ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿಯ ಅಮಾನುಷ ಹತ್ಯೆ ಮತ್ತು ಪ್ರತಿಭಟನಾ ನಿರತ ವೈದ್ಯರನ್ನು ಗುರಿಯಾಗಿಸಿಕೊಂಡು ಗುಂಪೊಂದು ಹಲ್ಲೆ ಮಾಡಿ ಅರಾಜಕತೆ ಮೆರೆದಿರುವುದನ್ನು ಖಂಡಿಸಿ ತುರ್ತು ಸೇವೆ ವಿಭಾಗವನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹೊರರೋಗಿ (ಓಪಿಡಿ) ವೈದ್ಯಕೀಯ ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.ಯೂಶನಿವಾರ ಬೆಳಿಗ್ಗೆ 6 ಗಂಟೆಯಿಂದಲೇ ಎಲ್ಲ ಸರ್ಕಾರಿ ಮತ್ತು ಖಾಸಗಿ ಕ್ಲಿನಿಕ್ಗಳು ಓಪಿಡಿ ಬಂದ್ ಮಾಡಿ ಘಟನೆಗೆ ಆಕ್ರೋಶ ವ್ಯಕ್ತಪಡಿಸಲಾಯಿತು. ನಗರದ ಸೇರಿದಂತೆ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ ಆಗಿರುವುದರಿಂದ ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಗಳು ಪರದಾಡುವಂತಾಯಿತು. ಹಳ್ಳಿಗಳಿಂದ ಬಂದಿದ್ದ ರೋಗಿಗಳು ವೈದ್ಯರು ಇಲ್ಲದನ್ನು ನೋಡಿ ವಾಪಸ್ ಹೋದರು.
ಈ ಕುರಿತಂತೆ ಪತ್ರಿಕೆಯೊಂದಿಗೆ ಮಾತನಾಡಿದ ಐಎಂಎ ಜಿಲ್ಲಾಧ್ಯಕ್ಷ ಡಾ.ಎಚ್.ವಿ.ರಂಗಸ್ವಾಮಿ, ವೈದ್ಯಕೀಯ ಸಂಸ್ಥೆಗಳು ಮತ್ತು ವೈದ್ಯಕೀಯ ಸಿಬ್ಬಂದಿ ಅತಿ ಸೂಕ್ಷ್ಮ ಪರಿಸ್ಥಿತಿಯಲ್ಲಿ ಆತಂಕದಿಂದ ತಮ್ಮ ಸೇವಾಕ್ಷೇತ್ರದಲ್ಲಿ ಅಭದ್ರತೆಯೊಂದಿಗೆ ಕರ್ತವ್ಯ ನಿರ್ವಹಿಸುವ ಸನ್ನಿವೇಶಗಳನ್ನು ಸೃಷ್ಟಿಸಲಾಗುತ್ತಿದೆ. ಆದ್ದರಿಂದ ಮಾನವೀಯ ಕಾಳಜಿಯ ಸೇವಾಕ್ಷೇತ್ರವನ್ನು ಕಲುಷಿತಗೊಳಿಸುವ ಈ ಪ್ರಯತ್ನಗಳನ್ನು ಮೊಳೆಕೆಯಲ್ಲೇ ನಿಷ್ಕ್ರಿಯಗೊಳಿಸದಿದ್ದಲ್ಲಿ ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಸಿದ್ಧಗಂಗಾ ಆಸ್ಪತ್ರೆ ಓಪಿಡಿ ಬಂದ್ಕೋಲ್ಕತ್ತಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವುದ್ಯಾಮೇಲಿನ ಅತಿ ಕ್ರೂರ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ಒಂದು ದಿನದ ಆರೋಗ್ಯ ಸೇವೆಗಳ ಬಂದ್ ಗೆ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನ ಸಂಸ್ಥೆ (ಡಾ. ಶ್ರೀ ಶ್ರೀ ಶಿವಕುಮಾರಸ್ವಾಮೀಜಿ ಆಸ್ಪತ್ರೆ ಮತ್ತು ಸಿದ್ಧಗಂಗಾ ಆಸ್ಪತ್ರೆ ) ಬೆಂಬಲ ವ್ಯಕ್ತಪಡಿಸಿದೆ.
ಶ್ರೀದೇವಿ ಕಾಲೇಜಿನಲ್ಲಿ ಪ್ರತಿಭಟನೆಕೋಲ್ಕತ್ತಾದ ವೈದ್ಯಕೀಯ ಕಾಲೇಜಿನ ಸಾತ್ನಕೋತ್ತರ ವಿದ್ಯಾರ್ಥಿನಿಯ ಅಮಾನುಷ ಹತ್ಯೆ ಖಂಡಿಸಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ತುರ್ತು ಅಗತ್ಯ ಸೇವೆ ಹೊರತಾಗಿ ಎಲ್ಲಾ ಹೊರ ರೋಗಿ ತಪಾಸಣಾ ಸೇವೆಯನ್ನು ಬಂದ್ ಮಾಡಲಾಗಿತ್ತು. ಈ ಕುರಿತಂತೆ ಪತ್ರಿಕೆಗೆ ಮಾಹಿತಿ ನೀಡಿದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ.ರಮಣ್.ಎಂ ಹುಲಿನಾಯ್ಕರ್ ಹಾಗೂ ಪ್ರಾಂಶುಪಾಲ ಡಾ.ಎಂ.ಎಲ್.ಹರೇಂದ್ರಕುಮಾರ್, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಈ ಘಟನೆ ಖಂಡನೀಯ. ಈ ಘಟನೆಯ ಬಗ್ಗೆ ಭಾರತೀಯ ವೈದ್ಯಕೀಯ ಸಂಘ ತೆಗೆದುಕೊಳ್ಳುವ ನಿರ್ಣಾಯಗಳಲ್ಲಿ ನಮ್ಮ ಸಹಮತವಿರುತ್ತದೆ. ಈ ಘಟನೆಯನ್ನು ಖಂಡಿಸುವುದಕ್ಕಾಗಿ ಆ.19 ರಂದು ಸೋಮವಾರ ಸಂಜೆ 6.30 ಕ್ಕೆ ಮೇಣದ ಬತ್ತಿ ಮೂಲಕ ಮೃತ ವೈದ್ಯ ವಿದ್ಯಾರ್ಥಿಗೆ ಶಾಂತಿ ಕೋರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್. ಪಾಟೀಲ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಮೋಹನ್ಕುಮಾರ್, ಸಿ.ಎ.ಓ ಪ್ರದೀಪ್ಕುಮಾರ್ ವೆಗ್ಗಿ, ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ.ಕೃಷ್ಣ, ಡಾ.ಕಲ್ಲೇಶಪ್ಪ, ಶ್ರೀದೇವಿ ಆಸ್ಪತ್ರೆಯ ಶುಶ್ರೂಷಕ ಅಧೀಕ್ಷಕರಾದ ಶೀಲಾ, ಉಪ ಅಧೀಕ್ಷಕ ನರಸಪ್ಪ ಮತ್ತಿತರರಿದ್ದರು.