ಸಾರಾಂಶ
ಶೃಂಗೇರಿ ಕ್ಷೇತ್ರದ ಇಬ್ಬರಿಗೆ ಮುಂದಿನ ದಿನಗಳಲ್ಲಿ ಪ್ರಮುಖ ಹುದ್ದೆಗಳು ಸಿಗಲಿದೆ ಎಂದು ಕರ್ನಾಟಕ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.
ಸೌತಿಕೆರೆಯಲ್ಲಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಶೃಂಗೇರಿ ಕ್ಷೇತ್ರದ ಇಬ್ಬರಿಗೆ ಮುಂದಿನ ದಿನಗಳಲ್ಲಿ ಪ್ರಮುಖ ಹುದ್ದೆಗಳು ಸಿಗಲಿದೆ ಎಂದು ಕರ್ನಾಟಕ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.
ಭಾನುವಾರ ಸಂಜೆ ಸೌತಿಕೆರೆಯಲ್ಲಿ 5.7 ಕೋಟಿ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟಿಸಿ ಮಾತನಾಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಅವರಿಗೆ ಪ್ರಮುಖ ಹುದ್ದೆ ಸಿಗಲಿದೆ. ಈಗ ಸಾಂಕೇತಿಕ ವಾಗಿ ಉದ್ಘಾಟಿಸಿರುವ ಈ ಕಟ್ಟಡವನ್ನು ಮುಂದಿನ ತಿಂಗಳಲ್ಲಿ ಸಂಬಂಧಪಟ್ಟ ಸಚಿವರು, ಎಲ್ಲಾ ಜನ ಪ್ರತಿನಿಧಿಗಳನ್ನು ಆಹ್ವಾನಿಸಿ ಉದ್ಘಾಟಿಸಲಾಗುವುದು. ಜಿಲ್ಲಾ ಉಸ್ತುವರಿ ಸಚಿವ ಕೆ.ಜೆ.ಜಾರ್ಜ್, ಸಮಾಜ ಕಲ್ಯಾ ಸಚಿವ ಎಚ್.ಸಿ. ಮಹದೇವಪ್ಪ ಮಾರ್ಗದರ್ಶನ ಹಾಗೂ ಸೂಚನೆಯಂತೆ ಮಕ್ಕಳ ಹಿತ ದೃಷ್ಠಿಯಿಂದ ಇಂದು ಸರಳವಾಗಿ ಪೂಜೆ ಸಲ್ಲಿಸಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಉದ್ಘಾಟಿಸಲಾಗಿದೆ ಎಂದರು. ಗುತ್ತಿಗೆದಾರ ಜನಾರ್ದನ ರೆಡ್ಡಿ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಿಸಿದ್ದಾರೆ. ಕಟ್ಟಡಕ್ಕೆ ಮೆಸ್ ವಿಂಡೋ, ಮಸ್ಕಟ್ ವಿಂಡೋ ಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿ ನಿಲಯಕ್ಕೆ ಕಾಟ್, ಬೆಡ್, ಡೆಸ್ಕ್ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ನರಸಿಂಹರಾಜಪುರ ಪಟ್ಟಣದ ಕೆಪಿಎಸ್ ಗೆ ಕಟ್ಟಡ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಟ್ಟಡ ಆಗಬೇಕಾಗಿದೆ. ಪ್ರಸ್ತುತ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಖಾಸಗಿ ಕಟ್ಟಡದಲ್ಲಿದ್ದು, ಪ್ರತಿ ತಿಂಗಳು 1.65 ಲಕ್ಷ ರು. ಬಾಡಿಗೆ ನೀಡ ಲಾಗುತ್ತಿತ್ತು. ಆದ್ದರಿಂದ ಈ ವಾರಾಂತ್ಯದಲ್ಲಿ ಈ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾ ಮಹೇಶ್, ಉಪಾಧ್ಯಕ್ಷ ಸುನೀಲ್ ಕುಮಾರ್, ಗ್ರಾಪಂ ಸದಸ್ಯರಾದ ಚಂದ್ರಶೇಖರ್, ಅಶ್ವಿನಿ, ಲಿಲ್ಲಿ, ಯಾಸ್ಮೀನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ಅಕ್ರಮ- ಸಕ್ರಮ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ತಾಪಂ ಮಾಜಿ ಅಧ್ಯಕ್ಷ ಎಸ್.ಡಿ.ರಾಜೇಂದ್ರ, ಪಪಂ ಸದಸ್ಯ ಮುಕುಂದ, ಜಿಪಂ ಮಾಜಿ ಸದಸ್ಯ ಬಿ.ಎಸ್.ಸುಬ್ರಮಣ್ಯ, ಪ್ರಾಂಶುಪಾಲ ಅಜ್ಜಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರಾದ ಉಪೇಂದ್ರ, ಬೆನ್ನಿ,ಮಾಳೂರು ದಿಣ್ಣೆ ರಮೇಶ್, ಏಲಿಯಾಸ್, ಗುತ್ತಿಗೆದಾರ ಜನಾರ್ದನ ರೆಡ್ಡಿ ಮತ್ತಿತರರು ಇದ್ದರು.