ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಭೌಗೊಳಿಕವಾಗಿ ವಿಸ್ತಾರವುಳ್ಳ ನಮ್ಮ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ವಿಜೃಂಭಣೆಯಿಂದ ವಾಲ್ಮೀಕಿ ಜಯಂತಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜವನ್ನು ಮುನ್ನೆಡೆಗೆ ತೆಗೆದುಕೊಂಡು ಹೋಗಲು ಶಿಕ್ಷಣ ತುಂಬಾ ಮುಖ್ಯ ಆ ನಿಟ್ಟಿನಲ್ಲಿ ನೀವೆಲ್ಲರೂ ಶಿಕ್ಷಿತರಾಗಬೇಕು. ವಾಲ್ಮೀಕಿಯವರ ಹಿನ್ನೆಲೆ ತಿಳಿದು ಅವರ ಆದರ್ಶ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕು. ನಮ್ಮ ಮಕ್ಕಳಿಗೆ ಪೂರ್ವಿಕರ ಒಳ್ಳೆ ಗುಣಗಳನ್ನು ಧಾರೆ ಎರೆಯಬೇಕು. ಈ ಯುವ ಪೀಳಿಗೆ ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಆ ನಿಟ್ಟಿನಲ್ಲಿ ಈ ಸಮಾಜವನ್ನು ಮೇಲೆತ್ತಲು ನಾನು ಸಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಜೊತೆಗೆ ಈ ಜನ ವಾಸ ಮಾಡುವ ಹಳ್ಳಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗುತ್ತೇನೆ ಎಂದರು.
ಮುಖ್ಯಭಾಷಣ ಕಾರ ಮಹಾದೇವ ನಾಯಕ ಮಾತನಾಡಿ, ನಮ್ಮ ಸಮಾಜದ ಜನರ ಬದುಕು ಮಾತ್ರ ಆನಂದಮಯವಾಗಿಲ್ಲ. ಹಾಗಾಗಿ ನಮ್ಮ ಸಮಾಜ ಮೇಲೆ ಬರುವಂತಾಗಬೇಕು ವೇದ ಆಗಮ ಅಷ್ಟೇ ಅಲ್ಲದೇ ಭಾರತದ ಬಗ್ಗೆ ತಿಳಿಯಬೇಕು ಎಂಬ ಹಿನ್ನೆಲೆಯಲ್ಲಿ ರಾಮಾಯಣದ ಮೂಲಕ ಭಾರತದ ಚರಿತ್ರೆ ಕಟ್ಟಿದವರು ವಾಲ್ಮೀಕಿ. ಭಾರತಕ್ಕೆ ಬೇಕಾಗಿರುವುದು ಅಹಿಂಸೆ ಹಾಗಾಗಿ ಅಹಿಂಸೆಯನ್ನು ಸ್ವತಂತ್ರ್ಯ ಹೋರಾಟದಲ್ಲಿ ಇದನ್ನು ಅಳವಡಿಸಿಕೊಂಡರು ಎಂದರು.ಪ್ರೇಮಲತಾ ಮಾತನಾಡಿ, ಆದರ್ಶ ಇಲ್ಲವಾದಲ್ಲಿ ಮನುಷ್ಯ ಪ್ರಾಣಿಗಳಿಗಿಂತ ಕಡೆಯಾಗುತ್ತಾರೆ. ಆ ನಿಟ್ಟಿನಲ್ಲಿ ರಾಮಾಯಣ ಮಹಾಭಾರತಗಳು ನಮ್ಮ ಎರಡು ಕಣ್ಣುಗಳು ಇದ್ದ ಹಾಗೆ ಎಂದರು. ಇದೆ ಸಂದರ್ಭದಲ್ಲಿ ಕೊಪ್ಪಾಳಿ ಮಹಾದೇವ ನಾಯ್ಕ, ತಾಲೂಕು ನಾಯ್ಕ ಸಂಘದ ಅಧ್ಯಕ್ಷ ಪುಟ್ಟ ವೀರ ನಾಯಕ, ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಆನಂದ್, ತಹಸೀಲ್ದಾರ್ ಧನಂಜಯ, ವಿವಿಧ ಗ್ರಾಮಗಳ ಯಜಮಾನರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಗಮನಸೆಳೆದ ಮೆರವಣಿಗೆ: ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ವೇಳೆಯಲ್ಲಿ ವಾದ್ಯ ಮೇಳಗಳೊಂದಿಗೆ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಮೂಲಕ ತಮಟೆ ಸದ್ದಿಗೆ ಕುಣಿಯುವ ಮೂಲಕ ಎಲ್ಲರ ಗಮನ ಸೆಳೆಯಿತು.