ಸಾರಾಂಶ
ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ ಅನುಮಾನದ ಮೇಲೆ ಪತ್ನಿಗೆ ಬಲವಂತವಾಗಿ ವಿಷ ಸೇವಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಬಂಡೆಬೊಮ್ಮಸಂದ್ರ ಗ್ರಾಮದ ನಿವಾಸಿ ಗುಲ್ಶನ್ ಕುಮಾರ್ ಎಂಬಾತನಿಗೆ ಬೆಂಗಳೂರು ಗ್ರಾಮಾಂತರ 1ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರು. ದಂಡ ವಿಧಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ ಅನುಮಾನದ ಮೇಲೆ ಪತ್ನಿಗೆ ಬಲವಂತವಾಗಿ ವಿಷ ಸೇವಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಬಂಡೆಬೊಮ್ಮಸಂದ್ರ ಗ್ರಾಮದ ನಿವಾಸಿ ಗುಲ್ಶನ್ ಕುಮಾರ್ ಎಂಬಾತನಿಗೆ ಬೆಂಗಳೂರು ಗ್ರಾಮಾಂತರ 1ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರು. ದಂಡ ವಿಧಿಸಿದೆ.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿದ್ದಲಿಂಗಪ್ರಭು ಅವರು, ಅಪರಾಧಿ ಗುಲ್ಶನ್ ಕುಮಾರ್ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಜೀವಾವಧಿ ಶಿಕ್ಷೆಯಲ್ಲಿ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಬೇಕು. ದಂಡ ಮೊತ್ತ ಪಾವತಿಸದಿದ್ದರೆ ಮತ್ತೊಂದು ಒಂದು ವರ್ಷ ಸಾದ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ.
ಪ್ರಕರಣದ ತನಿಖೆ ನಡೆಸಿದ್ದ ಆವಲಹಳ್ಳಿ ಠಾಣಾ ಪೊಲೀಸರ ಪರ (ಪ್ರಾಸಿಕ್ಯೂಷನ್) ಸರ್ಕಾರಿ ಅಭಿಯೋಜಕ ಸೂರ್ಯನಾರಾಯಣ ವಾದ ಮಂಡಿಸಿದ್ದರು.ಪ್ರಕರಣದ ವಿವರ
2016ರಲ್ಲಿ ಹೊಸಕೋಟೆಯ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡೆ ಬೊಬ್ಬಸಂದ್ರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಗುಲ್ಶನ್ ಕುಮಾರ್ ಮತ್ತು ಪತ್ನಿ ರೂಬಿ ನೆಲೆಸಿದ್ದರು. ಓಂ ಪ್ರಕಾಶ್ ಎಂಬಾತನೊಂದಿಗೆ ರೂಬಿ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಗುಲ್ಶನ್ ಅನುಮಾನಗೊಂಡಿದ್ದ.2016ರ ಏ.19ರಂದು ಸಂಜೆ ಓಂ ಪ್ರಕಾಶ್ ಮನೆಗೆ ಹೋಗಿದ್ದ ಗುಲ್ಶನ್, ರೂಬಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದೀಯಾ ಎಂದು ಗಲಾಟೆ ಮಾಡಿದ್ದ. ರೂಬಿ ತನಗೆ ತಂಗಿ ಇದ್ದಂತೆ ಎಂದು ಓಂ ಪ್ರಕಾಶ್ ಹೇಳಿದರೂ ಕೇಳದೆ, ಆತನಿಗೆ ಹೊಡೆದಿದ್ದ. ನಂತರ ಮನೆಗೆ ಬಂದು ರೂಬಿಗೆ ಬಲವಂತವಾಗಿ ವಿಷ ಕುಡಿಸಿದ್ದ. ಇದರಿಂದ ರೂಬಿ ವಾಂತಿಮಾಡಿಕೊಂಡು ಪ್ರಜ್ಞೆ ತಪ್ಪಿಬಿದ್ದಿದ್ದರು. ನಂತರ ರೂಬಿಯ ಮುಖದ ಮೆಲೆ ತಲೆದಿಂಬು ಹಾಕಿ ಅದುಮಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಆವಲಹಳ್ಳಿ ಠಾಣಾ ಪೊಲೀಸರು ಗುಲ್ಶನ್ ವಿರುದ್ಧ ಕೊಲೆ ಅಪರಾಧದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.