ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ರೈತರು ಕೊಟ್ಟಿಗೆಯಲ್ಲಿ ರಬ್ಬರ್‌ ನೆಲಹಾಸು (ಮ್ಯಾಟ್) ಅಳವಡಿಸುವುದರಿಂದ ಸ್ವಚ್ಛತೆ, ಸಮತೋಲಿತ ಪೋಷಣೆ, ಕೆಚ್ಚಲಿನ ನೈರ್ಮಲ್ಯದೊಂದಿಗೆ ಹಸುಗಳ ಆರೋಗ್ಯ ರಕ್ಷಣೆ ಹಾಗೂ ಅಧಿಕ ಹಾಲು ಪಡೆಯಬಹುದಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.ತಾಲೂಕಿನ ಶೆಟ್ಟಿಹಳ್ಳಿ ಹಾಲು ಶಿತಲೀಕರಣ ಘಟಕದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹಾಲು ಉತ್ಪಾದಕ ಸದಸ್ಯರಿಗೆ ರಬ್ಬ‌ರ್‌ ನೆಲಹಾಸು ವಿತರಿಸಿ ಮಾತನಾಡಿದ ಅವರು. ರೈತ ಸಮುದಾಯವು ತಮ್ಮ ಆರ್ಥಿಕತೆಯ ಪ್ರಮುಖ ಮೂಲವಾಗಿರುವ ಪಶುಸಂಗೋಪನೆಯ ಉತ್ತಮ ಲಾಭ ಪಡೆಯಬೇಕಾದರೆ ರಾಸುಗಳ ಆರೋಗ್ಯ ಉತ್ತಮವಾಗಿರುವುದು ಕೂಡ ಮುಖ್ಯ. ಈ ನಿಟ್ಟಿನಲ್ಲಿ ದನ ಕರುಗಳು ವಾಸಿಸುವ ಜಾಗ ಸ್ವಚ್ಛವಾಗಿರುವುದು ಮುಖ್ಯವಾಗುತ್ತದೆ. ಜಾನುವಾರುಗಳು ಮಲಗಿದ್ದಾಗ ಕೆಚ್ಚಲು ನೆಲದ ಸಂಪರ್ಕಕ್ಕೆ ಬರುತ್ತದೆ. ಹೈನು ರಾಸುಗಳಲ್ಲಿ ಕೆಚ್ಚಲು ಬಾವು ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅದರಿಂದ ಹಾಲಿನ ಉತ್ಪಾದನೆ ಗಣನೀಯವಾಗಿ ಇಳಿಮುಖವಾಗುತ್ತದೆ. ಹಸುವಿನ ಉತ್ಪಾದನಾ ಮಟ್ಟವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕಾದರೆ ನೆಲಹಾಸು ಮುಖ್ಯವಾಗಿದೆ ಎಂದು ಸಲಹೆ ನೀಡಿದರು.ರಾಜ್ಯದಲ್ಲ ಹಾಲು ಉತ್ಪಾದನೆಯಲ್ಲಿ ಹಾಸನ ಹಾಲು ಒಕ್ಕೂಟ 2ನೇ ಸ್ಥಾನದಲ್ಲಿದೆ. ಚನ್ನರಾಯಪಟ್ಟಣ ತಾಲೂಕು ರಾಜ್ಯಕ್ಕೆ 4ನೇ ಸ್ಥಾನ ಪಡೆದಿದೆ. ಡೇರಿ ಉದ್ಯಮದ ಬೆಳವಣಿಗೆಗೆ ಮಾಜಿ ಸಚಿವ ಎಚ್. ಡಿ. ರೇವಣ್ಣ ಅವರ ಕೊಡುಗೆ ಅಪಾರವಾಗಿದೆ. ಜಿಲ್ಲೆಯ ರೈತರು ಆರ್ಥಿಕವಾಗಿ ಸದೃಢಗೊಳ್ಳಲು ಅವರ ದೂರದೃಷ್ಟಿಯೇ ಕಾರಣ. ಮುಂದಿನ ದಿನಗಳಲ್ಲಿ ಮೆಗಾ ಡೇರಿ ಉದ್ಘಾಟನೆಯಾಗಲಿದೆ ಎಂದರು. ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ಅವರು ಮೂರು ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರಿ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿದ್ದು ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಈ ಬಗ್ಗೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.ತಾಲೂಕಿನ 280 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ 1.5 ಕೋಟಿ ರು. ವೆಚ್ಚದಲ್ಲಿ 6000 ರಬ್ಬರ್‌ ನೆಲಹಾಸು ವಿತರಿಸಲು ಕ್ರಮ ಕೈಗೊಂಡಿದ್ದು ತಾಲೂಕಿನಲ್ಲಿ ರಬ್ಬರ್ ನೆಲಹಾಸುಗಳ ಬೇಡಿಕೆ ಹೆಚ್ಚಾಗಿದ್ದು 20,000 ನೆಲ ಹಾಸುಗಳ ಅವಶ್ಯಕತೆ ಇದ್ದು, ಹಂತ ಹಂತವಾಗಿ ಬೇಡಿಕೆಗೆ ಅನುಗುಣವಾಗಿ ಎರಡನೇ ಹಂತದಲ್ಲಿ ವಿತರಣೆಗೆ ಕ್ರಮ ವಹಿಸಲಾಗುವುದು ಎಂದರು. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಜಾನುವಾರು ವಿಮಾ ಯೋಜನೆಯಲ್ಲಿ ಹಣ ಪಾವತಿಸಿದರೆ, ರೈತರ ಜಾನುವಾರುಗಳು ವಿಮೆ ವ್ಯಾಪ್ತಿಗೆ ಒಳಪಡಲಿದ್ದು, ಒಂದು ವೇಳೆ ಅವು ಆಕಸ್ಮಿಕವಾಗಿ ಮೃತಪಟ್ಟರೆ ಗರಿಷ್ಠ 50 ಸಾವಿರ ರು.ವರೆಗೆ ವಿಮಾ ಮೊತ್ತ ಪಾಲಕನ ಕೈಗೆ ದೊರೆಯಲಿದೆ. ಜಾನುವಾರು ಮಿಷನ್ ಯೋಜನೆಯ ಜಾನುವಾರು ವಿಮೆ ಕಾರ್ಯಕ್ರಮ, ರೋಗ ಅಥವಾ ಅಪಘಾತದಿಂದ ಜಾನುವಾರು ಸಾವಾಗುವ ಸಂಭವಿತ ನಷ್ಟದಿಂದ ಪಶುಪಾಲಕರಿಗೆ ರಕ್ಷಣೆ ನೀಡುತ್ತದೆ ಎಂದು ಮಾಹಿತಿ ನೀಡಿದರು.ಹಾಸನ ಹಾಲು ಒಕ್ಕೂಟದ ನಿರ್ದೇಶಕಿ ವಸಂತ ಶಿವಣ್ಣ, ಮುಖಂಡರಾದ ಶಿವಣ್ಣ, ವಳಗೇರಹಳ್ಳಿ ಮಂಜಣ್ಣ,ಹಾಲು ಶೀತಲೀಕರಣ ಘಟಕದ ಸಹಾಯಕ ವ್ಯವಸ್ಥಾಪಕ ಎಂ. ದಯಾನಂದ, ಸಿ. ಸಿ. ಯೋಗೀಶ್, ಟಿ. ಕೃಷ್ಣಮೂರ್ತಿ, ವಿಸ್ತರಣಾಧಿಕಾರಿಗಳಾದ ವಿದ್ಯಾ, ಪ್ರಶಾಂತ್ ಇತರರಿದ್ದರು.