ಕನ್ನಡಪ್ರಭ ವಾರ್ತೆ ಹಾಸನ
ಕರ್ನಾಟಕ ಸರ್ಕಾರ ಕೋಳಿ ಸಾಕಾಣಿಕೆ ರೈತರ ಹಿತದೃಷ್ಟಿಯಿಂದ ಜಾರಿಗೊಳಿಸಿರುವ ಬಹುನಿರೀಕ್ಷಿತ ಪ್ರೋತ್ಸಾಹಧನ ಯೋಜನೆಯಡಿ ಪ್ರತಿ ಕೆಜಿ ಕೋಳಿಗೆ ₹ 10 ಪ್ರೋತ್ಸಾಹಧನ ನೀಡುವ ಕ್ರಮವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ರಾಜ್ಯ ಪಶುಪಾಲನಾ ಇಲಾಖೆಯ ಆಯುಕ್ತೆ ಶಿಲ್ಪಾ ನಾಗ್ ಸ್ಪಷ್ಟಪಡಿಸಿದ್ದಾರೆ.ಬೆಂಗಳೂರಿನ ಪಶುಭವನದಲ್ಲಿ ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್ (ಹಾಸನ) ಅವರ ನೇತೃತ್ವದಲ್ಲಿ ಸಂಘದ ಮುಖಂಡರು ಹಾಗೂ ಕೋಲಾರ ಜಿಲ್ಲೆಯ ಪ್ರತಿನಿಧಿಗಳ ನಿಯೋಗ ಆಯುಕ್ತರನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ಈ ವೇಳೆ ಮಾತನಾಡಿದ ಶಿಲ್ಪಾ ನಾಗ್, ಸರ್ಕಾರ ಮೇ 25ರಂದು ಅಧಿಕೃತವಾಗಿ ಜಾರಿಗೊಳಿಸಿರುವ ಪ್ರೋತ್ಸಾಹಧನ ಯೋಜನೆ ಕುರಿತು ಕೆಲವರು ಹಾಗೂ ಕೆಲವು ಕೋಳಿ ಸಾಕಾಣಿಕೆ ಕಂಪನಿಗಳು ಸುಳ್ಳು ಮತ್ತು ಗೊಂದಲಕಾರಿ ಪ್ರಚಾರ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಸರ್ಕಾರದ ಅಧಿಕೃತ ಯೋಜನೆಯನ್ನು ಫೇಕ್ ಎಂದು ಬಿಂಬಿಸುವ ಪ್ರಯತ್ನ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದ ಕೋಳಿ ಸಾಕಾಣಿಕೆ ರೈತರ ಹಿತಾಸಕ್ತಿಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಕಂಪನಿಗಳ ಒತ್ತಡಕ್ಕೆ ಮಣಿಯದೆ ರೈತರಿಗೆ ಪ್ರತಿ ಕೆಜಿಗೆ ₹10 ಪ್ರೋತ್ಸಾಹಧನವನ್ನು ತಲುಪಿಸಲಾಗುವುದು. ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಇಲಾಖೆ ಬದ್ಧವಾಗಿದೆ ಎಂದು ಅವರು ಹೇಳಿದರು.ಈ ಯೋಜನೆ ಕುರಿತು ಕೋಳಿ ಸಾಕಾಣಿಕೆ ಕಂಪನಿಗಳ ಸಂಘದ ಪ್ರತಿನಿಧಿಗಳು ತಮ್ಮನ್ನು ಭೇಟಿ ಮಾಡಲು ಸಮಯ ಕೋರಿರುವುದಾಗಿ ತಿಳಿಸಿದ ಅವರು, ಪ್ರಸ್ತುತ ತಾವು ರಾಜ್ಯದ ಮೂರು ಇಲಾಖೆಗಳ ಆಯುಕ್ತೆಯಾಗಿ ಹೆಚ್ಚುವರಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವುದರ ಜೊತೆಗೆ ವಿಧಾನಸೌಧದಲ್ಲಿ ಆಡಳಿತಾತ್ಮಕ ಕೆಲಸದ ಒತ್ತಡ ಹೆಚ್ಚಿರುವ ಕಾರಣ ಇದುವರೆಗೆ ಅವರಿಗೆ ಸಮಯ ನೀಡಲು ಸಾಧ್ಯವಾಗಿಲ್ಲ ಎಂದು ವಿವರಿಸಿದರು. ಆದರೆ ರೈತರ ಸಂಘದ ಮನವಿಯನ್ನು ಪರಿಗಣಿಸಿ ಶೀಘ್ರದಲ್ಲೇ ಕೋಳಿ ಸಾಕಾಣಿಕೆ ಕಂಪನಿಗಳ ಪ್ರತಿನಿಧಿಗಳಿಗೆ ಸಮಯ ನೀಡಿ ಸಮಗ್ರ ಮಾತುಕತೆ ನಡೆಸುವುದಾಗಿ ಹಾಗೂ ಎಲ್ಲಾ ಅನುಮಾನಗಳಿಗೆ ಸ್ಪಷ್ಟನೆ ನೀಡುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಸರ್ಕಾರದ ಪ್ರೋತ್ಸಾಹಧನ ಯೋಜನೆಯನ್ನು ರಾಜ್ಯದ ಎಲ್ಲಾ ಅರ್ಹ ಕೋಳಿ ಸಾಕಾಣಿಕೆ ರೈತರಿಗೆ ಯಾವುದೇ ತೊಂದರೆಯಾಗದಂತೆ ತಲುಪಿಸುವಂತೆ ಹಾಗೂ ಯೋಜನೆ ಕುರಿತು ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.ಸಭೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಹೊಸಕೋಟೆ ಮಾರಣ್ಣ, ಮುಖಂಡರಾದ ಶ್ರೀಧರ್ ರೆಡ್ಡಿ, ಮುನೇಗೌಡ, ಕೊಳತೂರು ಕೃಷ್ಣಪ್ಪ, ಶೆಟ್ಟಿಹಳ್ಳಿ ನಂಜುಂಡಪ್ಪ, ಶ್ರೀಸಂದ್ರ ನಾರಾಯಣಸ್ವಾಮಿ, ಟಿ. ಅಗ್ರಾರದ ಬಾಬು, ರಾಜಶೇಖರ್, ಸತ್ಯವಾರ ಸುರೇಶ್, ಕಾರೆಹಳ್ಳಿ ಕೃಷ್ಣಪ್ಪ, ಅರೆಹಳ್ಳಿ ಶ್ರೀನಿವಾಸು, ಶೆಟ್ಟಳ್ಳಿ ಯೆರೇಗೌಡ, ಬಾಬಾಪುರ ಸುಬ್ರಹ್ಮಣ್ಯ, ರಮೇಶ್, ಮುಕ್ಬಾಲ್ ರಿಯಾಜ್, ಶಿವನಪುರ ರಿಯಾಜ್, ತಿಮ್ಮನಹಳ್ಳಿ ಸುಬ್ರಹ್ಮಣ್ಯ ಹಾಗೂ ಬೇಡನಹಳ್ಳಿ ದಿವಾಕರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.