ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಹಣ್ಣು ಬೆಳೆಗಾರ ಸಂಘದ ಉಪಾಧ್ಯಕ್ಷ ಎಸ್.ಬಿ. ಅಂಗಡಿ ಹೇಳಿದರು.ಹಣ್ಣು ಬೆಳೆಗಾರರ ಪ್ರೌಢಶಾಲಾ ಆವರಣದಲ್ಲಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕೇವಲ ಓದು ಬರಹ ಅಭ್ಯಾಸ ಮನನ ಕಂಠಪಾಠ ಪಠ್ಯ ಚಟುವಟಿಕೆಯ ಜೊತೆಗೆ ಆಟೋಟ ಸ್ಪರ್ಧೆಗಳಲ್ಲಿ ಭಾಗಿಯಾಗಬೇಕು. ಸ್ಪರ್ಧೆಗಳು ದೈಹಿಕವಾಗಿ ಬಲಿಷ್ಠಗೊಳಿಸಿದರೆ ಮಾನಸಿಕವಾಗಿ ಉಲ್ಲಾಸ ಗೊಳಿಸುತ್ತವೆ. ಕ್ರೀಡಾ ಕ್ಷೇತ್ರವು ಸಾಕಷ್ಟು ವಿಸ್ತಾರವಾಗುತ್ತಿದ್ದು, ಕ್ರೀಡೆಗಳಲ್ಲಿ ಸಾಧನೆ ಮಾಡಿದ ಜೀವನವನ್ನು ರೂಪಿಸಿಕೊಳ್ಳಬಹುದಾಗಿದೆ ಎಂದರು.
ಬಾಗಲಕೋಟೆ ತಾಲೂಕು ದೈಹಿಕ ಪರಿವೀಕ್ಷಕ ಆರ್.ಆರ್.ಪಾಟೀಲ್ ಮಾತನಾಡಿ, ಕ್ರೀಡೆ ಎಂದ ಮೇಲೆ ಯಾರಾದರೂ ಒಬ್ಬರು ಗೆಲ್ಲಲೇ ಬೇಕು. ಯಾರಾದರೂ ಒಬ್ಬರು ಸೋಲಬೇಕು, ಸ್ನೇಹ ಪೂರ್ವಕವಾಗಿ ಕ್ರೀಡೆಗಳನ್ನು ಆಡಬೇಕು ಎಂದರು.ಹಣ್ಣು ಬೆಳೆಗಾರರ ಶಾಲಾ ಅಧ್ಯಕ್ಷ ಕ.ಟಿ.ಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ಕಲಾದಗಿ ಗ್ರಾಪಂ ಅಧ್ಯಕ್ಷ ಖಾತುನಭಿ ಹ ರೋಣ, ಉಪಾಧ್ಯಕ್ಷ ಫಕೀರಪ್ಪ ಮಾದರ, ಸಂಘದ ಕೋಶಾಧ್ಯಕ್ಷ ಎಸ್.ಆರ್.ವಾಘ, ಸದಸ್ಯ ಮಲ್ಲಿಕಾರ್ಜುನ ಮಂಟೂರ, ಕಲಾದಗಿ ವಲಯ ಸಂಪನ್ಮೂಲ ವ್ಯಕ್ತಿ ಮಂಜುನಾಥ ಹೆಡಗಿ, ಕಾಲೇಜು ಪ್ರಾಂಶುಪಾಲ್ ಎಸ್.ಬಿ.ಬಳವಾಟ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಆರ್.ವಿ.ಜಾಧವ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಶ್ರೀಕಾಂತ್ ಕೆರಕಮ್ಮಟ್ಟಿ, ಆರ್.ಪಿ.ಜೋಶಿ ಇನ್ನಿತರರು ಇದ್ದರು.