ಕನ್ನಡಪ್ರಭ ವಾರ್ತೆ ವಿಜಯಪುರ ಬಿಜೆಪಿ ಅಧಿಕಾರದಲ್ಲಿದ್ದಾಗ ಟಣ್ ಟಣ್ ಎಂದು ಜಿಗಿದಾಡಿ ಹೋರಾಟ ಮಾಡುತ್ತಿದ್ದ ಕರವೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಸುಮ್ಮನಾಗಿದೆ. ಹಾಗಾಗಿ ಕರವೇ ಇದು ಕರ್ನಾಟಕ ರಕ್ಷಣಾ ವೇದಿಕೆಯೋ ಅಥವಾ ಕಾಂಗ್ರೆಸ್ ರಕ್ಷಣಾ ವೇದಿಕೆಯೋ ಎಂದು ಕೇವಲವಾಗಿ ಮಾತನಾಡಿದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ನಡೆ ಸರಿಯಲ್ಲ. ಇನ್ನೊಮ್ಮೆ ಹೀಗೆ ಮಾತನಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕರವೇ(ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಬಿಜೆಪಿ ಅಧಿಕಾರದಲ್ಲಿದ್ದಾಗ ಟಣ್ ಟಣ್ ಎಂದು ಜಿಗಿದಾಡಿ ಹೋರಾಟ ಮಾಡುತ್ತಿದ್ದ ಕರವೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಸುಮ್ಮನಾಗಿದೆ. ಹಾಗಾಗಿ ಕರವೇ ಇದು ಕರ್ನಾಟಕ ರಕ್ಷಣಾ ವೇದಿಕೆಯೋ ಅಥವಾ ಕಾಂಗ್ರೆಸ್ ರಕ್ಷಣಾ ವೇದಿಕೆಯೋ ಎಂದು ಕೇವಲವಾಗಿ ಮಾತನಾಡಿದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ನಡೆ ಸರಿಯಲ್ಲ. ಇನ್ನೊಮ್ಮೆ ಹೀಗೆ ಮಾತನಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕರವೇ(ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ ಎಚ್ಚರಿಕೆ ನೀಡಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರವೇ ಬಗ್ಗೆ ಶಾಸಕ ಯತ್ನಾಳರು ಲಘುವಾಗಿ ಟೀಕಿಸುವುದು ಸರಿಯಲ್ಲ. ಕಾವೇರಿ ಹೋರಾಟದ ವಿಷಯಕ್ಕೆ ಕರವೇ ನಾರಾಯಣಗೌಡರು ನೈತಿಕ ಬೆಂಬಲ ನೀಡಿದ್ದಾರೆ. ಈಗಾಗಲೇ ನಿಯೋಗ ಹೋಗಿ ಸಿಎಂರನ್ನು ಭೇಟಿಯಾಗಿದ್ದಾರೆ, ಫ್ರೀಡಂ ಪಾರ್ಕ್ನಲ್ಲಿ ಹೋರಾಟ ಮಾಡಿದ್ದಾರೆ. ಇಷ್ಟೆಲ್ಲ ಹೋರಾಟ ಮಾಡಿದ್ದು ಯತ್ನಾಳನಿಗೆ ಕಾಣಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಕನ್ನಡ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಅಕ್ಷರ ಇರಬೇಕೆಂದು ಎಂದು ಹೋರಾಟ ಮಾಡಿದ್ಧೆವು. ಆಗ ನಾರಾಯಣಗೌಡರು ಹಾಗೂ ನಮ್ಮ ಮೇಲೂ ಕೇಸ್ ದಾಖಲಿಸಿ ನಮ್ಮನ್ನು ಬಂಧಿಸಿದ್ದರು. ನಾವು ಕಾಂಗ್ರೆಸ್ ರಕ್ಷಣಾ ವೇದಿಕೆಯಾಗಿದ್ದರೆ ಕಾಂಗ್ರೆಸ್ನವರು ನಮ್ಮನ್ನು ಯಾಕೆ ಬಂಧಿಸುತ್ತಿದ್ದರು ಎಂದು ಪ್ರಶ್ನಿಸಿದರು. ಇನ್ನು ನಾಡು, ನುಡಿ, ನೆಲ, ಜಲದ ಬಗ್ಗೆ ಧಕ್ಕೆಯಾದರೆ ಮೊಟ್ಟ ಮೊದಲು ಹೋರಾಟಕ್ಕೆ ನಿಲ್ಲುವುದೇ ಕರವೇ ನಾರಾಯಣಗೌಡರ ಬಣ ಎಂದರು.ಯತ್ನಾಳ ನಿತ್ಯ ಬೆಳಗಾದರೆ ಬರೀ ದೊಡ್ಡವರಿಗೆ ಬೈಯ್ಯೋದು, ಯಾರು ಪ್ರಚಲಿತದಲ್ಲಿರುತ್ತಾರೋ, ಟ್ರೆಂಡಿಂಗ್ನಲ್ಲಿರುವ ವ್ಯಕ್ತಿಗಳ ಕುರಿತು ಮಾತನಾಡಿ ಹೆಸರು ಮಾಡಿಕೊಳ್ಳುತ್ತಾರೆ. ಕನ್ನಡ ನಾಡಿನ ಬಗ್ಗೆ ಮಾತನಾಡದ ಇವನಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಇನ್ನುಮುಂದೆ ಯಾವುದೇ ಸಂಘಟನೆ, ವ್ಯಕ್ತಿಗಳ ಬಗ್ಗೆ ಕೇವಲವಾಗಿ ಮಾತನಾಡಿದರೆ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮಹಾದೇವ ರಾವಜಿ, ಬಸವರಾಜ ಕಾತ್ರಾಳ, ಫಯಾಜ್ ಕಲಾದಗಿ, ಡಾ.ದಯಾನಂದ ಸಾವಳಗಿ, ಪ್ರಧಾನ ಕಾರ್ಯದರ್ಶಿ ಸುರೇಶ ಬಿಜಾಪುರ ಇದ್ದರು.