ಸಾರಾಂಶ
ಇನ್ನು ಮುಂದೆ ಬೆಳಗಾವಿ ನಗರದಲ್ಲಿ ಎಲ್ಲೆಂದರಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವಂತಿಲ್ಲ. ಒಂದು ವೇಳೆ ಕಂಡುಬಂದರೆ ನಿಮ್ಮ ಮೇಲೆ ರೌಡಿಶೀಟರ್ ಕೇಸ್ ಬೀಳೋದಂತೂ ಗ್ಯಾರಂಟಿ. ಇದಕ್ಕೆ "ಚುಚ್ಚು "ಮದ್ದು ನೀಡಲು ಪೊಲೀಸರು ಸನ್ನದ್ಧಗೊಂಡಿದ್ದಾರೆ.
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಇನ್ನು ಮುಂದೆ ಬೆಳಗಾವಿ ನಗರದಲ್ಲಿ ಎಲ್ಲೆಂದರಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವಂತಿಲ್ಲ. ಒಂದು ವೇಳೆ ಕಂಡುಬಂದರೆ ನಿಮ್ಮ ಮೇಲೆ ರೌಡಿಶೀಟರ್ ಕೇಸ್ ಬೀಳೋದಂತೂ ಗ್ಯಾರಂಟಿ. ಇದಕ್ಕೆ "ಚುಚ್ಚು "ಮದ್ದು ನೀಡಲು ಪೊಲೀಸರು ಸನ್ನದ್ಧಗೊಂಡಿದ್ದಾರೆ. ಜೂ.18ರಂದು ಸೀಟಿಗಾಗಿ ಯುವಕನ ಮೇಲೆ ಯುವಕರ ಗುಂಪೊಂದು ಚಾಕು ಇರಿದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಎಚ್ಚರಿಕೆ ಕ್ರಮ ವಹಿಸಿರುವ ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಗುಲಾಬ್ ರಾವ್ ಬೊರಸೆ ಅವರು ಅಗತ್ಯ ಕ್ರಮವನ್ನು ಕೂಡ ಕೈಗೊಂಡಿದ್ದಾರೆ. ಇದಕ್ಕಾಗಿ ಚುಚ್ಚು ನಿಯಂತ್ರಣ ವಿಶೇಷ ತಂಡವನ್ನು ಕೂಡ ರಚನೆ ಮಾಡಿದ್ದಾರೆ.
ನಗರದಲ್ಲಿ ಎಲ್ಲೆಂದರಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಓಡಾಡುವ ಯುವಕರನ್ನು ಸರಿದಾರಿಗೆ ತರುವ ಸಂಬಂಧವಾಗಿ ಮತ್ತು ಅವರು ದಾರಿತಪ್ಪದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸರು ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವ ಯುವಕರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.ನಗರದಲ್ಲಿ ಗಾಂಜಾ ದಂಧೆ, ಮನೆಗಳ್ಳತನ ಸೇರಿದಂತೆ ಅಪರಾಧಿಕ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಾ ಬಂದಿದ್ದವು. ಪೊಲೀಸರ ಬಗ್ಗೆ ಭಯವೇ ಇಲ್ಲದಂತಾದ ಪರಿಸ್ಥಿತಿ ಕೂಡ ನಿರ್ಮಾಣವಾಗಿತ್ತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ. ಪೊಲೀಸ್ ಇಲಾಖೆ ಈಗ ಅಪರಾಧ ಚಟುವಟಿಕೆ ತಡೆಗೆ ಕ್ರಮ ಕೈಗೊಂಡಿದೆ. ಇಂತಹ ಚಟುವಟಿಕೆಗಳಲ್ಲಿ ಅಪ್ರಾಪ್ತರು, ಯುವಕರು ಸಕ್ರಿಯವಾಗಿರುವುದನ್ನು ಕಂಡ ಖಾಕಿ ಕೂಡ ಶಾಕ್ ಆಗಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಕೊಲೆಗೆ ಯತ್ನ ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕರು ಶಾಮೀಲಾಗಿರುವುದು ಕೂಡ ಪತ್ತೆಯಾಗಿದೆ. ಮಾತ್ರವಲ್ಲ, ಬುಧವಾರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ನಲ್ಲಿ ಸೀಟ್ಗಾಗಿ ನಡೆದ ಕ್ಷುಲಕ ಜಗಳ ವಿಕೋಪಕ್ಕೆ ತಿರುಗಿ ವಿದ್ಯಾರ್ಥಿಯೊಬ್ಬನ ಮೇಲೆ ಚೂರಿ ಇರಿದ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಕೂಡ ಇದ್ದಾರೆ. ಇದು ತೀವ್ರ ಆತಂಕಕಾರಿ ವಿಚಾರ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಪ್ರಾಪ್ತರು ಮಾರಕಾಸ್ತ್ರ ಇಟ್ಟುಕೊಂಡು ತಿರುಗಾಡುತ್ತಿರುವುದು ಕಂಡುಬಂದಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಚುಚ್ಚು ನಿಯಂತ್ರಣ ವಿಶೇಷ ತಂಡ ರಚಿಸಲಾಗಿದೆ. ಡಿಸಿಪಿ ರೋಹನ ಜಗದೀಶ ಅವರ ನೇತೃತ್ವದ ತಂಡ ಈಗಾಗಲೇ ಗುರುವಾರದಿಂದಲೇ ಕಾರ್ಯಾಚರಣೆಗಿಳಿದಿದೆ. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕೆಲ ಶಂಕಿತ ಯುವಕರ ಬ್ಯಾಗ್ಗಳನ್ನು ಕೂಡ ತಪಾಸಣೆ ನಡೆಸಿದೆ.ಈ ತಂಡದಲ್ಲಿ ಐದಾರು ಸಿಬ್ಬಂದಿ ಇದ್ದಾರೆ. ಒಂದು ವಾಹನದಲ್ಲಿ ತೆರಳಿ ಯಾರ ಮೇಲೆ ಸಂಶಯ ಮೂಡುತ್ತದೋ ಅಂಥವರನ್ನು ತಡೆದು ತಪಾಸಣೆ ಮಾಡುತ್ತಾರೆ. ಚಾಕು, ತಲ್ವಾರ್ ಸೇರಿ ಮಾರಕಾಸ್ತ್ರಗಳು ಪತ್ತೆಯಾದರೆ ನೇರವಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ರೌಡಿಶೀಟ್ ಕೂಡ ತೆರೆಯುತ್ತೇವೆ. ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಠಾಣೆಗೆ ಬಂದು ಹಾಜರಿ ಕೊಡಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಗುಲಾಬ್ ರಾವ್ ಬೊರಸೆ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಇತ್ತೀಚೆಗೆ ಕೆಲ ಕಿಡಿಗೇಡಿಗಳು ಮಾರಕಾಸ್ತ್ರ ಹಿಡಿದು ತಿರುಗಾಡುತ್ತಿರುವುದು ಕಂಡುಬಂದಿದೆ. ಇನ್ಮುಂದೆ ನಗರದಲ್ಲಿ ಯಾರಾದರೂ ಈ ರೀತಿ ಓಡಾಡಿದರೆ ಅಂಥವರ ವಿರುದ್ಧ ರೌಡಿಶೀಟರ್ ಪ್ರಕರಣ ದಾಖಲಿಸಲಾಗುವುದು.- ಭೂಷಣ್ ಗುಲಾಬ್ ರಾವ್ ಬೊರಸೆ ,
ನಗರ ಪೊಲೀಸ್ ಆಯುಕ್ತ