ಶಿರಸಿ:
ಅಕ್ರಮ ಮರಳು ಸಾಗಿಸುತ್ತಿದ್ದ ವೇಳೆ ಶಿರಸಿ ಡಿಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, 8 ಲಾರಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಹೊನ್ನಾವರ, ಕುಮಟಾ ಭಾಗದ ನದಿಯಿಂದ ಅಕ್ರಮವಾಗಿ ಮರಳ ತೆಗೆದು ಲಾರಿಗಳ ಮೂಲಕ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಶಿರಸಿ ತಾಲೂಕಿನ ಅಜ್ಜೀಬಳ ಬಳಿ ಡಿಎಸ್ಪಿ ಗೀತಾ ಪಾಟೀಲ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, 8 ಲಾರಿ ಹಾಗೂ ಚಾಲಕರನ್ನು ವಶಕ್ಕೆ ಪಡೆದಿದ್ದಾರೆ.ಗಾಂಜಾ ಸೇವನೆ ದೃಢ: ನಾಲ್ವರ ಮೇಲೆ ಪ್ರಕರಣ
ಶಿರಸಿ ನಗರದ ಕೆಎಚ್ಬಿ ಕಾಲನಿಯ ಬಳಿ ಗಾಂಜಾ ಸೇವಿಸಿದ್ದ ನಾಲ್ವರು ಯುವಕರ ವಿರುದ್ಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಕಸ್ತೂರಬಾನಗರದ ಮಹ್ಮದ್ ಬಾಷಾಸಾಬ್ ಕೋಡಬಾಳ್ (24), ಇರ್ಫಾನ್ ಫಕ್ರುದ್ದೀನ್ ಮುಲ್ಲಾ (22), ಅಸೀಫ್ ಖ್ವಾಜಾ ಶೇಖ್ (21), ಅಸೀಫ್ ಮಹ್ಮದ್ ರಫೀಕ್ ಚೌದರಿ (24) ವಿರುದ್ಧ ಪ್ರಕರಣ ದಾಖಲಾಗಿದೆ. ಇವರೆಲ್ಲರೂ ಕೆಎಚ್ಬಿ ಕಾಲನಿಯಲ್ಲಿ ಶಿವಾನಿ ಹೊಟೇಲ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿರುವ ಅನುಮಾನದ ಮೇಲೆ ಶಿರಸಿ ಹೊಸ ಮಾರುಕಟ್ಟೆ ಪಿಎಸ್ಐ ಬಸವರಾಜ ಕನಶೆಟ್ಟಿ ನೇತೃತ್ವದಲ್ಲಿ ಸಿಬ್ಬಂದಿ ವಶಕ್ಕೆ ಪಡೆದು, ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ವೈದ್ಯರು ಗಾಂಜಾ ಸೇವಿಸಿರುವುದನ್ನು ದೃಢಪಡಿಸಿದ್ದಾರೆ. ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ
ಮದುವೆಯಾಗುತ್ತೇನೆ ಎಂದು ನಂಬಿಸಿ ಯುವತಿಗೆ ಮೋಸ ಮಾಡಿ, ಲೈಂಗಿಕ ದೌರ್ಜನ್ಯ ಎಸಗಿದ ಯುವಕನನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.ಶಿರಸಿ ತಾಲೂಕಿನ ಬರೂರು ಸಮೀಪದ ಅರಸಿಕೇರಿಯ ಕಿರಣ ಶಾಂತಾರಾಮ ಮೊಗೇರ (25) ಬಂಧಿತ.
ಈತ ಕಾರವಾರ ಮೂಲದ ಯುವತಿಯನ್ನು 2023ರಲ್ಲಿ ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡು, ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ, ತನ್ನ ಮನೆಯಾದ ಅರಸಿಕೇರಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ, ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಶಿರಸಿ ಗ್ರಾಮೀಣ ಠಾಣೆಯ ತನಿಖಾ ಪಿಎಸ್ಐ ಅಶೋಕ ರಾಠೋಡ ಯುವಕನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.