ಕನ್ನಡಪ್ರಭ ವಾರ್ತೆ ಮೈಸೂರು
ಔಷಧ ಮುಕ್ತ ಜೀವನಕ್ಕಾಗಿ ಯೋಗವೆ ಮಾರ್ಗ ಎಂದು ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಪ್ರಭಾರ ನಿರ್ದೇಶಕರಾದ ಡಾ.ಎಸ್. ಮಹೀಬಾ ಹೆಲೇನ್ ತಿಳಿಸಿದರು.ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಭಾನುವಾರ ನಡೆದ ಅಂತಾರಾಷ್ಟೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಾವು ಪ್ರತಿಯೊಬ್ಬರು ಸ್ವಯಂ ಇಚ್ಛೆಯಿಂದ ನಮ್ಮ ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಯೋಗ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಆರೋಗ್ಯದ ಬಗ್ಗೆ ನಾವು ಹೆಚ್ಚು ಗಮನ ನೀಡಬೇಕಾಗಿದೆ. ಆರೋಗ್ಯವೇ ನಮ್ಮ ಸಂಪತ್ತು, ಯುವ ಪೀಳಿಗೆಯು ಆರೋಗ್ಯ ಮತ್ತು ಯೋಗಕ್ಕೆ ತುಂಬಾ ಮಹತ್ವ ನೀಡಬೇಕು. ನಾವು ದೈನಂದಿನ ಕೆಲಸದ ಒತ್ತಡದಲ್ಲಿ ಆರೋಗ್ಯವನ್ನು ನೀರ್ಲಕ್ಷ್ಯ ಮಾಡಬಾರದು, ಇರುವ ಸಮಯದಲ್ಲಿಯೆ ಯೋಗದ ಕಡೆ ಗಮನ ನೀಡವುದು ಅವಶ್ಯಕ. ಮಾನಸಿಕ ಒತ್ತಡ ನಿವಾರಿಸಲು ಯೋಗವೆ ಮಾರ್ಗ. ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ ಅವಶ್ಯಕ ಎಂದು ಅವರು ತಿಳಿಸಿದರು.ಯೋಗ ಶಿಕ್ಷಕರಾದ ವೀರಭದ್ರಪ್ಪ ಮತ್ತು ಬಸವರಾಜು ಅವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ನಡೆಯಿತು. ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಡಾ. ಮಂಜಪ್ಪ, ಡಾ. ಮಧುಸೂದನ್, ಡಾ. ಗುಲಾಬ್ ಖಾನ್, ಡಾ. ಚಂದ್ರಕಾಂತ್, ಡಾ. ಜಾಯ್ಸಿರಾಣಿ, ಡಾ. ಮಲ್ಲಿಕಾರ್ಜುನ, ನಾರಾಯಣ, ವೈ.ಆರ್. ರಘು, ಮಂಜುಳಾ ಮೊದಲಾದವರು ಇದ್ದರು.