ಮಕ್ಕಳಿಗೆ ಓದಿಗೆ ಪೂರಕವಾಗುವ, ಅವರಲ್ಲಿ ಚೈತನ್ಯ ತುಂಬುವ ಅನೇಕ ವಿಷಯಗಳು ಬೀಚಿಯವರ ಸಾಹಿತ್ಯದಲ್ಲಿದೆ. ಇದನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವುದರಿಂದ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
ನರೇಗಲ್ಲ: ಏಕತಾನತೆಯಿಂದ ಕೂಡಿರುವ ಪಠ್ಯಪುಸ್ತಕಗಳಲ್ಲಿನ ಪಠ್ಯವನ್ನು ಬದಲಾಯಿಸುವ ಕಾಲ ಬಂದಿದೆ. ಇದನ್ನು ಪಠ್ಯಪುಸ್ತಕ ಸಮಿತಿಯವರು ಗಮನಿಸಿ ಹಾಸ್ಯ ಸಾಹಿತಿ ಬೀಚಿಯವರ ಸಾಹಿತ್ಯವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು ಎಂದು ಡಯಟ್ನ ನಿವೃತ್ತ ಪ್ರಾಧ್ಯಾಪಕ ಕಾಶಿನಾಥ ಸಾಲಿಮಠ ಆಗ್ರಹಿಸಿದರು.
ಸ್ಥಳೀಯ ಹಿರೆಮಠ ಸಭಾಭವನದಲ್ಲಿ ಜರುಗಿದ ಬೀಚಿ ಬಳಗದ ಮಾಸಿಕ ಸಭೆಯಲ್ಲಿ ಉಪನ್ಯಾಸ ನೀಡಿ, ಮಕ್ಕಳಿಗೆ ಓದಿಗೆ ಪೂರಕವಾಗುವ, ಅವರಲ್ಲಿ ಚೈತನ್ಯ ತುಂಬುವ ಅನೇಕ ವಿಷಯಗಳು ಬೀಚಿಯವರ ಸಾಹಿತ್ಯದಲ್ಲಿದೆ. ಇದನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವುದರಿಂದ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಬೀಚಿ ಎಲ್ಲ ವಯೋಮಾನದವರೂ ಓದುವಂತಹ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳ ಕಡೆಗೆ ಗಮನ ನೀಡಿ ಪಠ್ಯಪುಸ್ತಕ ಸಿದ್ಧತೆ ಮಾಡುವಂತಾಗಬೇಕೆಂದರು.ನಿವೃತ್ತಿ ಮನುಷ್ಯನ ಹವ್ಯಾಸಗಳನ್ನು ಮತ್ತೆ ಪುನರುದ್ದೀಪನಗೊಳಿಸುವ ಮುನ್ನುಡಿಯಾಗಿದೆ. 60 ವರ್ಷಗಳ ವರೆಗೆ ನಾವು ಮಾಡುತ್ತಿರುವ ಕೆಲಸದಲ್ಲಿ ಮುಳುಗಿರುತ್ತೇವೆ. ಈ ನಿವೃತ್ತಿಯಿಂದ ನಮಗೆ ಬಿಡುಗಡೆ ಸಿಗುತ್ತದೆ. ಆಗ ನಾವು ಕಂಡಿದ್ದ ಕನಸುಗಳನ್ನು ಈಗ ಸಾಕಾರ ಮಾಡಿಕೊಳ್ಳುವ ಸುಯೋಗ ದೊರಕಿದಂತಾಗುತ್ತದೆ. ಇಂತಹ ವೇದಿಕೆಗಳನ್ನು ಬಳಸಿಕೊಂಡು ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಅಭಿರುಚಿಗಳನ್ನು ಬೆಳೆಸಿಕೊಂಡು ಜೀವನವನ್ನು ಆರೋಗ್ಯದಿಂದ ಕಳೆಯಬಹುದು ಎಂದರು.ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಮಾತನಾಡಿ, ಜನಪದ ಸಾಹಿತ್ಯ ಅತ್ಯಂತ ಸೊಗಡಿನಿಂದ ಕೂಡಿದ ಸಾಹಿತ್ಯವಾಗಿದೆ. ಅದನ್ನು ಮಕ್ಕಳಿಗೆ ತಿಳಿಸಿದರೆ ಮುಂದೆ ಅವರು ಜೀವನದಲ್ಲಿ ಹೇಗೆ ಬದುಕಬೇಕೆಂಬುದನ್ನು ಕಲಿಯುತ್ತಾರೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ, ಅಧ್ಯಕ್ಷ ಶಿವಯೋಗಿ ಜಕ್ಕಲಿ ಮಾತನಾಡಿದರು. ಗುರುಪಾದಪ್ಪ ಬೆಲ್ಲದ, ಡಾ. ರಾಜೇಂದ್ರ ಗಚ್ಚಿನಮಠ, ಡಾ. ಲಿಂಗಯ್ಯ ಗೌರಿಮಠ, ಬಸವರಾಜ ಕುರಿ, ಶಿವಪುತ್ರಪ್ಪ ಸಂಗನಾಳ, ವೀರಭದ್ರಪ್ಪ ಕುಂಬಾರ, ಈಶ್ವರ ಬೆಟಗೇರಿ, ಬಿ.ಟಿ. ತಾಳಿ, ಸಂಗಯ್ಯ ಪ್ರಭುಸ್ವಾಮಿಮಠ, ಬಸಪ್ಪ ಉಪ್ಪಿನ, ದೊಡ್ಡಯ್ಯ ಅರವಟಗಿಮಠ ಮುಂತಾದವರಿದ್ದರು. ವೀರಭದ್ರಪ್ಪ ಕೆರಿಯವರ ನಿರೂಪಿಸಿದರು. ಸಂಚಾಲಕ ಜೆ.ಎ. ಪಾಟೀಲ ಸ್ವಾಗತಿಸಿದರು. ಶಿಕ್ಷಕ ಸುರೇಶ ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಹಾದೇವಪ್ಪ ಬೇವಿನಕಟ್ಟಿ ವಂದಿಸಿದರು.