ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿಂದೆ ಮಾಡಿದಂತೆ ಹೆಲಿಕಾಪ್ಟರ್‌ನಿಂದ ಆದಂತೆ, ಏನೇನೋ ಮಾಡಿದಂತೆ ಈಗ ಮಾಡಬೇಡಿ. ಅಭ್ಯರ್ಥಿ ಅನೌನ್ಸ್ ಮಾಡುವುದಿದ್ದರೆ ಈಗಲೇ ಮಾಡಿಬಿಡಿ. ಹೇಳುವುದೊಂದು, ಮಾಡೋದೊಂದು ರೀತಿ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕೆಪಿಸಿಸಿ ಚುನಾವಣಾ ಉಸ್ತುವಾರಿ ಸಮಿತಿಗೆ ಮನವಿ ಮಾಡಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಆಕಾಂಕ್ಷಿಗಳು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಅವರು ಮಾತನಾಡಿದರು.

ಪಾಪ ಸೈಯದ್ ಸೈಫುಲ್ಲಾ ಸಾಹೇಬರದ್ದಾಗಲೀ, ನಮ್ಮದಾಗಲೀ ಏನೂ ತಪ್ಪಿರಲಿಲ್ಲ. ಆದರೆ, ಆಡಿಕೊಳ್ಳುವವರಿಗೆ ಅದು ಆಸ್ಪದ ಕೊಟ್ಟಂತಾಯಿತು. ಸೈಫುಲ್ಲಾ ಸಾಬ್‌ರವರು ನನ್ನ ಬಳಿ ಬಂದರು. ನಾವಿಬ್ಬರೂ ಜೊತೆಗೆ ಒಳಗೆ ಹೋದೆವು. ಸೈಫುಲ್ಲಾರಿಗೆ ಏನನ್ನಿಸಿತೋ ಏನೋ, ಮಲ್ಲು ನೀನೇ ನಿಂತ್ಕೋ ಅಂತಾ ಹೇಳಿ, ತಮ್ಮ ಹೆಸರನ್ನು ಅಳಿಸಿದ್ದಲ್ಲದೇ, ನನಗೆ ನಿಲ್ಲುವಂತೆ ಹೇಳಿದ್ದರು. ಅದನ್ನು ನಾನು ಅಳಿಸಿದ್ದೆ ಅಂತಾ ಕೆಲವರು ಹಬ್ಬಿಸಿದರು. ಆನಂತರ ಸೈಫುಲ್ಲಾ ಸಾಬ್‌ರವರು ನಮ್ಮನೆಗೆ ಬಂದು ಮಾತನಾಡಿದ್ದರು ಎಂದು ಎಸ್‌ಎಸ್‌ಎಂ ಮೆಲಕು ಹಾಕಿದರು.

ಕಾಂಗ್ರೆಸ್ ಪಕ್ಷದಲ್ಲಿ ಸುಭಾಶ್ಚಂದ್ರ ಯಾವಾಗ ಕೆಲಸ ಮಾಡಿದ್ದಾರೆ? ಯಾರಿಗಾದರೂ ಟೀ ಕುಡಿಸಿದ್ದರಾ? ನೀರು ಕುಡಿಸಿದ್ದಾರಾ? ಈ ಹಿಂದೆ ಹರಪನಹಳ್ಳಿ ಕ್ಷೇತ್ರಕ್ಕೆ ಟಿಕೆಟ್ ಕೇಳಿದ್ದರು. ಸುಭಾಷ್‌ ಹೇಳಿಕೆಯನ್ನು ನಿನ್ನೆ ಎಲ್ಲೋ ಗಮನಿಸಿದೆ. ಇಂತಹವರು ಪಕ್ಷಕ್ಕೆ ಯಾವಾಗ ಕೆಲಸ ಮಾಡಿದ್ದಾರೆ? ನಮ್ಮಲ್ಲಿ ಗೊಂದಲಗಳೇನೂ ಅಷ್ಟಾಗಿ ಇಲ್ಲ. ಸಣ್ಣಪುಟ್ಟದು ಇವೆ. ಆದರೂ, ಒಳ್ಳೆಯ, ಸೂಕ್ತ ಅಭ್ಯರ್ಥಿ, ಗೆಲ್ಲುವ ಅಭ್ಯರ್ಥಿಗೆ ದಕ್ಷಿಣ ಕ್ಷೇತ್ರಕ್ಕೆ ಆಯ್ಕೆ ಮಾಡಿ ಎಂದು ತಿಳಿಸಿದರು.


ಚುನಾವಣೆ ವೇಳೆಗಷ್ಟೇ ಹೊರಗೆ ಬರುವವರನ್ನು ಪಕ್ಷದ ನಾಯಕರು, ಸಮಿತಿ ಮುಖಂಡರು ಸಹ ಪರಿಗಣಿಸಬಾರದು. ಎಲ್ಲ ಚುನಾವಣೆಗಳಲ್ಲಿ ಹಾಗೂ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ ಕಟ್ಟಕಡೆಯ ವ್ಯಕ್ತಿ, ಒಳ್ಳೆಯ ಕಾರ್ಯಕರ್ತನಾಗಿದ್ದರೆ ಅಂತಹವರಿಗೂ ಅವಕಾಶ ಕೊಡಿ ಎನ್ನುತ್ತೇನೆ. ಇವತ್ತು ಬಂದರು, ದಿಲ್ಲಿಗೆ ಹೋದರು, ಬೆಂಗಳೂರಿಗೆ ಹೋದರು, ಅರ್ಜಿ ಕೊಟ್ಟರು ಅದೆಲ್ಲಾ ಬೇಡ. ಉಪ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿ, ಒಳ್ಳೆಯ ಕೆಲಸ ಮಾಡಿಕೊಂಡು ಹೋಗುವ ಅಭ್ಯರ್ಥಿ ನಮಗೆ ಬೇಕಷ್ಟೇ. ನಿಷ್ಟಾವಂತ ಕಾರ್ಯಕರ್ತರಿಗೆ ಅವಕಾಶ ಕೊಡಿ. ಎಲ್ಲ ಹಿರಿಯರಿದ್ದಾರೆ. ಒಗ್ಗಟ್ಟಿನಿಂದ ಹೋಗಬೇಕು ಎಂದರು.

ಯಾವುದೇ ಸಮಾಜದವರಿದ್ದರೂ ಗೊಂದಲ ಬೇಡ. ಕಾಂಗ್ರೆಸ್ಸೇ ನಮಗೆ ಜಾತಿ, ಕಾಂಗ್ರೆಸ್ಸೇ ನಮಗೆ ಸಮಾಜ. ಹಾಗಾಗಿಯೇ ನಾವೆಲ್ಲರೂ ಒಂದೇ. ಟಿಕೆಟ್‌ ಕುರಿತು ಎಲ್ಲರೂ ಕುಳಿತು, ಚರ್ಚಿಸೋಣ. ಅದು ಒಳ್ಳೆಯ ಕೆಲಸ ಎಂದರು.

- - -

(ಟಾಪ್‌ ಕೋಟ್‌) ಬಿಜೆಪಿಯವರ ಹಾ‍ವಳಿ ಹೆಚ್ಚಾಗಿದೆ. ನಾವೆಲ್ಲಾ ಒಗ್ಗಟ್ಟಾಗಿದ್ದರೆ ಅದನ್ನೆಲ್ಲಾ ಎದುರಿಸಬಹುದು. ಶಿವಮೊಗ್ಗ, ಭದ್ರಾವತಿಯಲ್ಲಿ ಮಾಡಿದ್ದಾರಲ್ಲ, ಹಾಗೆ ಇಲ್ಲಿಯೂ ಹಿಂದೂ- ಮುಸ್ಲಿಂ ಗಲಾಟೆ ಮಾಡಿಸುತ್ತಾರೆ. ಎಲ್ಲರನ್ನೂ ಒಗ್ಗಟ್ಟಿನಿಂದ ಕೊಂಡೊಯ್ಯುವವರಾಗಿ ಕೆಲಸ ಮಾಡೋಣ. ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಎಚ್.ಆಂಜನೇಯ ನಾವೆಲ್ಲರೂ ಲೋಕಸಭೆ ಚುನಾವಣೆಗೆ ಶ್ರಮಿಸಿದರು. ಆಗ ವಿರೋಧ ಮಾಡಿದವರೂ ಇದ್ದಾರೆ. ಇನ್ ಡೈರೆಕ್ಟ್ ಆಗಿ ಎದುರಾಳಿಗಳಿಗೆ ಸಹಾಯ ಮಾಡಿದವರೂ ಇದ್ದಾರೆ. ಅಂತಹವರಿಗೆ ಕೈಬಿಡಿ.

- ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ.

- - -

-17ಕೆಡಿವಿಜಿ15, 16:

ದಾವಣಗೆರೆಯಲ್ಲಿ ಮಂಗಳವಾರ ಕೆಪಿಸಿಸಿ ಚುನಾವಣಾ ಸಮಿತಿ ಮುಖಂಡರ ಸಭೆಯಲ್ಲಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಮಾತನಾಡಿದರು.