ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಹಳಿ ತಪ್ಪಿದ್ದು, ಸಿದ್ದರಾಮಯ್ಯ ನಿರ್ವೀರ್ಯ ಮತ್ತು ನಿಸ್ಸಾಹಾಯಕ ಮುಖ್ಯಮಂತ್ರಿ ಆಗಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ದೂರಿದ್ದಾರೆ.

- ರಾಜ್ಯದಲ್ಲಿ ಸಂಪೂರ್ಣ ಹಳಿ ತಪ್ಪಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಹಳಿ ತಪ್ಪಿದ್ದು, ಸಿದ್ದರಾಮಯ್ಯ ನಿರ್ವೀರ್ಯ ಮತ್ತು ನಿಸ್ಸಾಹಾಯಕ ಮುಖ್ಯಮಂತ್ರಿ ಆಗಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ದೂರಿದರು.

ಹರಿಹರಿ ತಾ. ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ನಾವು ನಾಲ್ಕು ದಶಕಗಳ ಕಾಲ ಜೊತೆಗೆ ಕೆಲಸ ಮಾಡಿದವರಾಗಿದ್ದು, ಮುಂಚೆ ಇದ್ದ ಸಿದ್ದರಾಮಯ್ಯ ಈಗ ಕಳೆದುಹೋಗಿದ್ದಾರೆ ಎಂದರು.

ಈಗಿನ ಸಿದ್ದರಾಮಯ್ಯ ನಿರ್ವೀಯರು, ನಿಸ್ಸಹಾಯಕರಾಗಿದ್ದಾರೆ. ಕಾಂಗ್ರೆಸ್ ಸರ್ಕಾರವು ಸಂಪೂರ್ಣ ಹಳಿ ತಪ್ಪಿದ್ದು, ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಈ ಮಾತುಗಳನ್ನು ತುಂಬಾ ನೋವಿನಿಂದಲೇ ಹೇಳುತ್ತಿದ್ದೇನೆ ಎಂದು ತಿಳಿಸಿದರು.

48 ವರ್ಷಗಳಂದ ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ನಾನೂ ಅಧಿಕಾರ ನೋಡಿದ್ದೇನೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ. ಕೆಂಗಲ್ಲು ಹನುಮಂತಪ್ಪ, ಎಸ್.ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರಂಥ ಪುಣ್ಯಾತ್ಮರು ಆಡಳಿತ ಮಾಡಿದ್ದಾರೆ. ಆದರೆ, ಯಾರಲ್ಲೂ ಇಂದಿನವರ ಚಾಳಿ ಇರಲಿಲ್ಲ. ಮುಖ್ಯಮಂತ್ರಿ ಕುರ್ಚಿ ಕಚ್ಚಾಟದಿಂದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ. ಯಾವುದೇ ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅಂತಹವರು ಅರಿಯಲಿ ಎಂದರು.

ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ನಾನೂ ದೆಹಲಿಯನ್ನು ಬಿಟ್ಟು, ಮೂರು ದಿನಗಳೇ ಆಗಿದೆ. ಮತ್ತೆ ಇಂದು ರಾಜ್ಯದಿಂದ ದೆಹಲಿಗೆ ಹೋಗುತ್ತಿದ್ದೇನೆ. ಒಂದಂತೂ ಸತ್ಯ. ನಮ್ಮ ಪಕ್ಷ ಮತ್ತು ನಮ್ಮ ಹೈಕಮಾಂಡ್ ಅತ್ಯಂತ ಸದೃಢವಾಗಿದೆ. ಸೂಕ್ತ ನಿರ್ಧಾರವನ್ನೇ ಕೈಗೊಳ್ಳುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹರಿಹರದ ರೈಲ್ವೆ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲಿ ಅಂಡರ್ ಪಾಸ್‌ ನಿರ್ಮಾಣ ಆಗಬೇಕೆಂಬ ಬೇಡಿಕೆ ಇದೆ. ಈವೆರೆಗೂ ನಮ್ಮ ಸರ್ಕಾರ 11 ವರ್ಷದಲ್ಲಿ 700 ಮೇಲ್ಸೇತುವೆಗಳನ್ನು ನಿರ್ಮಾ ಮಾಡಿದೆ. ಇನ್ನೂ 2 ವರ್ಷಗಳಲ್ಲಿ ಅಷ್ಟೇ ಕೆಲಸ ಮಾಡುವ ಗುರಿ ಹೊಂದಿದ್ದೇವೆ ಎಂದು ವಿ.ಸೋಮಣ್ಣ ತಿಳಿಸಿದರು.

- - -

(ವಿ.ಸೋಮಣ್ಣ)

- - -

-08ಎಚ್‌ಆರ್‌ಆರ್ 07: ಸಚಿವ ವಿ. ಸೋಮಣ್ಣ ಸುದ್ದಿಗಾರರೊಂದಿಗೆ ಮಾತನಾಡಿದರು.