ಸಾರಾಂಶ
ಹಗರಿಬೊಮ್ಮನಹಳ್ಳಿ ಪಟ್ಟಣದ ದೇವದಾಸಿ ವಿಮೋಚನೆ ಸಂಘದ ಕಚೇರಿ ಆವರಣದಲ್ಲಿ ತಾಲೂಕು ದೇವದಾಸಿಯರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಹಗರಿಬೊಮ್ಮನಹಳ್ಳಿ: ಪಟ್ಟಣದ ದೇವದಾಸಿ ವಿಮೋಚನೆ ಸಂಘದ ಕಚೇರಿ ಆವರಣದಲ್ಲಿ ತಾಲೂಕು ದೇವದಾಸಿಯರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಮಾಳಮ್ಮ ಮಾತನಾಡಿ, ರಾಜ್ಯದಲ್ಲಿ ೩೫ ಸಾವಿರಕ್ಕೂ ಹೆಚ್ಚು ದೇವದಾಸಿಯರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಕೂಡಲೇ ಹೊಸದಾಗಿ ಸಮೀಕ್ಷೆ ನಡೆಸಿ ಕೈಬಿಡಲಾದವರನ್ನು ಪಟ್ಟಿಯಲ್ಲಿ ಸೇರಿಸಬೇಕು. ೨೦೦೭-೦೮ನೇ ಸಾಲಿನಲ್ಲಿ ಪಟ್ಟಿಯಿಂದ ಕೈಬಿಡಲಾದ ದೇವದಾಸಿಯರ ಸಮೀಕ್ಷೆ ನಡೆಸಬೇಕು. ಸರಕಾರ ದೇವದಾಸಿಯರ ಮಕ್ಕಳಿಗೆ ಶೇ. ೧೦ರಷ್ಟು ಮೀಸಲಾತಿ ನೀಡಿರುವುದು ಸ್ವಾಗತಾರ್ಹ. ಆದರೆ, ಬಹುತೇಕ ದೇವದಾಸಿಯರು ಪಟ್ಟಿಯಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮಕ್ಕಳು ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಸಿಐಟಿಯು ರಾಜ್ಯ ಉಪಾಧ್ಯಕ್ಷ ಎಸ್. ಜಗನ್ನಾಥ್ ಮಾತನಾಡಿ, ಸೌಲಭ್ಯ ವಂಚಿತ ದೇವದಾಸಿಯರ ಮಕ್ಕಳಿಗೆ ಶಿಕ್ಷಣ ಕ್ಷೇತ್ರದಲ್ಲಿನ ಮೀಸಲಾತಿ ಸೌಲಭ್ಯ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಜಿಲ್ಲೆಯಲ್ಲಿ ದೇವದಾಸಿಯರ ವಿಮೋಚನೆಗೆ ಜಿಲ್ಲಾಡಳಿತ ಪೂರಕ ಕ್ರಮ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಬಸವರಾಜ ಮಾತನಾಡಿದರು. ಸಂಘಟನೆಯ ತಾಲೂಕು ಅಧ್ಯಕ್ಷೆ ಮೈಲಮ್ಮ, ಪ್ರಧಾನ ಕಾರ್ಯದರ್ಶಿ ಚಾಂದಬಿ, ತಟ್ನೆಮ್ಮ, ಜನವಾದಿ ಮಹಿಳಾ ಸಂಘಟನೆಯ ಲಕ್ಷ್ಮೀದೇವಿ ಇದ್ದರು. ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ದೇವದಾಸಿಯರು ಸಮಾವೇಶದಲ್ಲಿ ಭಾಗವಹಿಸಿದ್ದರು.