ಸಾರಾಂಶ
- ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಂಸಾಗರ ಗೇಟಿನ ಬಳಿ ವ್ಯಕ್ತಿಯನ್ನುಸುಟ್ಟು ಹಾಕಿದ್ದ ದುರುಳರು
ಕನ್ನಡಪ್ರಭ ವಾರ್ತೆ,ಕಡೂರುಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಕಡೂರು ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಕಡೂರು ಪಟ್ಟಣದ ಪ್ಲೇಗಿನಮ್ಮ ದೇವಸ್ಥಾನದ ಹತ್ತಿರದ ನಿವಾಸಿ ಪ್ರದೀಪ್ ಆಚಾರ್,ಕಡೂರಿನ ಕೋಟೆಯ ಸಿದ್ದೇಶ್ ಹಾಗೂ ಕೂಲಿ ಕೆಲಸ ಮಾಡುವ ವಿಶ್ವಾಸ್ ಬಂಧಿತ ಆರೋಪಿಗಳು.ಕಳೆದ ಜೂನ್ 2ರಂದು ತಾಲೂಕಿನ ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಂಸಾಗರ ಗೇಟಿನ ಬಳಿ ವ್ಯಕ್ತಿಯನ್ನು ಕೊಲೆ ಮಾಡಿ ಸೌದೆ ಮತ್ತು ಪೆಟ್ರೋಲ್ ನಿಂದ ಸುಟ್ಟು ಹಾಕಿದ್ದರು. ಈ ಬಗ್ಗೆ ಕಡೂರು ಪೊಲೀಸರು ಈ ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು. ಜಿಲ್ಲಾ ಪೊಲೀಸ್ ಅಧಿಕ್ಷಕರ ಮಾರ್ಗದರ್ಶನದಲ್ಲಿ ಕೊಲೆಯಾದ ವ್ಯಕ್ತಿಯ ಪತ್ತೆಗೆ ವೃತ್ತ ನಿರೀಕ್ಷಕರು, ಕಡೂರು ಪೊಲೀಸ್ ಠಾಣ ಪಿಎಸ್ಐ ಮತ್ತು ಸಿಬ್ಬಂದಿ ಒಳಗೊಂಡಂತೆ ಎರಡು ತಂಡಗಳನ್ನು ರಚಿಸಲಾಗಿತ್ತು. ಪ್ರಕರಣದ ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕಡೂರು ಠಾಣೆಯಲ್ಲಿ ತಮ್ಮ ಗಂಡ ಸುಬ್ರಮಣ್ಯ ಮೇ 31 ರಿಂದ ಕಾಣೆಯಾಗಿ ದ್ದಾರೆಂದು ದೂರು ನೀಡಿದ್ದ ಪಟ್ಟಣದ ಕೋಟೆ ನಿವಾಸಿ ಮೀನಾಕ್ಷಮ್ಮ ಅವರ ಗಂಡ ಹಾಗೂ ಸುಟ್ಟು ಹಾಕಿದ್ದ ವ್ಯಕ್ತಿ ಒಬ್ಬನೆ ಎಂಬುದನ್ನು ಖಚಿತ ಪಡಿಸಿಕೊಂಡು ಅನುಮಾನ ವ್ಯಕ್ತವಾದ ಪ್ರದೀಪ ಆಚಾರ್, ಸಿದ್ದೇಶ್ ಮತ್ತು ವಿಶ್ವಾಸ್ ನನ್ನು ವಶಕ್ಕೆ ಪಡೆದ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೊದಲ ಆರೋಪಿ ಪ್ರದೀಪ್ ಮತ್ತು ಕಾಣೆಯಾಗಿದ್ದ ವ್ಯಕ್ತಿಯ ಹೆಂಡತಿ ನಡುವೆ ಅಕ್ರಮ ಸಂಬಂಧ ಇರುವುದು ತಿಳಿದ ಸುಬ್ರಹ್ಮಣ್ಯ ತನ್ನ ಹೆಂಡತಿಯ ಈ ಸಂಬಂದಕ್ಕೆ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ ಪ್ರದೀಪಾಚಾರ್ ಸಿದ್ದೇಶ್ ಮತ್ತು ವಿಶ್ವಾಸ್ ಸಹಾಯದಿಂದ ಸಂಚು ರೂಪಿಸಿ ಜೂ.5 ರಂದು ಕಂಸಾಗರ ಗೇಟ್ ಬಳಿ ಸಿದ್ದೇಶ್ ನ ಮಾರುತಿ ಒಮಿನಿ ಗಾಡಿಯಲ್ಲಿ ಸುಬ್ರಮಣ್ಯನನ್ನು ಕರೆದೊಯ್ದು ವಾಹನದಲ್ಲೇ ಹಗ್ಗದಿಂದ ಸುಬ್ರಮಣ್ಯನ ಕುತ್ತಿಗೆ ಬಿಗಿದು ಕೊಲೆ ಮಾಡಿ ಪೆಟ್ರೋಲ್ ಬಳಸಿ ಸುಟ್ಟು ಹಾಕಿದ್ದರು ಎನ್ನಲಾಗಿದೆ. ಕಾರ್ಯಾಚರಣೆ ತಂಡದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ರಫೀಕ್ ಮತ್ತು ಪಿಎಸ್ಐ ಗಳಾದ ಪವನ್ ಕುಮಾರ್, ಧನಂಜಯ, ಲೀಲಾವತಿ, ವೇದಮೂರ್ತಿ, ಸಿಬ್ಬಂದಿ ಮಧುಕುಮಾರ್, ಹರೀಶ್, ಸ್ವಾಮಿ, ಮೊಹಮ್ಮದ್ ರಿಯಾಜ್, ಧನ ಪಾಲನಾಯಕ, ಈಶ್ವರಪ್ಪ, ಬೀರೇಶ್, ಮಂಜುನಾಥ್, ಬೀರೂರು ಠಾಣೆ ರಾಜಪ್ಪ, ಹೇಮಂತ ಕುಮಾರ್, ವಸಂತ, ನಜೀರ್ , ನವೀನ್ , ತಾಂತ್ರಿಕ ವಿಭಾಗದ ಅಬ್ದುಲ್ ರಜಾಕ್, ನಯಾಜ್ ಅಂಜುಂ ಇದ್ದರು. ಪ್ರಕರಣ ಭೇದಿಸಿದ ಪೊಲೀಸರಿಗೆ ಜಿಲ್ಲಾ ಪೊಲೀಸ್ ಅಧೀಕ್ಷರು ಬಹುಮಾನ ಘೋಷಣೆ ಮಾಡಿದ್ದಾರೆ.8ಕೆಕೆಡಿಯು1. ಸುಬ್ರಮಣ್ಯ ಕೊಲೆ ಆರೋಪಿಗಳನ್ನು ಹಿಡಿದ ಪೊಲೀಸರ ತಂಡ.