ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ವಿದ್ಯಾವಂತರಲ್ಲಿಯೇ ಹೆಚ್ಚು ಮೌಢ್ಯ ಆಚರಣೆಗಳು ಕಂಡು ಬರುತ್ತಿವೆ ಎಂದು ಕಸಾಪ ಮಾಜಿ ಅಧ್ಯಕ್ಷ ವೈ.ನರೇಶ್ ಬಾಬು ಹೇಳಿದರು. ಅವರು ನಗರದಲ್ಲಿ ಮಾತಂಗ ನೌಕರರ ಬಳಗ, ಮಾನವ ಬಂಧುತ್ವ ವೇದಿಕೆ ವತಿಯಿಂದ ಚಂದ್ರಗ್ರಹಣ ಸಂದರ್ಭದಲ್ಲಿ ತಿನಿಸುಗಳನ್ನು ಹಂಚುವ ಮೂಲಕ ವೈಚಾರಿಕ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಕೃತಿಯ ಒಂದು ಭಾಗವಾಗಿ ನಡೆಯುವ ಚಂದ್ರಗ್ರಹಣದ ಹೆಸರಿನಲ್ಲಿ ಕೆಲವರು ಮೌಢ್ಯವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇದು ಶೋಚನೀಯ ಸಂಗತಿ ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ವೈಚಾರಿಕತೆ ಬಿತ್ತುವ ಕೆಲಸ ಮಾಡಬೇಕು. ಅಮಾವಾಸ್ಯೆ, ಪೌರ್ಣಮಿ ಇದು ಪ್ರಕೃತಿ ಸಹಕ ಕ್ರಿಯೆ ಯಾರೋ ಹೇಳಿದರು ಎಂದು ಅದರ ಹಿನ್ನೆಲೆ ಇಲ್ಲದೆ ನಂಬಬಾರದು. ವೈಜ್ಞಾನಿಕವಾಗಿ ಚಿಂತನೆ ಮಾಡಬೇಕು ಎಂದರು. ಮಾವನ ಬಂಧುತ್ವ ವೇದಿಕೆಯ ಸಂಚಾಲಕ ರಂಗರಾಜು ಮಾತನಾಡಿ ಪ್ರಕೃತಿಯ ಒಂದು ಭಾಗವಾಗಿ ಆಗುವ ಚಂದ್ರಗ್ರಹಣವನ್ನು ಜನಸಾಮಾನ್ಯರಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ಮಾಧ್ಯಮದವರು ಪ್ರಸಾರ ಮಾಡುತ್ತಿದ್ದಾರೆ. ವೈಜ್ಞಾನಿಕವಾಗಿ ಮಾಧ್ಯಮದವರು ಎಚ್ಚರಿಸಬೇಕು. ಆದರೆ ಅದರ ವಿರುದ್ಧವಾಗಿ ಕೆಲಸ ಮಾಧ್ಯಮಗಳು ಮಾಡುತ್ತಿವೆ. ಚಂದ್ರಗ್ರಹಣದಿಂದ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಇದರ ಬಗ್ಗೆ ನಾವೆಲ್ಲರೂ ಅರಿವು ಮೂಡಿಸಬೇಕು. ಟಿವಿ ಮಾಧ್ಯಮದಲ್ಲಿ ಗರ್ಭಿಣಿ ಸ್ತ್ರೀಯರು ಹೊರಗೆ ಬರಬಾರದು ಎಂದು ಮೌಢ್ಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಗರ್ಭಿಣಿಯರಿಗೆ ಹೆರಿಗೆ ಸಂದರ್ಭ ಇದ್ದಾಗ ಅವರು ಏನು ಮಾಡಬೇಕು ಎಂದು ಪ್ರಶ್ನಿಸಿದ ಅವರು. ಜನರು ಅಂದಕಾರದಿಂದ ಹೊರಗೆ ಬರಬೇಕು. ವೈಜ್ಞಾನಿಕವಾಗಿ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು. ಮುಖ್ಯ ಶಿಕ್ಷಕ ರಾಮರಾಮ್ ಮಾತನಾಡಿ ವಿಜ್ಞಾನ ತಂತ್ರಜ್ಞಾನ ಎಷ್ಟೇ ಬೆಳೆದರು, ವಿದ್ಯಾವಂತ ಮೂರ್ಖರು, ಗ್ರಹಣವೆಂದು ಮನೆ ಸೇರಿ, ಊಟ ಬಿಟ್ಟು , ಮಂತ್ರ ತಂತ್ರಗಳ ಮೋರೆ ಹೋಗುವುದನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಬಹುದು, ಇದಕ್ಕೆ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳ ದೆಸೆಯಿಂದ ಮಾಧ್ಯಮಗಳ ಮೂಲಕ ಭಯ ಹುಟ್ಟಿಸುವ ಮೌಡ್ಯವನ್ನು ಬಿತ್ತರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ, ಇದಕ್ಕೆ ಅಪವಾದವೆಂಬಂತೆ, ಮಾತಂಗ ನೌಕರ ಬಳಗ ಮತ್ತು ಮಾನವ ಬಂಧುತ್ವ ವೇದಿಕೆ ವತಿಯಿಂದ ಮೌಡ್ಯತೆಯನ್ನು ವಿರೋಧಿಸಿ, ಸಾಂಕೇತಿಕವಾಗಿ ತಿನಿಸುಗಳನ್ನ ಹಂಚುವ ಕಾರ್ಯ ಮಾಡುತ್ತಿದ್ದೇವೆ ಎಂದರು.ಉಪನ್ಯಾಸಕ ಡಾ. ಶಂಕರಪ್ಪ ಎನ್. ಎಸ್. , ಮುಖ್ಯ ಶಿಕ್ಷಕ ರಾಜಣ್ಣ, ಮಾಜಿ ತಾ.ಪಂ. ಸದಸ್ಯ ಪಿಬಿ ನರಸಿಂಹಯ್ಯ, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಸಕ್ಕರ ನಾಗರಾಜು, ನವೋದಯ ಯುವ ವೇದಿಕೆ ಅಧ್ಯಕ್ಷ ಜಯರಾಮಕೃಷ್ಣ, ಮುಖಂಡರಾದ ಶಾಸಮರು ಮೂರ್ತಿ, ನಾಗರಾಜು ಸೇರಿದಂತೆ ಹಲವರು ಹಾಜರಿದ್ದರು.