಂದರು.
ಕಾಂಗ್ರೆಸ್ ಯುವ ನಾಯಕ ಕೃಷ್ಣಗೌಡ ಪಾಟೀಲ ಮಾತನಾಡಿ, ಆಧ್ಯಾತ್ಮಿಕ ಜೀವನ ಎಂದರೆ ವಾಸ್ತವ ಸ್ಥಿತಿ ಅರಿತುಕೊಳ್ಳುವದು. ಇಂದಿನ ದಿನಮಾನಗಳಲ್ಲಿ ಮಕ್ಕಳಿಗೆ ಹಿರಿಯರ ಮಾರ್ಗದರ್ಶನದ ಅವಶ್ಯಕವಾಗಿದ್ದು, ಬದುಕಿಗೆ ಉತ್ತಮ ದಾರಿ ತೋರಬೇಕಿದೆ ಎಂದರು.ಈ ಸಂದರ್ಭದಲ್ಲಿ ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮಿಗಳು, ವಿಜಯಪುರ ಹಾಗೂ ಹುಬ್ಬಳ್ಳಿಯ ಶಾಂತಾಶ್ರಮದ ಸದ್ಗುರು ಅಭಿನವ ಸಿದ್ಧಾರೂಢ ಸ್ವಾಮಿಗಳು, ತೇಲಸಂಗ ಹಿರೇಮಠದ ವೀರೇಶ್ವರ ದೇವರು, ಅಕ್ಕಿ ಆಲೂರಿನ ಅಭಿನವ ಸಿದ್ದರಾಮ ಸ್ವಾಮಿಗಳು, ಅಪ್ಪಣ್ಣ ಇನಾಮತಿ, ಗುತ್ತಿಗೆದಾರ ಕೆ.ವಿ. ಹಂಚಿನಾಳ, ವಿಜಯಕುಮಾರ ಗಡ್ಡಿ, ಡಿ.ಕೆ.ಲಕ್ಕಣ್ಣವರ ಇತರರು ಇದ್ದರು.