ತತ್ವ ಸಿದ್ಧಾಂತದ ಹಿನ್ನೆಲೆಯ ರೆಡ್ಡಿ ಸಮಾಜ ಯಾವುದೆ ಜನಾಂಗಕ್ಕೆ ಅನ್ಯಾಯವಾಗೋದನ್ನು ಸಹಿಸುವುದಿಲ್ಲ. ನ್ಯಾಯ ಸಿಗುವವರೆಗೂ ಹೋರಾಡಿ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ ಎಂದು ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕೆರೂರ

ತತ್ವ ಸಿದ್ಧಾಂತದ ಹಿನ್ನೆಲೆಯ ರೆಡ್ಡಿ ಸಮಾಜ ಯಾವುದೆ ಜನಾಂಗಕ್ಕೆ ಅನ್ಯಾಯವಾಗೋದನ್ನು ಸಹಿಸುವುದಿಲ್ಲ. ನ್ಯಾಯ ಸಿಗುವವರೆಗೂ ಹೋರಾಡಿ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಹೂಲಗೇರಿ ಗ್ರಾಮದಲ್ಲಿ ಶ್ರೀ ಹೇಮ ವೇಮ ಸೇವಾ ಸಮಿತಿ ಮತ್ತು ಗ್ರಾಮಸ್ಥರು ಶನಿವಾರ ಆಯೋಜಿಸಿದ್ದ ಶಿವಶರಣೆ ಹೆಮರಡ್ಡಿ ಮಲ್ಲಮ್ಮ ಮಹಾಯೋಗಿ ಮೇಮನ ಮತ್ತು ಬಸವಣ್ಣ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಸರ್ಕಾರ ಈಗಾಗಲೆ ರೆಡ್ಡಿ ಜನಾಂಗದ 10 ಬೇಡಿಕೆ ಈಡೇರಿಸಿದೆ. ನಾನು ಸಚಿವ ರಾಮಲಿಂಗಾರೆಡ್ಡಿ, ಶಾಸಕ ಜೆ.ಟಿ. ಪಾಟೀಲ ರಡ್ಡೇರ ಅಭಿವೃದ್ಧಿಗಾಗಿ ನಿಗಮ ರಚನೆಗೆ ಸಿ.ಎಂ. ಸಿದ್ದರಾಮಯ್ಯನವರಿಗೆ ಆಗ್ರಹಿಸಿದ್ದು, ನಿಗಮ ರಚಿಸುವ ಭರವಸೆ ಸಿಕ್ಕಿದೆ. ರೆಡ್ಡಿ ಜನಾಂಗದ ಒಲುವು ಆಧ್ಯಾತ್ಮಿಕತೆಯತ್ತ ತಿರುಗುತ್ತಿರುವುದು ಒಳ್ಳೆಯ ಬೆಳವಣಿಗೆ. ಹೂಲಗೇರಿ ಗ್ರಾಮಸ್ಥರು ರೆಡ್ಡಿ ಜನಾಂಗದ ಮೂಲ ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ಮಹಾಯೋಗಿ ವೇಮನ ಹಾಗೂ ನಂದಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸುದೈವ. ನಾವೆಲ್ಲರೂ ಅವರ ತತ್ವಾದರ್ಶದಡಿ ಬದುಕು ರೂಪಿಸಿಕೊಳ್ಳಬೇಕಿದೆ ಎಂದರು.

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಗ್ರಾಮಸ್ಥರು ಸಮುದಾಯ ಭವನಕ್ಕೆ ಅನುದಾನ ಕೇಳಿದ್ದು, ಸಾಧ್ಯವಾದ ಮಟ್ಟಿಗೆ ಅನುಮಾದ ಒದಗಿಸುವ ಭರವಸೆ ನೀಡಿದ ಅವರು, ದೇವಸ್ಥಾನ ನಿರ್ಮಾಣ ಸುಲಭ. ಆದರೆ, ಅದನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿ ಹಿರಿಯರ ಹೊರಬೇಕು ಎಂದರು.

ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ವೇಮನಾನಂದ ಶ್ರೀಗಳು ಸಚಿವರಾದ ಎಚ್‌.ಕೆ.ಪಾಟೀಲ, ರಾಮಲಿಂಗಾರೆಡ್ಡಿ ಉತ್ತರ ದಕ್ಷಿಣದಲ್ಲಿರುವ ರಡ್ಡಿ ಸಮಾಜದ ಒಳ ಪಂಗಡಗಳನ್ನು ಒಂದುಗೂಡಿಸಿದ ಮಹತ್ಕಾರ್ಯ ಮಾಡಿದ್ದಕ್ಕೆ ರೆಡ್ಡಿ ಸಮಾಜ ಋಣಿಯಾಗಿದೆ ಎಂದರು.

ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಹೂಲಗೇರಿ ಒಂದು ಕಾಲದಲ್ಲಿ ನನ್ನ ತಂದೆ ಬಿ.ಬಿ. ಚಿಮ್ಮನಕಟ್ಟಿಯವರ ಕ್ಷೇತ್ರವಾಗಿತ್ತು. ಅಂದಿನಿಂದ ಇಂದಿನವರೆಗೂ ನಮ್ಮ ಕುಟುಂಬದ ನಿಕಟ ಸಂಪರ್ಕ ಇದ್ದು, ಈಗ ನನ್ನ ಕ್ಷೇತ್ರ ಅಲ್ಲದಿದ್ದರೂ ನನ್ನ ಸಹಾಯ ಸಹಕಾರ ಈ ಗ್ರಾಮಕ್ಕೆ ಇದ್ದೇ ಇರುತ್ತದೆ ಎಂದರು. ಎಲ್‌.ಆರ್‌.ಕಕರಡ್ಡಿ ಪ್ರಾಸ್ತಾವಿಕ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ವೇಮನಾನಂದ ಶ್ರೀಗಳು, ಪ್ರಸನ್ನಾನಂದ ಪುರಿ ಶ್ರೀಗಳು, ಸಿದ್ದರಾಮಾನಂದ ಶ್ರೀಗಳು, ಡಾ.ಶಿವಕುಮಾರ ಶಿವಾಚಾರ್ಯ ಶ್ರೀಗಳು, ಮಳಿಯಪ್ಪಯ್ಯ ಶ್ರೀಗಳು ಆಶೀರ್ವಚನ ನೀಡಿದರು. ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ, ಹಣಮಂತ ನಿರಾಣಿ, ಪಿ.ಎಚ್‌. ಪೂಜಾರ, ಹೂವಪ್ಪ ರಾಠೋಡ, ಡಿ.ಪಿ. ಅಮಲಝರಿ, ಡಾ.ಶೋಭಾ ನಾಗನೂರ ಸೇರಿದಂತೆ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕುಮಾರ ಕಕರಡ್ಡಿ, ಯಮನಪ್ಪ ಬಸರಿ, ಬಸವರಾಜ ಸಂಶಿ, ರಾಜು ಕಕರಡ್ಡಿ, ಸವಿತಾ ನಾರಪ್ಪನವರ, ಬಾಬು ಕಕರಡ್ಡಿ, ಡಾ. ಬಸವರಾಜ ಕೊವಳ್ಳಿ, ಪ್ರವೀಣ ಕಕರಡ್ಡಿ, ಕಲ್ಮೇಶ ಮೇಟಿ , ಗಿರೀಶ ನಾಡಗೌಡ್ರ ಸೇರಿದಂತೆ ಹಲವಾರು ಗಣ್ಯರಿದ್ದರು. ಬೆಂಗಳೂರಿನ ವಾಣಿಗೌಡ ಮತ್ತು ಅಪ್ಪಣ್ಣ ರಾಮದುರ್ಗ ನಿರೂಪಿಸಿ ಒಂದಿಸಿದರು.