ರಾಜ್ಯ ಸರ್ಕಾರವು ಕಾರ್ಕಳ ತಾಲೂಕಿನ ಕೆಡಿಪಿ ಸಮಿತಿಗೆ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಿ ಹಲವು ತಿಂಗಳುಗಳೇ ಕಳೆದಿದ್ದರೂ, ಸಮಿತಿಯ ಅಧ್ಯಕ್ಷರಾದ ಸ್ಥಳೀಯ ಶಾಸಕರು ಈವರೆಗೆ ಸಭೆಯನ್ನು ಕರೆದಿರುವುದಿಲ್ಲ. ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ತಕ್ಷಣ ಕೆಡಿಪಿ ಸಭೆಯನ್ನು ಕರೆಯಬೇಕು ಎಂದು ನಾಮನಿರ್ದೇಶಿತ ಸದಸ್ಯರು ಶಾಸಕ ವಿ. ಸುನೀಲ್ ಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಕಾರ್ಕಳ: ರಾಜ್ಯ ಸರ್ಕಾರವು ಕಾರ್ಕಳ ತಾಲೂಕಿನ ಕೆಡಿಪಿ ಸಮಿತಿಗೆ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಿ ಹಲವು ತಿಂಗಳುಗಳೇ ಕಳೆದಿದ್ದರೂ, ಸಮಿತಿಯ ಅಧ್ಯಕ್ಷರಾದ ಸ್ಥಳೀಯ ಶಾಸಕರು ಈವರೆಗೆ ಸಭೆಯನ್ನು ಕರೆದಿರುವುದಿಲ್ಲ. ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ತಕ್ಷಣ ಕೆಡಿಪಿ ಸಭೆಯನ್ನು ಕರೆಯಬೇಕು ಎಂದು ನಾಮನಿರ್ದೇಶಿತ ಸದಸ್ಯರು ಶಾಸಕ ವಿ. ಸುನೀಲ್ ಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೆಡಿಪಿ ನಾಮನಿರ್ದೇಶಿತ ಸದಸ್ಯ ಎಂ.ಪಿ. ಮೊಯಿದ್ದಿನಬ್ಬ ಅವರು, ‘ಸರ್ಕಾರವು ಸುಮಾರು 33ಕ್ಕೂ ಹೆಚ್ಚು ಇಲಾಖೆಗಳ ಮೂಲಕ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲು ಕೆಡಿಪಿ ಸಭೆ ಅತ್ಯಗತ್ಯ. ಆದರೆ ಶಾಸಕರು ಸಭೆ ನಡೆಸದೇ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಶಾಸಕರು ಮಾತ್ರ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು, ನಾಮನಿರ್ದೇಶಿತ ಸದಸ್ಯರ ಅವಗಣನೆ ಮತ್ತು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಸರ್ಕಾರಿ ಯೋಜನೆಗಳು ತಮ್ಮ ಇಚ್ಛೆಯಂತೆ ಮಾತ್ರ ನಡೆಯಬೇಕೆಂಬ ಶಾಸಕರ ಧೋರಣೆ ಸರಿಯಲ್ಲ’ ಎಂದು ಕಿಡಿಕಾರಿದರು.ಕೆಡಿಪಿ ಸಭೆ ನಡೆಸದ ನಿರ್ಲಕ್ಷ್ಯಕ್ಕೆ ಸರ್ಕಾರಿ ಆಸ್ಪತ್ರೆಯ ವೈದ್ಯರ ನೇಮಕಾತಿಯೇ ಸಾಕ್ಷಿ ಎಂದು ಸದಸ್ಯರು ಆರೋಪಿಸಿದ್ದಾರೆ. ‘ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಡಿಪಿ ಸಭೆ ನಡೆದಿದ್ದರೆ ಈ ವಿಷಯವನ್ನು ಚರ್ಚಿಸಿ ಹಿಂದೆಯೇ ಪರಿಹಾರ ಕಂಡುಕೊಳ್ಳಬಹುದಿತ್ತು. ಆಶ್ಚರ್ಯದ ಸಂಗತಿಯೆಂದರೆ, ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಅವರು ಆಸ್ಪತ್ರೆಗೆ ಭೇಟಿ ನೀಡಿದ ಒಂದೇ ದಿನದಲ್ಲಿ ವೈದ್ಯರ ನೇಮಕವಾಗುತ್ತದೆ. ಕಳೆದ ಹಲವು ದಶಕಗಳಿಂದ ಅಧಿಕಾರದಲ್ಲಿರುವ ಶಾಸಕರಿಗೆ ಈ ಕೆಲಸ ಮಾಡಲು ಸಾಧ್ಯವಾಗದಿರುವುದು ಅವರ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಟೀಕಿಸಿದರು.ಕ್ಷೇತ್ರದ ಜನರ ಹಿತದೃಷ್ಟಿಯಿಂದ ಶಾಸಕರು ಕೂಡಲೇ ಕೆಡಿಪಿ ಸಭೆಯನ್ನು ಕರೆದು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯರಾದ ರುಕ್ಮಯ ಶೆಟ್ಟಿಗಾರ್ ಕುಕ್ಕುಂದೂರು, ಅಮಿತಾ ಶೆಟ್ಟಿ ಸಾಣೂರು ಉಪಸ್ಥಿತರಿದ್ದರು.