ಸಾರಾಂಶ
ಕಾರವಾರ: ಮಳೆಗಾಲ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗಿದ್ದು, ಗುಡ್ಡ ಕುಸಿತ ಲಕ್ಷಣಗಳ ಪರಿಶೀಲನೆ ಕುರಿತಂತೆ ತರಬೇತಿ ಪಡೆದ ಸ್ಪಾಟರ್ಸ್ಗಳು ತಮ್ಮ ವ್ಯಾಪ್ತಿಯಲ್ಲಿ ಗುಡ್ಡ ಕುಸಿತ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿ ಗುಡ್ಡ ಕುಸಿತದಿಂದಾಗುವ ಅನಾಹುತಗಳ ತಡೆ ಕುರಿತ ತರಬೇತಿಗೆ ನಿಯೋಜಿಸಿರುವ ಸ್ಪಾಟರ್ಸ್ಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿರೂರಿನಂತಹ ಅನಾಹುತಗಳು ಸಂಭವಿಸುವುದನ್ನು ತಪ್ಪಿಸಲು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸ್ಪಾಟರ್ಸ್ಗಳ ಕಾರ್ಯ ಅತ್ಯಂತ ಪ್ರಮುಖವಾಗಿದ್ದು, ಸೂಕ್ತ ಸಮಯದಲ್ಲಿ ಮುನ್ನೆಚ್ಚರಿಕೆಯ ಮಾಹಿತಿ ದೊರೆತಲ್ಲಿ ಜೀವಹಾನಿಯಾಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದರು.ಗುಡ್ಡ ಕುಸಿತ ಲಕ್ಷಣಗಳ ಬಗ್ಗೆ ಕೂಡಲೇ ಮಾಹಿತಿ ನೀಡಿದಲ್ಲಿ, ಆ ಪ್ರದೇಶದಲ್ಲಿ ವಾಹನ ಸಂಚಾರವನ್ನು ಬದಲಿ ಮಾರ್ಗಗಳ ಮೂಲಕ ಚಲಿಸಲು ಮತ್ತು ಆ ಪ್ರದೇಶದ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಾಧ್ಯವಾಗಲಿದೆ. ಇದರಿಂದಾಗಿ ಜೀವಹಾನಿ ತಪ್ಪಿಸಲು ಸಾಧ್ಯವಾಗಲಿದೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಗುಡ್ಡ ಕುಸಿತದಿಂದ ಯಾವುದೇ ಅನಾಹುತಗಳಾಗದಂತೆ ಎಚ್ಚರ ವಹಿಸುವ ಮಹತ್ವದ ಜವಾಬ್ದಾರಿ ಸ್ಪಾಟರ್ಸ್ಗಳ ಮೇಲಿದೆ ಎಂದರು.
ಹೈದರಾಬಾದ್ ಜಿಎಸ್ಐನ ಡೆಪ್ಯುಟಿ ಡೈರೆಕ್ಟರ್ ಜನರಲ್ ಮತ್ತು ಪ್ರಾದೇಶಿಕ ಮಿಷನ್ ಮುಖ್ಯಸ್ಥ ಕೆ.ವಿ. ಮಾರುತಿ, ಭೂಕುಸಿತ ಸ್ಥಳಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಮುನ್ನೆಚ್ಚರಿಕೆ ನೀಡುವ ಕಾರ್ಯವನ್ನು ನೋಡಲ್ ಏಜೆನ್ಸಿಯಾಗಿ ಜಿಐಎಸ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ದೇಶಾದ್ಯಂತ ಭೂಕುಸಿತ ಪ್ರದೇಶಗಳನ್ನು ವೀಕ್ಷಿಸಿ ಅವುಗಳನ್ನು ತೀವ್ರ, ಮಧ್ಯಮ ಮತ್ತು ಸಾಮಾನ್ಯ ಭೂಕುಸಿತ ಪ್ರದೇಶಗಳ ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಮತ್ತು ನಕ್ಷೆಯನ್ನು ನೀಡಲಾಗಿದೆ ಎಂದರು.
ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ವೈಜ್ಞಾನಿಕ ರೀತಿಯಲ್ಲಿ ಯೋಜನೆ ರೂಪಿಸಬೇಕು. ಅಭಿವೃದ್ಧಿ ಯೋಜನೆಗಳಿಗಾಗಿ ಗುಡ್ಡಗಳನ್ನು ಕಡಿಯುವುದು, ಸಾಂಪ್ರದಾಯಿಕ ನೀರಿನ ಹರಿವಿಗೆ ತಡೆವೊಡ್ಡಿ ಕಟ್ಟಡಗಳ ನಿರ್ಮಾಣ, ಮರಗಳ ನಾಶ, ಅಸಮರ್ಪಕ ಡ್ರೈನೇಜ್ ಯೋಜನೆಗಳು, ಮುಂತಾದ ಕಾರಣಗಳಿಂದ ಭೂಕುಸಿತ ಸಂಭವಿಸಲಿದೆ.
ಭೂ ಕುಸಿತಗಳು ತಕ್ಷಣದಲ್ಲಿ ಸಂಭವಿಸುವುದಿಲ್ಲ. ಕುಸಿತ ಸಂಭವಿಸುವ ಪೂರ್ವದಲ್ಲಿ ಆ ಭಾಗದಲ್ಲಿ ವಿವಿಧ ಬದಲಾವಣೆಗಳು ನಡೆಯುತ್ತವೆ. ಈ ಬದಲಾವಣೆಗಳನ್ನು ಗಮನಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರಿಂದ ಅನಾಹುತಗಳಾಗುವುದನ್ನು ತಪ್ಪಿಸಬಹುದು. ಈ ಕಾರ್ಯದಲ್ಲಿ ಸ್ಪಾಟರ್ಸ್ಗಳ ಜವಾಬ್ದಾರಿ ಅತ್ಯಂತ ಪ್ರಮುಖವಾಗಿದೆ ಎಂದರು.ಜಿಎಸ್ಐನ ನಿರ್ದೇಶಕ ಡಾ. ಆರ್. ಸಜೀವ್ ಅವರು, ಜಿಲ್ಲೆಯಲ್ಲಿ ಭೂಕುಸಿತದಿಂದಾಗಬಹುದಾದ ಅನಾಹುತಗಳು, ಅವುಗಳನ್ನು ಎದುರಿಸಬೇಕಾದ ಸವಾಲುಗಳು ಮತ್ತು ಅವುಗಳನ್ನು ತಪ್ಪಿಸಲು ಸಮುದಾಯದ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಹಾಗೂ ತರಬೇತಿಗೆ ನಿಯೋಜನೆಗೊಂಡಿದ್ದ ಅರಣ್ಯ, ಕಂದಾಯ, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.