ಮುಂಡರಗಿ: ಮೌಲ್ಯಭರಿತ ಶಿಕ್ಷಣದ ಅವಶ್ಯಕತೆ ಇಂದು ಬಹಳ ಇದೆ. ಮಠಮಾನ್ಯಗಳು ಮಕ್ಕಳಿಗೆ ಮತ್ತು ಜನಸಾಮಾನ್ಯರಿಗೆ ಸಂಸ್ಕಾರವನ್ನು ನೀಡುವುದರೊಂದಿಗೆ ಅವರ ಬದುಕಿನ ಪಥವನ್ನು ಮೌಲ್ಯದತ್ತ ಬದಲಿಸುತ್ತವೆ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.ಭಾನುವಾರ ಇಲ್ಲಿಯ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರ ಚರಿತಾಮೃತ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಈ ಯುಗದಲ್ಲಿ ಧರ್ಮದ ಪಾತ್ರ ಬಹುಮುಖ್ಯವಾಗಿದೆ. ಬೆರಳ ತುದಿಯಲ್ಲಿಯೇ ಜಗತ್ತನ್ನು ಕಾಣುವ ಈ ಕಾಲದಲ್ಲಿ ಎಲ್ಲವೂ ಧರ್ಮದಿಂದ ನಡೆದರೆ ಮಾತ್ರ ದೇಶದ ಅಭಿವೃದ್ಧಿ ಆಗುವುದರ ಜತೆಗೆ ಸಂಬಂಧಗಳು ಉಳಿಯಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ರತ್ನಾ ಮಹಾಲಿಂಗ ಯಾಳಗಿ ಮಾತನಾಡಿ, ಎಡೆಯೂರು ಸಿದ್ಧಲಿಂಗೇಶ್ವರರ ಚಿತ್ರ ಬಿಡಿಸಿದ್ದು ನಮ್ಮ ತಂದೆಯವರಾದ ಚೆಟ್ಟಿ ಅವರು ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತಿದೆ. ಇಂತಹ ಪ್ರವಚನಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂದರು.ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ, ಮುಂಡರಗಿ ಬಿಜೆಪಿ ಮಂಡಲದ ಅಧ್ಯಕ್ಷ ಡಾ. ಕುಮಾರಸ್ವಾಮಿ ಹಿರೇಮಠ, ಕಪ್ಪತಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ ಮುಂತಾದವರು ಮಾತನಾಡಿದರು. ಅಧ್ಯಕ್ಷತೆಯನ್ನು ಕಸ್ತೂರೆಮ್ಮ ನಾವಿ ವಹಿಸಿದ್ದರು.
ಬಸವಬೆಳವಿಯ ಶರಣಬಸವ ದೇವರು ಎಡೆಯೂರು ತೋಂಟದ ಸಿದ್ಧಲಿಂಗೇಶ್ವರ ಚರಿತಾಮೃತ ಪ್ರವಚನವನ್ನು ಪ್ರಾರಂಭಿಸಿದರು. ಇವರಿಗೆ ಸಂಗೀತದ ಸಾಥನ್ನು ಕಲ್ಯಾಣಕುಮಾರ ಹಾರಕೊಡ ಗಮಾವಿಗಳು ನೀಡಿದರು. ತಬಲಾ ವಾದಕರಾಗಿ ರಮೇಶ ಕಟ್ಟಿಸಂಗಾವಿ ಮತ್ತು ವಯೋಲಿನ್ ವಾದಕರಾಗಿ ಷಣ್ಮುಖಯ್ಯ ಹಿರೇಮಠ ಕಾರ್ಯನಿರ್ವಹಿಸಿದರು.ಕಾರ್ಯಕ್ರಮದಲ್ಲಿ ತಾಪಂ ಇಒ ವಿಜಯಕುಮಾರ ಬೆಣ್ಣಿ, ವೀರಣ್ಣ ಮಡಿವಾಳರ ಮುಂತಾದವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಐ.ಎಸ್. ಪೂಜಾರ, ಬಸಯ್ಯ ಗಿಂಡಿಮಠ, ಶಿವಕುಮಾರ ಬೆಟಗೇರಿ, ಸುರೇಶ ಬಣಗಾರ, ಶರಣಪ್ಪ ಕುಬಸದ, ಎಸ್.ಎಸ್. ಗಡ್ಡದ, ವಿಶ್ವನಾಥ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಬಂಗಲೆ ಮುಂತಾದವರಿದ್ದರು. ಮಂಜುನಾಥ ಮೇಗಲಮನಿ, ಬಸವರಾಜ ಹೂಗಾರ, ಅಶೋಕ ಅಣ್ಣಿಗೇರಿ ಅವರು ದಾಸೋಹ ಸೇವೆಯನ್ನು ವಹಿಸಿದ್ದರು. ಪ್ರವಚನ ಸಮಿತಿಯ ಅಧ್ಯಕ್ಷ ಸಿ.ಕೆ. ಗಣಪ್ಪನವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಟ್ರೇಶ ಅಂಗಡಿ ನಿರೂಪಿಸಿ, ವಂದಿಸಿದರು.