ಅಂಕೋಲಾ: ಬಹುವರ್ಷಗಳ ಕನಸಾಗಿದ್ದ ಮಂಜುಗುಣಿ-ಗಂಗಾವಳಿ ಸೇತುವೆಯನ್ನು ಫೆ. 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಶುಕ್ರವಾರ ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್.ಎಂ. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮಂಜಗುಣಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

ಈ ಹಿಂದೆ ಬಾಸಗೋಡದ ನಡುಬೇಣದಲ್ಲಿ ಹೆಲಿಕಾಪ್ಟರ್ ನಿಲ್ದಾಣಕ್ಕೆ ಆಯ್ಕೆ ಮಾಡಿದ್ದರು. ಆದರೆ ಶುಕ್ರವಾರ ಆಗಮಿಸಿದ ಅಧಿಕಾರಿಗಳು ಬಾಸಗೋಡದ ನಡುಬೇಣ, ನಾಡುಮಾಸ್ಕೇರಿ ಪ್ರೌಢಶಾಲಾ ಮೈದಾನ, ಮಂಜಗುಣಿಯ ಗಂಗಾವಳಿ ನದಿಗೆ ಹೊಂದಿಕೊಂಡಿರುವ ಮೈದಾನ ಹಾಗೂ ಮಂಜಗುಣಿಯ ಕ್ರಿಕೆಟ್ ಮೈದಾನ ಪರಿಶೀಲನೆ ನಡೆಸಿದರು.

ಪ್ರವಾಸಿಗೃಹದಲ್ಲಿ ಕುಳಿತು ಶಾಸಕ ಸತೀಶ ಸೈಲ್ ಹಾಗೂ ಅಧಿಕಾರಿಗಳು ಚರ್ಚಿಸಿದರು. ಕೊನೆಗೆ ಮಂಜಗುಣಿಯ ಕ್ರಿಕೆಟ್ ಮೈದಾನದಲ್ಲಿ ಎರಡು ಹೆಲಿಕ್ಯಾಪ್ಟರ್ ಇಳಿಸಲು ಸ್ಥಳ ನಿಗದಿ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಇತರರು ಆಗಮಿಸಲಿದ್ದಾರೆ.

ಈ ಸಂದರ್ಭದಲ್ಲಿ ಡಿವೈಎಸ್ಪಿ ಗಿರೀಶ, ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಗೋಕರ್ಣ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್., ಶಿರಸ್ತೇದಾರ ಗಿರೀಶ ಜಾಂಬವಳಿಕರ, ಕಂದಾಯ ನಿರೀಕ್ಷಕ ಮಂಜುನಾಥ ನಾಯ್ಕ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಪಾಂಡುರಂಗ ಗೌಡ, ಲೋಕೋಪಯೋಗಿ ಇಲಾಖೆಯ ಅಭಿಯಂತರ ರಾಮು ಅರ್ಗೇಕರ, ತಾಪಂ ಇಒ ರಾಮು ಗುನಗಿ, ಶಾಸಕರ ಆಪ್ತ ಕಾರ್ಯದರ್ಶಿ ಜಗದೀಶ ಖಾರ್ವಿ ಇತರರಿದ್ದರು.

ಪ್ರಮುಖರಾದ ವೆಂಕಟ್ರಮಣ ಕೆ. ನಾಯ್ಕ, ಪ್ರಶಾಂತ ವಿ. ನಾಯ್ಕ, ಅಶೋಕ ಬಿ. ನಾಯ್ಕ, ಅಶೋಕ ವಿ. ನಾಯ್ಕ, ಶ್ರೀಪಾದ ಟಿ. ನಾಯ್ಕ, ಬಿ.ಡಿ. ನಾಯ್ಕ, ಉದಯ ನಾಯಕ, ವಿನೋದ ನಾಯಕ, ಮಾಬು ನಾಯ್ಕ, ಮಾದೇವ ಗುನಗಾ, ಮಂಜುನಾಥ ಆರ್. ನಾಯ್ಕ, ಉಪೇಂದ್ರ ನಾಯ್ಕ, ರಾಮಚಂದ್ರ ತಾಂಡೇಲ, ಗಣಪತಿ ಎ. ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಮಂಜಗುಣಿಗಿಲ್ಲ ಸರ್ವೀಸ್ ರಸ್ತೆ: ಮಂಜಗುಣಿ-ಗಂಗಾವಳಿ ಸೇತುವೆ ನಿರ್ಮಾಣಗೊಂಡ ಆನಂತರ ಕೂಡುರಸ್ತೆ ನಿರ್ಮಿಸಲಾಗಿತ್ತು. ಇದರಿಂದಾಗಿ ಹಳೆಯ ರಸ್ತೆಯು ಕೂಡುರಸ್ತೆಯ ಪಾಲಾಗಿದ್ದರಿಂದಾಗಿ ಮಂಜಗುಣಿಗೆ ಪ್ರತ್ಯೇಕವಾಗಿ ಸರ್ವೀಸ್ ರಸ್ತೆ ಮಾಡಬೇಕಾಗಿತ್ತು. ಆದರೆ ಈ ಮಣ್ಣುರಸ್ತೆಗೆ ಡಾಂಬರೀಕರಣ ಮಾಡದೇ ಹಾಗೇ ಬಿಡಲಾಗಿತ್ತು. ಹೀಗಾಗಿ ಈ ಬಗ್ಗೆ ಅನೇಕ ಸಭೆ, ಪ್ರತಿಭಟನೆಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಶುಕ್ರವಾರ ಸ್ಥಳಕ್ಕೆ ಆಗಮಿಸಿದಾಗ ಮಂಜಗುಣಿ ಗ್ರಾಮಸ್ಥರು ಸರ್ವೀಸ್ ರಸ್ತೆಯ ಕುರಿತು ಶಾಸಕರಿಗೆ ಮನವಿ ಮಾಡಿದರು. ಕೆಲದಿನಗಳ ಆನಂತರ ರಸ್ತೆಯ ಸಮಸ್ಯೆ ಬಗೆಹರಿಸಿ, ಸರ್ವೀಸ್‌ ರಸ್ತೆಯನ್ನು ಡಾಂಬರೀಕರಣ ಮಾಡಿಕೊಡುವ ಭರವಸೆ ನೀಡಿದರು.

ವೀಕ್ಷಣೆಗೆ ಅವಕಾಶ: ಬೆಳಗ್ಗೆ 11.50ಕ್ಕೆ ಹೆಲಿಕಾಪ್ಟರ್ ಮೂಲಕ ಮುಖ್ಯಮಂತ್ರಿ ಮಂಜಗುಣಿಗೆ ಬಂದಿಳಿಯಲಿದ್ದಾರೆ. ಆನಂತರ ಅಲ್ಲಿಂದ ಸೇತುವೆ ವರೆಗೆ ವಿವಿಧ ವಾದ್ಯ, ಕುಂಭಮೇಳದ ಮೂಲಕ ತೆರಳಲಿದ್ದಾರೆ. ಹಾಗೆ ಸೇತುವೆಯನ್ನು ಉದ್ಘಾಟಿಸಿ, ಅಲ್ಲಿಯೇ ಹಾಕಲಾದ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಲಿದ್ದಾರೆ. ಜನರ ವೀಕ್ಷಣೆಗಾಗಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ ಸೈಲ್ ಹೇಳಿದರು.